ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

VB–G RAM G Act: ವಿಬಿ ಜಿ ರಾಮ್ ಜಿ ಜಾರಿಯಿಂದ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಧ್ವಂಸ: ಸಿಎಂ ಕಿಡಿ

ವಿಧಾನಸಭಾ ಕಲಾಪದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತಂತೆ ನಡೆದ ಚರ್ಚೆ ವೇಳೆ ಮಂಗಳವಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ವಿಬಿಜಿ ರಾಮ್ ಜಿ ಕಾಯ್ದೆಯ ದುಷ್ಪರಿಣಾಮಗಳೆಂದರೆ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತದೆ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ.

ಬೆಂಗಳೂರು: ವಿಬಿಜಿ ರಾಮ್ ಜಿ ಕಾಯ್ದೆಯನ್ನು (VB–G RAM G Act) ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿ ಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು, ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಎಂಬುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸಭಾ ಕಲಾಪದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತಂತೆ ನಡೆದ ಚರ್ಚೆ ವೇಳೆ ಮಂಗಳವಾರ ಮಾತನಾಡಿದ ಸಿಎಂ ಅವರು, ಮಹಾತ್ಮ ಗಾಂಧಿ ಹೆಸರು ತೆಗೆದುಹಾಕಿ ಅವರಿಗೆ ಪುನಃ ಅವಮಾನ ಮಾಡಬಾರದು. ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಈ ಮನವಿಯನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಹಿಂದೆ ಜಾರಿಯಲ್ಲಿದ್ದ ಮನರೇಗಾ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೆ ಕೆಲಸವಿತ್ತು. ಮನರೇಗಾ ಬರುವ ಮುನ್ನ ಕೆಲಸ ಹುಡುಕಿಕೊಂಡು ಜನ ವಲಸೆ ಹೋಗುತ್ತಿದ್ದರು. ಮನರೇಗಾ ಅಡಿಯಲ್ಲಿ ಬೇಡಿಕೆಗೆ ಅನುಸಾರವಾಗಿ ಕೆಲಸ ಒದಗಿಸಲಾಗುತ್ತಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಆಹಾರ ಭದ್ರತೆ, ಶಿಕ್ಷಣ,ಮಾಹಿತಿ ಹಕ್ಕು, ಅರಣ್ಯ ವಾಸಿಗಳ ಹಕ್ಕು ನೀಡಿದರು. ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಯಿತು.

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಮಕ್ಕಳನ್ನು ಶಾಲೆಗೆ ಕಳುಹಿಸಿ ಕೂಲಿಗೆ ಹೋಗುತ್ತಿದ್ದರು. ವಿಬಿಜಿ ರಾಮ್ ಜಿ ಪ್ರಕಾರ ಕೇಂದ್ರ ಸರ್ಕಾರ ಕೆಲಸ ಎಲ್ಲಿ ನೀಡಬೇಕೆಂದು ತೀರ್ಮಾನಿಸುತ್ತದೆ. ಸಂವಿಧಾನದ 73/74 ತಿದ್ದುಪಡಿಯ ಪ್ರಕಾರ ವಿಕೇಂದ್ರೀಕರಣದಡಿ ಗ್ರಾಮ ಸಭೆಯಲ್ಲಿ ಎಲ್ಲಿ ಕೆಲಸವಾಗಬೇಕೆಂದು ತೀರ್ಮಾನವಾಗುತ್ತಿತ್ತು. ಈಗ ಅದಕ್ಕೆ ತಿಲಾಂಜಲಿ ಇಡಲಾಗಿದೆ.

ಜವಾಹರ್ ಲಾಲ್ ನೆಹರೂ ಅವರು ಒಂದು ಪಂಚಾಯತಿಯಲ್ಲಿ ಒಂದು ಶಾಲೆ, ಪಂಚಾಯತಿ, ಸಹಕಾರ ಸಂಘ ಇರಬೇಕು ಎಂದಿದ್ದರು. ಮಹಾತ್ಮಾ ಗಾಂಧಿಯವರು ಗ್ರಾಮಗಳ ಪ್ರಗತಿಯಾಗದೆ ದೇಶ ಪ್ರಗತಿಯಾಗುವುದಿಲ್ಲ ಎಂದಿದ್ದರು. ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯುತವಾಗಬೇಕು. ಕರ್ನಾಟಕದಲ್ಲಿ 71.18 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ 51% ಗಿಂತ ಹೆಚ್ಚು ಮಹಿಳೆಯರು ಇದ್ದಾರೆ.

ಮನರೇಗಾ ಇಲ್ಲದೇ ಹೋಗಿದ್ದರೆ ಕೋವಿಡ್ 19 ರ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಸಹಾಯವಾಯಿತು. ಈಗ ಗ್ರಾಮ ಸಭೆಯೂ ಇಲ್ಲ, ಪಂಚಾಯತಿ ಪ್ರಕಾರ ತೀರ್ಮಾನವಾಗುವುದಿಲ್ಲ. ಉದ್ಯೋಗಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ಈಗ ವರ್ಷದಲ್ಲಿ 60 ದಿನ ಕೆಲಸವಿಲ್ಲ. ಕೃಷಿ ಚಟುವಟಿಕೆಗಳು ಇದ್ದ ಸಂದರ್ಭದಲ್ಲಿ ಕೆಲಸಗಳಿಲ್ಲ. ಮನರೇಗಾ ಅಡಿಯಲ್ಲಿ ಕೃಷಿ ಚಟುವಟಿಕೆಗಳಿದ್ದಾಗಲೂ ಕೆಲಸ ಮಾಡಬಹುದಾಗಿತ್ತು ಗುತ್ತಿಗೆದಾರರಿಗೆ ನಿಷೇಧವಿತ್ತು ಎಂದು ತಿಳಿಸಿದರು.

ಮನರೇಗಾ ಕಾಯ್ದೆಯಲ್ಲಿ ಗುತ್ತಿಗೆ ಎಂಬ ಪದವೇ ಇಲ್ಲ. ಈಗ ಎಲ್ಲಾ ಗುತ್ತಿಗೆದಾರರು ಪ್ರವೇಶ ಮಾಡಬಹುದಾಗಿದೆ. ಸೇತುವೆ, ಹೆದ್ದಾರಿ, ಮುಂತಾದ ದೊಡ್ಡ ಕೆಲಸಗಳಿಗೆ ಜನ ಹೋಗಬೇಕಾಗುತ್ತದೆ. ಪಂಚಾಯತಿಗಳಿಗೆ ಕೊಟ್ಟಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಮನರೇಗಾ ರದ್ದು ಮಾಡಿ ತಂದಿರುವ ವಿಬಿಜಿ ರಾಮ್ ಜಿ ಕಾಯ್ದೆಯ ದುಷ್ಪರಿಣಾಮಗಳೆಂದರೆ,: ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತದೆ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ.

ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ. ದಲಿತ ಮತ್ತು ಆದಿವಾಸಿಗಳ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ. ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಬದುಕಿಗೆ ಮಾರಕವಾದ ಕಾಯ್ದೆ. ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಪರಿಚ್ಛೇದ 5 ಕಲಂ (1) ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಬಜೆಟ್ ಮಾಡಿದರೆ ಮಾತ್ರ ಕೆಲಸ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿಕಾರರ ಕೆಲಸ ಕಿತ್ತುಕೊಂಡಂತಾಗಿದೆ. 125 ದಿನ ಕೊಡುವುದಾಗಿ ಹೇಳಲಾಗಿದೆ. 60: 40 ಅನುದಾನದ ಅನುಪಾತ ಮಾಡಿರುವುದು ಕೇಂದ್ರ ಪುರಸ್ಕೃತ ಯೋಜನೆಯಂತಿದೆ.

ಪ್ರಧಾನಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರು ತೆಗೆದುಹಾಕಲು ಈಗ ಜ್ಞಾನೋದಯವಾಗಿದೆಯೇ? ಮನರೇಗಾ ಅಡಿ ಪ್ರತಿ ಪಂಚಾಯತಿಗೆ ಕನಿಷ್ಠ 1 ಕೋಟಿವರೆಗೂ ಕೆಲಸ ನೀಡಬಹುದಾಗಿತ್ತು. ಈಗ ಅದಕ್ಕೆ ಅವಕಾಶವಿಲ್ಲ ಏಕೆಂದರೆ ಅನೇಕ ರಾಜ್ಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡಬೇಕಾದ ಅನುದಾನ ಕೊಡುವುದಿಲ್ಲ. ಹಣಕಾಸು ಆಯೋಗ ಶಿಫಾರಸು ಮಾಡಿದ ಅನುದಾನವನ್ನೂ ಬಿಡುಗಡೆ ಮಾಡುವುದಿಲ್ಲ.

15 ನೇ ಹಣಕಾಸು ಆಯೋಗದ ವತಿಯಿಂದ ರಾಜ್ಯಕ್ಕೆ 15,000 ಕೋಟಿ ನಷ್ಟವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಂದಿನವರೆಗೂ ಅನುದಾನ ಕೊಟ್ಟಿಲ್ಲ. ಇದಕ್ಕೆ ಯಾವ ಬಳಕೆ ಪ್ರಮಾಣ ಪತ್ರವನ್ನು ನೀಡಬೇಕು?

ಪ್ರತಿ ಗ್ರಾಮವೂ ಯೋಜನೆಯನ್ನು ಜಾರಿ ಮಾಡಬಹುದಾಗಿತ್ತು. ಈಗ ವರ್ಷದ 10 ತಿಂಗಳು ಮಾತ್ರ ಕೆಲಸ ಮಾಡಬಹುದು. ಕೂಲಿಯ ಮೊತ್ತವನ್ನು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಕೊಡಲಾಗುತ್ತಿತ್ತು. ಕೂಲಿಯನ್ನು ಬೆಲೆಯೇರಿಕೆಗೆ ಸರಿದೂಗಿಸಲಾಗುತ್ತಿತ್ತು. ಈಗಿನ ಕಾಯ್ದೆ ಪ್ರಕಾರ ಕೂಲಿಗೆ ಯಾವುದೇ ಖಾತ್ರಿ ಇಲ್ಲ. ಗ್ರಾಮ ಪಂಚಾಯಿತಿಗೆ ನೀಡುವ ಅನುದಾನದ ಮೇಲೆ ನಿರ್ಧಾರವಾಗುತ್ತದೆ. ಕೂಲಿಯನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಕೇಂದ್ರ ಸರ್ಕಾರ 60 ರಷ್ಟು ಹಾಗೂ ರಾಜ್ಯ ಸರ್ಕಾರ ನಲವತ್ತರಷ್ಟು ಅನುದಾನ ನೀಡಬೇಕೆಂದಿದೆ.

ಈಗ ಅನೇಕ ರಾಜ್ಯಗಳು ಅನುದಾನದ ಕೊರತೆಯನ್ನು ಎದುರಿಸುತ್ತಿವೆ. ಈಗಿನ ಪ್ರಧಾನಿಗಳು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ಶೇ. 50ರಷ್ಟು ನೀಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳಾಗಿದ್ದಾಗ ಒಂದು ನಿಲುವು, ಪ್ರಧಾನಿಗಳಾದಾಗ ಮತ್ತೊಂದು ನಿಲುವೇ? ಎಂದು ಪ್ರಶ್ನಿಸಿದರು.

ಮನರೇಗಾದಲ್ಲಿ ಆಸ್ತಿ ಸೃಷ್ಟಿಸುವ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಕಾಯ್ದೆ ಅಡಿ ಸರಬರಾಜು (supply based) ಆಧಾರಿತ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಬಿಜಿ ಗ್ರಾಮ್ ಜಿ ಜಾರಿಗೆ ತಂದು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ. ಇವು ಮನರೇಗಾ ಮತ್ತು ವಿಬಿಜಿ ರಾಮ್ ಜಿ ಕಾಯ್ದೆಗೆ ಇರುವ ವ್ಯತ್ಯಾಸಗಳು ಎಂದು ಹೇಳಿದರು.

2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮನರೇಗಾ ಅಡಿ 31.54 ಲಕ್ಷ ಕುಟುಂಬಗಳಿಗೆ ಕೆಲಸ ಒದಗಿಸಲಾಗಿದೆ. 13.24 ಕೋಟಿ ಮಾನವ ದಿನಗಳ ಸೃಜನೆಯಾಗಿದ್ದು , ದುಡಿಯೋಣ ಬಾ, ಕೃಷಿ ಹೊಂಡ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಯವರು ಕೂಡ ಮನ ರೇಗಾ ಯೋಜನೆಗೆ ಹೆಚ್ಚಿನ ಒತ್ತು ನೀಡಿರುವ ಬಗ್ಗೆ ಹೇಳಿದ್ದು, ಈಗ ಇದ್ದಕ್ಕಿಂದ್ದಂತೆ ರದ್ದು ಮಾಡಲಾಗಿದೆ.

ವಿಬಿಜಿ ರಾಮ್ ಜಿ ಯೋಜನೆಯಿಂದ ಉದ್ಯೋಗವಿಲ್ಲದೆ ಗ್ರಾಮೀಣ ಜನರು ಈಗ ವಲಸೆ ಹೋಗಲು ಪ್ರಾರಂಭಿಸಿದ್ದು, ಗ್ರಾಮೀಣ ಜನರ ಬದುಕನ್ನು ಕಸಿದುಕೊಳ್ಳುವ ಕೆಲಸವಾಗಿದೆ. ಸಾಂವಿಧಾನಿಕ ಹಕ್ಕನ್ನು ಗ್ರಾಮೀಣ ಜನರಿಂದ ಕಸಿದುಕೊಳ್ಳಲಾಗಿದೆ. ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯಗಳೊಂದಿಗೆ ಚರ್ಚೆಯಾಗಿಲ್ಲ. 60: 40 ಅನುದಾನದ ಅನುಪಾತ ತರುವ ಮುನ್ನ ಚರ್ಚೆಯಾಗಬೇಕಿತ್ತು.

ವಿಬಿ ಜಿ ರಾಮ್‌ ಜಿ ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸಲು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಮಹಿಳೆಯರು, ಆದಿವಾಸಿಗಳು, ಸಣ್ಣ ರೈತರು, ಆದಿವಾಸಿಗಳಿಗೆ ಆರ್ಥಿಕವಾಗಿ ಶಕ್ತಿ ಬರಬಾರದು ಎಂದು ಮನಸ್ಮೃತಿ ಹೇಳುತ್ತದೆ. ಮನಸ್ಫೂರ್ತಿ ಪ್ರಕಾರ ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸೇವಕರಾಗಿ ಉಳಿಯುವುದಿಲ್ಲ ಎಂದು ಹೇಳಿದರು.