ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwakarma Jayanti: ವಿಶ್ವಕರ್ಮ ಜಯಂತಿ: ಕೇವಲ ಆಚರಣೆಯಲ್ಲ, ಶ್ರಮ ಸಂಸ್ಕೃತಿಯ ನಿರಂತರ ಜಾಗೃತಿ: ಡಾ.ಬಿ.ಎಂ.ಉಮೇಶ್ ಕುಮಾರ್

ಭಗವಾನ್ ವಿಶ್ವಕರ್ಮನು ಜಗತ್ತಿನ ಆದಿ ವಾಸ್ತುಶಿಲ್ಪಿ, ದೇವಶಿಲ್ಪಿ ಮತ್ತು ಸಮಸ್ತ ಕರಕುಶಲತೆಗಳ ಹಾಗೂ ತಂತ್ರಜ್ಞಾನದ ಮೂಲಾಧಾರ. ವೇದಗಳ ಕಾಲದಿಂದಲೂ ವಿಶ್ವಕರ್ಮ ನನ್ನು ಸೃಷ್ಟಿಯ ಅದ್ಭುತ ಶಕ್ತಿ ಎಂದು ಕೊಂಡಾಡಲಾಗಿದೆ. ವಿಶ್ವಕರ್ಮ ಜಯಂತಿಯನ್ನು ಮುಖ್ಯ ವಾಗಿ ಶ್ರಮ, ಕೌಶಲ್ಯ ಮತ್ತು ಸೃಷ್ಟಿಶೀಲತೆಯ ಮಹತ್ವವನ್ನು ಸಮಾಜಕ್ಕೆ ಸಾರಲು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.

ಬೆಂಗಳೂರು: ಭಗವಾನ್ ವಿಶ್ವಕರ್ಮನು ಜಗತ್ತಿನ ಆದಿ ವಾಸ್ತುಶಿಲ್ಪಿ, ದೇವಶಿಲ್ಪಿ ಮತ್ತು ಸಮಸ್ತ ಕರಕುಶಲತೆಗಳ ಹಾಗೂ ತಂತ್ರಜ್ಞಾನದ ಮೂಲಾಧಾರ. ವೇದಗಳ ಕಾಲದಿಂದಲೂ ವಿಶ್ವಕರ್ಮ ನನ್ನು ಸೃಷ್ಟಿಯ ಅದ್ಭುತ ಶಕ್ತಿ ಎಂದು ಕೊಂಡಾಡಲಾಗಿದೆ. ವಿಶ್ವಕರ್ಮ ಜಯಂತಿಯನ್ನು ಮುಖ್ಯ ವಾಗಿ ಶ್ರಮ, ಕೌಶಲ್ಯ ಮತ್ತು ಸೃಷ್ಟಿಶೀಲತೆಯ ಮಹತ್ವವನ್ನು ಸಮಾಜಕ್ಕೆ ಸಾರಲು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.

ಈ ದಿನದಂದು ಕಾರ್ಖಾನೆಗಳಲ್ಲಿ, ಕಾರ್ಯಾಗಾರಗಳಲ್ಲಿ, ಕಮ್ಮಾರಿಕೆ, ಬಡಗಿತನ, ಶಿಲ್ಪಕಲೆ ಮತ್ತು ಸ್ವರ್ಣಗಾರಿಕೆಯಂತಹ ಕುಲಕಸುಬುಗಳ ನಿರ್ವಹಣೆಯ ಸ್ಥಳಗಳಲ್ಲಿ ಯಂತ್ರಗಳಿಗೆ ಹಾಗೂ ಉಪಕರಣಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಬದುಕನ್ನು ಸುಗಮಗೊಳಿಸುವ ತಂತ್ರಜ್ಞಾನ, ಕಣ್ಣಿಗೆ ಮುದನೀಡುವ ಅದ್ಭುತ ಕಲಾಕೃತಿಗಳು ಮತ್ತು ಅದನ್ನು ಹಗಲಿರುಳು ಶ್ರಮಿಸಿ ರೂಪಿಸುವ ಕಾರ್ಮಿಕರ ಬೆವರಿಗೆ ಕೃತಜ್ಞತೆ ಸಲ್ಲಿಸುವುದೇ ಈ ಆಚರಣೆಯ ಹಿಂದಿರುವ ಪ್ರಮುಖ ಉದ್ದೇಶ.

ಆದರೆ, ಇಂದಿನ ದಿನಮಾನದಲ್ಲಿ ವಿಶ್ವಕರ್ಮ ಜಯಂತಿ ಕೇವಲ ಸೆಪ್ಟೆಂಬರ್ ತಿಂಗಳ ಒಂದು ದಿನದ ಆಚರಣೆಗೆ, ಯಂತ್ರಗಳಿಗೆ ಹೂವು ಏರಿಸಿ, ಕುಂಕುಮ ಹಚ್ಚಿ ಪೂಜೆ ಮಾಡುವುದಕ್ಕೆ ಮಾತ್ರ ಸೀಮಿತ ವಾಗಬಾರದು. ನಾವು ಕೇವಲ ಒಂದು ದಿನ ಜಡ ಉಪಕರಣಗಳಿಗೆ ಪೂಜೆ ಮಾಡಿ, ಉಳಿದ ದಿನಗಳಲ್ಲಿ ಆ ಉಪಕರಣಗಳನ್ನು ಹಿಡಿದು ಜೀವ ಸವೆಸುವ ಕರಕುಶಲಕರ್ಮಿಗಳನ್ನು, ಕಾರ್ಮಿಕರನ್ನು ನಿರ್ಲಕ್ಷಿಸಿದರೆ ಆ ಪೂಜೆಗೆ ಖಂಡಿತವಾಗಿಯೂ ಯಾವುದೇ ಅರ್ಥವಿರುವುದಿಲ್ಲ. ಯಂತ್ರವನ್ನು ಪೂಜಿಸುವ ಕೈಗಳು, ಯಂತ್ರವನ್ನು ನಡೆಸುವ ಮಾನವನ ಬದುಕಿಗೂ ಮಿಡಿಯಬೇಕಿದೆ.

ಇದನ್ನೂ ಓದಿ: Vishwakarma: ಜನವರಿ 6ರಂದು ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ

ನಿಜವಾದ ವಿಶ್ವಕರ್ಮ ಜಯಂತಿಯ ಆಚರಣೆ ಎಂದರೆ: ವರ್ಷದ 365 ದಿನಗಳೂ ಕಾಯಕ ಪೂಜೆ: ಕೇವಲ ಹಬ್ಬದ ದಿನ ಮಾತ್ರವಲ್ಲದೆ, ವರ್ಷದ ಮುನ್ನೂರ ಅರವತ್ತೈದೂ ದಿನಗಳೂ ಕಾಯಕವನ್ನು ಪೂಜಿಸುವ, ದುಡಿಯುವ ವರ್ಗವನ್ನು ಗೌರವಿಸುವ ಮನೋಭಾವ ನಮ್ಮದಾಗ ಬೇಕು. ಕಸುಬುದಾರನ ಬೆವರಿಗೆ ಹಾಗೂ ಕೌಶಲ್ಯಕ್ಕೆ ಸೂಕ್ತ ಬೆಲೆ ಕೊಡುವ ಮೂಲಕ ಆತನ ಶ್ರಮದ ಘನತೆಯನ್ನು ಸದಾ ಎತ್ತಿ ಹಿಡಿಯಬೇಕು.

ಕಸುಬುದಾರರಿಗೆ ಆರ್ಥಿಕ ರಕ್ಷಣೆ ಮತ್ತು ಪ್ರೋತ್ಸಾಹ: ಬೃಹತ್ ಯಾಂತ್ರೀಕರಣದ ಭರಾಟೆಯಲ್ಲಿ ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಕಲೆಗಳನ್ನು ನಂಬಿಕೊಂಡಿರುವ ಮರಗೆಲಸ, ಶಿಲ್ಪಕಲೆ, ಅಕ್ಕಸಾಲಿಗ, ಕಮ್ಮಾರ ಮುಂತಾದ ವಿಶ್ವಕರ್ಮ ಸಮುದಾಯದ ಕಸುಬುದಾರರಿಗೆ ನಿರಂತರ ಪ್ರೋತ್ಸಾಹ ಮತ್ತು ಆರ್ಥಿಕ ಭದ್ರತೆ ಸಿಗುವಂತಾಗಬೇಕು. ಅವರ ಕರಕುಶಲ ವಸ್ತುಗಳಿಗೆ ಯೋಗ್ಯ ಮಾರುಕಟ್ಟೆ ಹಾಗೂ ಬೆಂಬಲ ಕಲ್ಪಿಸಿಕೊಡುವ ಜವಾಬ್ದಾರಿ ಸಮಾಜದ ಮೇಲಿದೆ.

ಪರಂಪರೆ ಮತ್ತು ಆಧುನಿಕತೆಯ ಬೆಸೆಯುವಿಕೆ: ಕೇವಲ ಪೂಜೆಗಷ್ಟೇ ಸೀಮಿತವಾಗದೆ, ಸಾವಿರಾರು ವರ್ಷಗಳಿಂದ ಹರಿದುಬಂದ ನಮ್ಮ ಪ್ರಾಚೀನ ಕೌಶಲ್ಯ ಮತ್ತು ಇಂದಿನ ಆಧುನಿಕ ತಂತ್ರಜ್ಞಾನವನ್ನು ಮೇಳೈಸಿ ಮುಂದಿನ ಯುವಪೀಳಿಗೆಗೆ ಆ ಜ್ಞಾನವನ್ನು ದಾಟಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇದರಿಂದ ನಮ್ಮ ಯುವಜನತೆಯೂ ಈ ಕಲೆಗಳತ್ತ ಆಕರ್ಷಿತ ರಾಗಲು ಸಾಧ್ಯ.

ವಿಶ್ವಕರ್ಮ ಆಚರಣೆಯು ಕೇವಲ ಕ್ಯಾಲೆಂಡರಿನ ಒಂದು ದಿನದ ಹಬ್ಬವಾಗದೆ, ಸೃಷ್ಟಿಶೀಲತೆ, ಕೌಶಲ್ಯ ಮತ್ತು ಕಾರ್ಮಿಕರ ಬೆವರನ್ನು ಸದಾ ಬೆಂಬಲಿಸುವ ಒಂದು ನಿರಂತರ ಜೀವನಮೌಲ್ಯ ವಾಗಿ, ಸಂಸ್ಕೃತಿಯಾಗಿ ಬದಲಾಗಬೇಕಿದೆ. ಕಲೆ ಮತ್ತು ಕಲಾವಿದರನ್ನು ಪ್ರತಿನಿತ್ಯವೂ ಆರಾಧಿಸು ವುದೇ, ಶ್ರಮಿಕನ ಮೊಗದಲ್ಲಿ ಮಂದಹಾಸ ಮೂಡಿಸುವುದೇ ಭಗವಾನ್ ವಿಶ್ವಕರ್ಮನಿಗೆ ನಾವು ಸಲ್ಲಿಸುವ ಅತಿ ದೊಡ್ಡ ನಮನ ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಬಿ. ಎಂ. ಉಮೇಶ್ ಕುಮಾರ್ ಅಭಿಪ್ರಾಯಪಟ್ಟರು.