ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಸದ್ದು ಜೋರಾದ ಸಮಯದಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಕುಮಾರ್, ಕೆಪಿಸಿಸಿ (KPCC) ತಮ್ಮ ಹುದ್ದೆಗೆ ರಾಜಿನಾಮೆ ನೀಡುವ ಸುಳಿವನ್ನು ನೀಡಿದ್ದು ಕಾರ್ಯಕರ್ತರಲ್ಲಿ ಆತಂಕ ಮೂಡಿದೆ. ನಾನು ಆ ಹುದ್ದೆಯನ್ನು ಶಾಶ್ವತವಾಗಿ ಹೊಂದಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷಗಳು ಕಳೆದಿವೆ ಮತ್ತು ಮಾರ್ಚ್ನಲ್ಲಿ ಆರು ವರ್ಷಗಳು ತುಂಬಲಿವೆ ಎಂದು ಹೇಳಿದರು.
ನಾನು ಎಲ್ಲಿರ್ತಿನಿ ಅನ್ನೋದು ಮುಖ್ಯ ಅಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಉದ್ದೇಶ. ಪವರ್ ವಿಚಾರ ಮುಖ್ಯ ಅಲ್ಲ. ಶ್ರಮಕ್ಕೆ ಫಲ ಸಿಗುತ್ತದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲ ಇದೆ ಎಂದು ಹೇಳಿದ್ದಾರೆ. ರಾಜಿನಾಮೆಯ ಸುಳಿವು ನೀಡಿ, ನಾನು ಇಲ್ಲಿ ಪರ್ಮನೆಂಟ್ ಆಗಿ ಇರೋದಕ್ಕೆ ಆಗಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಐದೂವರೆ ವರ್ಷ ಆಯ್ತು ಆಗ್ಲೆ, ಸ್ವಲ್ಪ ದಿನಕ್ಕೆ ಆರು ವರ್ಷ ಆಗತ್ತೆ. ಡಿಸಿಎಂ ಆದ ತಕ್ಷಣವೇ ಬಿಡಬೇಕು ಅಂತಿದ್ದೆ ಎಂದು ಡಿಕೆಶಿ ತ್ಯಾಗದ ಮಾತಾಡಿದ್ದಾರೆ.
ನನ್ನ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ತೆರೆಯಬೇಕೆಂದು ನಾನು ಬಯಸುತ್ತೇನೆ. ನಾನು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಈ ಜವಾಬ್ದಾರಿಯನ್ನು ತ್ಯಜಿಸಲು ಬಯಸಿದ್ದೆ. ಆದರೆ ರಾಹುಲ್ ಗಾಂಧಿ ಮತ್ತು (ಕಾಂಗ್ರೆಸ್ ಮುಖ್ಯಸ್ಥ) ಮಲ್ಲಿಕಾರ್ಜುನ ಖರ್ಗೆ ನನ್ನನ್ನು ಮುಂದುವರಿಯಲು ಕೇಳಿಕೊಂಡರು. ಹಾಗಾಗಿ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದು ಹೇಳಿದರು.
ನಾಯಕರಿಗೆ ಎಚ್ಚರಿಕೆ
ಕೆಲವರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ. ಪಕ್ಷ ಕಚೇರಿ ಅಂದ್ರೆ ದೇವಸ್ಥಾನವಿದ್ದಂತೆ. ಯಾರೂ 100 ಕೆಪಿಸಿಸಿ ಕಟ್ಟಡ ಕಟ್ಟಲು ಆಸಕ್ತಿ ವಹಿಸಲ್ಲ ಅಂಥವರ ಪಟ್ಟಿಯನ್ನ ನಾನು ಹೈಕಮಾಂಡ್ಗೆ ನೀಡುತ್ತೇನೆ. ಅವರಿಗೆಲ್ಲ ನಾನು ಉತ್ತರ ಕೊಡೋದಕ್ಕೆ ಹೋಗಲ್ಲ, ಎಲ್ಲದಕ್ಕೂ ದೆಹಲಿಯವರೇ ಉತ್ತರ ಕೊಡ್ತಾರೆ. ಯಾರು ಪಕ್ಷದ ಕೆಲಸಕ್ಕೆ ಆಸಕ್ತಿ ವಹಿಸಲ್ಲ ಅವರಿಗೆ ದೆಹಲಿ ನಾಯಕರು ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡ್ತಾರೆ ಎಂದು ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸಂಪುಟ ಪುನರ್ ರಚನೆ ಕುರಿತು ಮಾತನಾಡಿದ ಡಿಕೆಶಿ, ಕಷ್ಟಪಟ್ಟು ಕೆಲಸ ಮಾಡುವವರಿಗೆ ಆಕಾಂಕ್ಷೆಗಳಿರುತ್ತವೆ. ಅದು ತಪ್ಪು ಎಂದು ನಾವು ಹೇಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಿಎಂ ಬದಲಾವಣೆ ವಿಷಯದ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.