ಬೆಂಗಳೂರು, ಜ. 18: ಇತ್ತೀಚೆಗೆ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ರಸ್ತೆ ಮಧ್ಯೆ ರೀಲ್ಸ್, ಅಪಾಯಕಾರಿ ಸ್ಟಂಟ್ ಮಾಡುವುದು ಇತ್ಯಾದಿ ವರ್ತನೆಗಳು ಮಿತಿಮೀರಿ ಹೋಗಿವೆ. ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಕೂಡ ಇಂತಹ ಸಾಹಸಗಳು ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಕಾರು ಚಾಲಕನಿಗೆ ಚಾಕು ಹಿಡಿದು ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಜನವರಿ 16ರಂದು ಸಂಜೆ ವೈಟ್ಫೀಲ್ಡ್ ಸಮೀಪದ ನೆಕ್ಸಸ್ ಶಾಂತಿನಿಕೇತನ ಮಾಲ್ ಮುಂಭಾಗದಲ್ಲಿ ಈ ಘಟನೆ ಕಂಡು ಬಂದಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಬೆಂಗಳೂರಿನಲ್ಲಿ ನಡೆದ ಈ ಆಘಾತಕಾರಿ ಘಟನೆ ರಸ್ತೆಗಳಲ್ಲಿ ಸುರಕ್ಷತೆಯ ಬಗ್ಗೆ ಕಳವಳವನ್ನು ಮೂಡಿಸಿದೆ. ಜನವರಿ 16ರ ಸಂಜೆ 6 ಗಂಟೆ ಸುಮಾರಿಗೆ ನೆಕ್ಸಸ್ ಶಾಂತಿನಿಕೇತನ ಮಾಲ್ ಬಳಿ ವಾಹನಗಳನ್ನು ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಎ-53 ಜೆಬಿ-3274 (KA53JB3274) ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬಂದ ಸವಾರನೊಬ್ಬ ಹೆಲ್ಮೆಟ್ ಧರಿಸದೆ, ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತ ಗಾಡಿ ಚಲಾಯಿಸುತ್ತಿದ್ದ ಎನ್ನಲಾಗಿದೆ.
ವಿಡಿಯೊ ನೋಡಿ:
ದ್ವಿಚಕ್ರ ವಾಹನ ಸವಾರನೊಬ್ಬ ಲೇನ್ ಉಲ್ಲಂಘಿಸುವುದು, ನಡು ರಸ್ತೆಯಲ್ಲೇ ಸಾಹಸ ಮಾಡುವುದು, ಸಂಚಾರ ನಿಯಮಗಳನ್ನು ಮೀರುತ್ತಿರುವುದು ಮತ್ತು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು ಕಂಡು ಬಂದಿದೆ. ಅವನು ರಸ್ತೆಯಲ್ಲಿ ಚಾಲಕನನ್ನು ನಿಂದಿಸುತ್ತಿರುವುದನ್ನು ಮತ್ತು ಬೆದರಿಸುತ್ತಿರುವುದನ್ನು ಸಹ ಕಾಣಬಹುದು. ಈ ವರ್ತನೆಯನ್ನು ಕಾರು ಚಾಲಕ ಪ್ರಶ್ನಿಸಿದಾಗ, ಸವಾರ ಏಕಾಏಕಿ ಬಂದು ತನ್ನ ಪ್ಯಾಂಟ್ನ ಹಿಂಭಾಗದಲ್ಲಿ ಬಚ್ಚಿಟ್ಟುಕೊಂಡಿದ್ದ ದೊಡ್ಡ ಚಾಕುವನ್ನುಹೊರತೆಗೆದು ಧಮ್ಕಿ ಹಾಕಿದ್ದಾನೆ. ಬಳಿಕ ನಡುರಸ್ತೆಯಲ್ಲೇ ಚಾಕು ಹಿಡಿದು ಚಾಲಕನನ್ನು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್ ಕೊಟ್ಟ ಹಿಂದೂ ವ್ಯಕ್ತಿ!
ಈ ಘಟನೆಯು ಅನೇಕರ ಆಘಾತ ಮತ್ತು ಕೋಪಕ್ಕೆ ಕಾರಣವಾಗಿದೆ. ನೆಟ್ಟಿಗರು ಈಗ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೀಗ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು ಆತನನ್ನು ಅರ್ಬಾಜ್ ಖಾನ್ ಎಂದು ಗುರುತಿಸಲಾಗಿದೆ. ಶೀಘ್ರದಲ್ಲೇ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ಎಂದು ಭರವಸೆ ನೀಡಿದ್ದಾರೆ.