ಬೆಂಗಳೂರು, ಆ. 6: ಯುವತಿಯೊಬ್ಬರು ಕಚೇರಿಗೆ ತೆರಳಲು ಬೆಂಗಳೂರಿನಿಂದ ರ್ಯಾಪಿಡೋ (Rapido) ಬುಕ್ ಮಾಡಿದ್ದರು. ಆದರೆ ರೈಡರ್ ಅಜಾಗರೂಕತೆಯಿಂದ ವೇಗವಾಗಿ ತೆರಳಿದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಿಂದ ಯುವತಿ ರಸ್ತೆಗೆ ಬಿದ್ದಿದ್ದು ಟ್ರಾಕ್ಟರ್ ವೊಂದು ಅವರ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆ ಯುತ್ತಿದ್ದಾರೆ. ಆದರೆ ರ್ಯಾಪಿಡೋ ಸಂಸ್ಥೆ ಮಾತ್ರ ಯಾವುದೇ ವೈದ್ಯಕೀಯ ವೆಚ್ಚ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.
ಕೇರಳಂನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬೈರಸಂದ್ರದಲ್ಲಿರುವ ತಮ್ಮ ನಿವಾಸದಿಂದ ದೊಮ್ಮಲೂರಿನ ಕಚೇರಿಗೆ ಬೆಳಗ್ಗಿನ ಸಮಯ ರ್ಯಾಪಿಡೋ ಬುಕ್ ಮಾಡಿದ್ದರು. ಪ್ರಯಾಣ ಆರಂಭವಾಗಿ ಒಂದು ಕಿಲೋ ಮೀಟರ್ ಅಂತರದಲ್ಲಿ ರ್ಯಾಪಿಡೋ ಸವಾರ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಹಿಂದಿಕ್ಕಲು ಪ್ರಯತ್ನಿಸಿದ್ದಾನೆ. ಇದರಿಂದಾಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಟ್ರ್ಯಾಕ್ಟರ್ ಯುವತಿಯ ಮೇಲೆ ಹರಿದಿದ್ದು ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೊದಲು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಇದೀಗ ಕೇರಳಂನ ಕೋಝಿಕ್ಕೋಡ್ನಲ್ಲಿರುವ ಮಿತ್ರಾಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ತೀವ್ರ ಅಪಘಾತದಿಂದಾಗಿ ಪಕ್ಕೆಲುಬುಗಳು ಮುರಿತಕ್ಕೊಳಗಾಗಿದ್ದು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಶ್ವಾಸಕೋಶ ಹಾಗೂ ಪಿತ್ತಜನಕಾಂಗಕ್ಕೆ ತೀವ್ರ ಹಾನಿಯಾಗಿದೆ.
ಅಪಘಾತದ ಎರಡು ವಾರಗಳ ನಂತರವೂ ಸಾನಿ ಕೃಷ್ಣ ಹಾಸಿಗೆ ಹಿಡಿದಿದ್ದಾರೆ. ಈಗಾಗಲೇ ಅವರ ವೈದ್ಯಕೀಯ ವೆಚ್ಚಗಳು 20 ಲಕ್ಷ ರುಪಾಯಿ ದಾಟಿದೆ. ಆದರೆ ಬೈಕ್ ಟ್ಯಾಕ್ಸಿ ಸಂಸ್ಥೆ ರ್ಯಾಪಿಡೋ ತಮ್ಮನ್ನು ಕೈಬಿಟ್ಟಿದೆ ಎಂದು ಅಪಘಾತಕ್ಕೆ ಒಳಗಾದ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೊ ನೋಡಿ:
ಇನ್ಸ್ಟಾಗ್ರಾಮ್ನಲ್ಲಿ ಯುವತಿ ವಿಡಿಯೊ ಶೇರ್ ಮಾಡಿಕೊಂಡಿದ್ದು, ರ್ಯಾಪಿಡೋ ಜಾಹೀರಾತುಗಳಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಚಾರ ಮಾಡಿದರೂ ಬೆಂಬಲಕ್ಕೆ ನಿಲ್ಲಲು ಹಿಂಜರಿದಿದೆ ಎಂದು ದೂರಿದ್ದಾರೆ. ತನ್ನ ಒಂಬತ್ತು ಪಕ್ಕೆಲುಬುಗಳನ್ನು ಮುರಿದಿದೆ. ಮುಖದ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯ ಬಿಲ್ ಈಗಾಗಲೇ 20 ಲಕ್ಷ ರುಪಾಯಿ ದಾಟಿದೆ ಎಂದಿದ್ದಾರೆ.
ಪೊಲೀಸ್ ಬೈಕ್ನಲ್ಲಿ ರ್ಯಾಪಿಡೋ ಸೇವೆ; ಸಬ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮ
ಆದರೆ ರ್ಯಾಪಿಡೋ ಸಂಸ್ಥೆ ಯಾವುದೇ ನೆರವು ನೀಡಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ನೋಟಿಸ್ ಕಳುಹಿಸಿದರೂ ಕಂಪನಿ ಕೇವಲ ಇಮೇಲ್ ಆಧಾರಿತ ಇನ್ಶೂರೆನ್ಸ್ ಪ್ರಕ್ರಿಯೆಗೆ ಸೂಚಿಸಿದೆಯೇ ಹೊರತು ಯಾವುದ ನೆರವು ನೀಡಿಲ್ಲ. ರ್ಯಾಪಿಡೋ ಸುರಕ್ಷತಾ ಖಾತರಿಯು ಮಾರ್ಕೆಟಿಂಗ್ ಮೂಲಗಳು ಸುಳ್ಳು, ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ತಿಳಿಸಿದೆ.
ʼʼಈ ಘಟನೆಗೆ ಸಂಬಂಧಿಸಿದಂತೆ ನಾವು ಸಂತ್ರಸ್ತೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಬದ್ಧʼʼ ಎಂದು ರ್ಯಾಪಿಡೋ ಸಂಸ್ಥೆ ಹೇಳಿಕೆ ನೀಡಿದೆ. ಆದಾಗ್ಯೂ, ಸಾನಿ ಅವರ ಕುಟುಂಬವು ಇಲ್ಲಿಯವರೆಗೆ ಯಾವುದೇ ಆರ್ಥಿಕ ನೆರವು ಅಥವಾ ಪರಿಹಾರವನ್ನು ನೀಡಿಲ್ಲ ಎಂದು ದೂರಿದೆ.
ಈ ಘಟನೆಯು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕಿಡಿಕಾರಿದ್ದಾರೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.