ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ 2025ರ (Bihar Assembly Election) ಮತ ಎಣಿಕೆ ಅಂತಿಮ ಘಟ್ಟದಲ್ಲಿದ್ದು, ಎನ್ಡಿಎ ಆರಂಭದಿಂದಲೇ ಮುನ್ನಡೆ ಕಾಯ್ದುಕೊಡು ಬರುತ್ತಿದೆ. ಮ್ಯಾಜಿಕ್ ನಂಬರ್ ದಾಟಿದೆ. ಎನ್ಡಿಎ (NDA) ಸ್ಪಷ್ಟ ಬಹುಮತದಿಂದ ಗೆಲುವು (Bihar Election Result 2025) ಸಾಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದ್ದು, ಎನ್ಡಿಎ ಯಾಕೆ ಗೆದ್ದಿದೆ ನೋಡಬೇಕಿದೆ ಎಂದಿದ್ದಾರೆ.
ಎನ್ಡಿಎ ಯಾಕೆ ಮುನ್ನಡೆ ಸಾಧಿಸಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಇನ್ನೂ ಪೂರ್ತಿ ಚಿತ್ರಣ ನನಗೆ ಸಿಕ್ಕಿಲ್ಲ. ಎನ್ಡಿಎ ಗೆದ್ದಿದೆಯಾ, ಕಾಂಗ್ರೆಸ್ ಸೋತಿದೆಯಾ ಎಂಬ ಚಿತ್ರಣ ಸಿಗಬೇಕಿದೆ. ಅಲ್ಲಿ ವೋಟ್ ಚೋರಿ ನಡೆದಿರುವ ಆರೋಪ ಇದೆ. ಫಲಿತಾಂಶ ಪೂರ್ತಿಯಾದ ಬಳಿಕ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪೂರ್ತಿ ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಸೋಲು ಒಪ್ಪಿಕೊಂಡಂತೆ ಮಾತನಾಡುತ್ತಿದ್ದು, ಮಹಾಘಟಬಂಧನ್ ಸರಕಾರ ರಚಿಸುವ ಸಾಧ್ಯತೆಯ ಬಗ್ಗೆ ಯಾವುದೇ ಭರವಸೆ ವ್ಯಕ್ತಪಡಿಸಿರುವುದು ಕಂಡುಬಂದಿಲ್ಲ. 243 ಸ್ಥಾನಗಳಲ್ಲಿ ಎನ್ಡಿಎ (ಬಿಜೆಪಿ + ಜೆಡಿ(ಯು)) 170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಮಹಾಘಟಬಂಧನ್ (ಆರ್ಜೆಡಿ + ಕಾಂಗ್ರೆಸ್ + ಇತರರು) ಕೇವಲ 60ರ ಒಳಗೆ ಸೀಮಿತವಾಗಿದೆ. ಕಾಂಗ್ರೆಸ್ಗೆ ಇದು ದೊಡ್ಡ ಆಘಾತವಾಗಿದ್ದು, ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಮುಂದಾಗಿದ್ದಾರೆ.
ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮ್ಯಾಜಿಕ್ ನಂಬರ್ ದಾಟಿ ತುಂಬಾ ಮುಂದೆ ಸಾಗಿದೆ. ಇದು ಮಹಾಘಟಬಂಧನ್ಗೆ ಮಹಾ ಆಘಾತ ನಡಿದೆ. ಈ ಬಗ್ಗೆ ಇದಾಗಲೇ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದು, ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಇನ್ನೇನು ಊಹಿಸಲು ಸಾಧ್ಯ ಎಂದು ವೋಟ್ ಚೋರಿ ಬಗ್ಗೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Bihar Election Result 2025: " ಟೈಗರ್ ಜಿಂದಾ ಹೇ" ಬಿಹಾರದ ರಸ್ತೆಗಳಲ್ಲಿ ರಾರಾಜಿಸುತ್ತಿವೆ ನಿತೀಶ್ ಕುಮಾರ್ ಪೋಸ್ಟರ್
ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರ X ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಅವರು “65 ಲಕ್ಷ ಮತದಾರರ ಹೆಸರು ಅಳಿಸಿದ್ರಿ. ಅದೂ ಹೆಚ್ಚು ವಿರೋಧ ಪಕ್ಷದ ಮತದಾರರನ್ನು! ಫಲಿತಾಂಶದ ದಿನ ಏನು ನಿರೀಕ್ಷೆ ಇದೆ? ಪಂದ್ಯ ಶುರುವಾಗುವ ಮುಂಚೆಯೇ ಮೈದಾನ ಓರೆಯಾಗಿದ್ರೆ ಪ್ರಜಾಪ್ರಭುತ್ವ ಉಳಿಯುತ್ತಾ?” ಎಂದು ಬರೆದಿದ್ದಾರೆ. ಕಾಂಗ್ರೆಸ್ ನಾಯಕ ಉದಿತ್ ರಾಜ್ ಇನ್ನೂ ಮುಂದೆ ಹೋಗಿ ಹೇಳಿದ್ದು, “ಇದು ಮತದಾರರ ಗೆಲುವಲ್ಲ, ಚುನಾವಣಾ ಆಯೋಗ ಮತ್ತು SIRನ ಗೆಲುವು. ಇದು ಪ್ರಜಾಪ್ರಭುತ್ವದ ಕೊಲೆ” ಎಂದಿದ್ದಾರೆ.
ರಾಹುಲ್ ಗಾಂಧಿ ಚುನಾವಣೆ ಮತ ಎಣಿಕೆಗೆ ಮುನ್ನವೇ “ವೋಟ್ ಚೋರಿ” ಆರೋಪ ಮಾಡಿದ್ದರು. ಆದರೆ ಕಾಂಗ್ರೆಸ್ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. “ಬಿಹಾರದ ಜನರು ಮಹಾಘಟಬಂಧನ್ ಬೇಡ, ಎನ್ಡಿಎ ಬೇಕು ಎಂದು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹೇಳಿಕೆಗಳು ಅವರ ಹತಾಶೆಯನ್ನು ತೋರಿಸುತ್ತವೆ. ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ” ಎಂದಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟಕ್ಕೆ ಇದು ದೊಡ್ಡ ಹಿನ್ನಡೆ. ಸೋಲಿನ ಆತಂಕದಿಂದಲೇ “ಮತದಾರರ ಪಟ್ಟಿ ತಿರುಚಿದ್ದು” ಎಂಬ ಆರೋಪಗಳು ಜೋರಾಗಿವೆ ಎಂದು ಬಿಜೆಪಿಗರು ಟೀಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Bihar Election Result 2025: ಎನ್ಡಿಎ ಭಾರೀ ಮುನ್ನಡೆ; JDU ಕಮಾಲ್, ನಿತೀಶ್ ಸಿಎಂ ಆಗೋದು ಫಿಕ್ಸ್!