Bihar Election Result 2025: " ಟೈಗರ್ ಜಿಂದಾ ಹೇ" ಬಿಹಾರದ ರಸ್ತೆಗಳಲ್ಲಿ ರಾರಾಜಿಸುತ್ತಿವೆ ನಿತೀಶ್ ಕುಮಾರ್ ಪೋಸ್ಟರ್
ಬಿಹಾರದಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಜೆಡಿಯು (JDU) ಹಾಗೂ ಆರ್ಜೆಡಿ ಮಧ್ಯೆ ಮಾತಿನ ಚಕಮಕಿ ಜೋರಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿರಿಸಿಕೊಂಡು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪ್ರಚೋದನಕಾರಿ ಪೋಸ್ಟರ್ ಒಂದನ್ನು ಹಾಕಿದೆ.
ಸಂಗ್ರಹ ಚಿತ್ರ -
ಪಟನಾ: ಬಿಹಾರದಲ್ಲಿ ಮತ ಎಣಿಕೆ (Bihar Election Result) ಆರಂಭವಾಗುತ್ತಿದ್ದಂತೆ ಜೆಡಿಯು ಹಾಗೂ ಆರ್ಜೆಡಿ ಮಧ್ಯೆ ಮಾತಿನ ಚಕಮಕಿ ಜೋರಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿರಿಸಿಕೊಂಡು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪ್ರಚೋದನಕಾರಿ "ಅಲ್ವಿದಾ ಚಾಚಾ" (ಬೈ ಬೈ ಕಾಕಾ) ಸಂದೇಶದಿಂದ ಹಿಡಿದು ಜನತಾ ದಳ (ಯುನೈಟೆಡ್)ದ ಬಲಿಷ್ಠ ನಾಯಕ ಅನಂತ್ ಸಿಂಗ್ ಅವರನ್ನು "ಜೈಲ್ ಕಾ ಫಾತಕ್ ಟೂಟೇಗಾ" ಘೋಷಣೆಗಳನ್ನು ಒಳಗೊಂಡ ಪೋಸ್ಟರ್ಗಳು ಆರ್ಜೆಡಿ ಕಚೇರಿಯೆದುರು ಕಾಣಿಸುತ್ತಿವೆ.
ಪಾಟ್ನಾದ ಆರ್ಜೆಡಿ ಪ್ರಧಾನ ಕಚೇರಿಯಲ್ಲಿ, ನಿತೀಶ್ ಕುಮಾರ್ ಅವರಿಗೆ ವಿದಾಯ ಹೇಳುವ "ಅಲ್ವಿದಾ ಚಾಚಾ" ಎಂದು ಘೋಷಿಸುವ ದೊಡ್ಡ ಪೋಸ್ಟರ್ ಎಣಿಕೆಯ ದಿನದ ಆರಂಭದಲ್ಲಿ ಗಮನ ಸೆಳೆಯಿತು. ಈ ಪೋಸ್ಟರ್ನಲ್ಲಿ ಮುಖ್ಯಮಂತ್ರಿ ತಮ್ಮ ಕುರ್ಚಿಯಿಂದ ಹೊರನಡೆಯುತ್ತಿರುವುದನ್ನು ತೋರಿಸಲಾಗಿದೆ. ಆದರೆ ಆರಂಭಿಕ ಟ್ರೆಂಡ್ಗಳ ಪ್ರಕಾರ 169 ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆಯನ್ನು ಸಾಧಿಸಿದೆ. ಎನ್ಡಿಎ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬಹುತೇಕ ಸಮೀಕ್ಷೆಗಳು ಎನ್ಡಿಎ ಅಧಿಕಾರಕ್ಕೆ ಬರುವ ಸೂಚನೆ ನೀಡಿವೆ.
ಏತನ್ಮಧ್ಯೆ, ಮೊಕಾಮಾದಲ್ಲಿ, ಜೈಲಿನಲ್ಲಿರುವ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಬೆಂಬಲಿಸುವ ಪೋಸ್ಟರ್ಗಳು ಫಲಿತಾಂಶಕ್ಕೂ ಮುನ್ನ ಕಾಣಿಸಿಕೊಂಡಿವೆ. ನವೆಂಬರ್ 2 ರಂದು ಜನ್ ಸುರಾಜ್ ಕಾರ್ಯಕರ್ತ ದುಲಾರ್ ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಅನಂತ್ ಸಿಂಗ್ ಸದ್ಯ ಜೈಲಿನಲ್ಲಿದ್ದಾರೆ. ಕೊಲೆ ಅನಂತ್ ಸಿಂಗ್, ಮಣಿಕಾಂತ್ ಠಾಕೂರ್ ಮತ್ತು ರಂಜೀತ್ ರಾಮ್ ಎಂಬ ಮೂವರನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Stock Market: ಬಿಹಾರ ಚುನಾವಣೆ ಫಲಿತಾಂಶಕ್ಕೆ ಮುನ್ನ ಸೆನ್ಸೆಕ್ಸ್-ನಿಫ್ಟಿ ಫ್ಲಾಟ್
ಎನ್ಡಿಎ vs ಮಹಾಘಟಬಂಧನ್
ಆರ್ಜೆಡಿಗೆ ಟಕ್ಕರ್ ಕೊಡಲು ಜೆಡಿಯು "ಟೈಗರ್ ಅಭಿ ಜಿಂದಾ ಹೈ" ಎಂಬ ಬ್ಯಾನರ್ಗಳನ್ನು ಹಾಕಿದೆ. ನಿತೀಶ್ ಕುಮಾರ್ ಅವರನ್ನು ದಾಖಲೆಯ ಐದನೇ ಅವಧಿಗೆ ಗೆಲ್ಲಲು ಸಜ್ಜಾಗಿರುವ ಅಚಲ ನಾಯಕ ಎಂದು ಚಿತ್ರಿಸಲಾಗಿದೆ. ಮಾಜಿ ಸಚಿವ ರಂಜಿತ್ ಸಿನ್ಹಾ ಅವರು ಈ ಪೋಸ್ಟರ್ಗಳನ್ನು ಹಾಕಿದ್ದಾರೆ.
ಎಕ್ಸಿಟ್ಪೋಲ್ ಹೇಳಿದ್ದೇನು?
ನವೆಂಬರ್ 6 ಮತ್ತು 11 ರಂದು ನಡೆದ 243 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯವು ಐತಿಹಾಸಿಕವಾಗಿ ಶೇ. 67.13 ರಷ್ಟು ಮತದಾನ ಮಾಡಿದೆ. ಬಹುತೇಕ ಎಕ್ಸಿಟ್ ಪೋಲ್ಗಳು ಜೆಡಿಯು ಸಹ ಸೇರಿರುವ ಎನ್ಡಿಎ ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ಭವಿಷ್ಯ ನುಡಿದಿವೆ. ತೇಜಸ್ವಿ ಯಾದವ್ ಈ ಭವಿಷ್ಯವಾಣಿಗಳನ್ನು ತಳ್ಳಿಹಾಕಿ ಮಹಾಘಟಬಂಧನ್ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದಾರೆ.