ಗೌರಿಬಿದನೂರು:ಇದೇ ತಿಂಗಳು ಜೂ.5ರಂದು ನಗರದ ನೇತಾಜೀ ಕ್ರೀಡಾಂಗಣದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA KH Puttaswamy Gowda)ರು ತಿಳಿಸಿದರು.
ಅವರು ನಗರದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು.
ಕೃಷಿ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳು ಮತ್ತು ವಿವಿಧ ನಿಗಮ ಮಂಡಲಿಗಳಲ್ಲಿನ ಗಂಗಾ ಕಲ್ಯಾಣ ಯೋಜನೆಗಳಲ್ಲಿ ಆಯ್ಕೆಯಾಗಿರುವ ಸುಮಾರು ನಾಲ್ಕು ಸಾವಿರ ಮಂದಿ ಫಲಾನುಭವಿಗಳಿಗೆ ಇದೇ ಮೊದಲ ಬಾರಿಗೆ, ಸುಮಾರು ಇಪ್ಪತ್ತು ಕೋಟಿ ರೂಪಾಯಿಗಳ ಮೌಲ್ಯದ ಕೃಷಿ ಸಲಕರಣೆಗಳು, ರೈತರಿಗೆ ಪಂಪು ಮೋಟಾರುಗಳು, ಅಂಗವಿಕಲರಿಗೆ ತ್ರಿಚಕ್ರ ವಾಹನಗಳು, ಹನಿ ನೀರಾವರಿಯ ಸಲಕರಣೆಗಳು, ಸಾರಥಿ ಯೋಜನೆಯಡಿಯಲ್ಲಿ ಆಯ್ಕೆ ಯಾದ ಫಲಾನುಭವಿಗಳಿಗೆ ಕಾರುಗಳು, ಕಾರ್ಮಿಕ ಇಲಾಖೆಯಡಿಯಲ್ಲಿ ವಿವಿಧ ಕುಶಲ ಕರ್ಮಿಗಳಿಗೆ ಸಲಕರಣೆಗಳು, ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಬದುಕಲು ಹೊಲಿಗೆ ಯಂತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:Gauribidanur News: ಕಾರ್ಮಿಕರಿಗೆ ಅಗತ್ಯ ನೆರವು ನ್ಯಾಯಾಲಯದಿಂದ ದೊರೆಯಲಿದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್
ಸರ್ಕಾರ ಜನರ ಕಲ್ಯಾಣಕ್ಕಾಗಿ, ಜನರ ಹಿತಕ್ಕಾಗಿ ರೂಪಿಸಿರುವ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೇತ್ರ ದಲ್ಲಿನ ಮತ್ತಷ್ಟು ಜನರಿಗೆ ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತುಗಳನ್ನು ವಿತರಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುವುದು ಎಂದ ಅವರು ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನಲ್ಲಿ ಹತ್ತು ಸಾವಿರ ಸಸಿಗಳನ್ನು ನೆಡಲು ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರರೆಡ್ಡಿ ,ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಶಾಸಕರ ಆಪ್ತ ಸಹಾಯಕ ಶ್ರೀನಿವಾಸಗೌಡ,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾಧರಪ್ಪ, ಆಶ್ರಯ ಸಮಿತಿಯ ಸದಸ್ಯ ನಾಗೇಂದ್ರ, ನಗರಸಭೆ ಮಾಜಿ ಸದಸ್ಯ ಕಲ್ಲೀಂ ಮುಖಂಡರಾದ ಅಬ್ದುಲ್ಲಾ, ವಿಕ್ರಂ ಹಾಗೂ ಇನ್ನಿತರರು ಉಪಸ್ಥಿತರಿದ್ದರು.