ಚಿಂತಾಮಣಿ: ತಾಲೂಕಿನ ಸೀಕಲ್ ಗ್ರಾಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ಸ್ವಗೃಹದಲ್ಲಿ ನಡೆದ ಚಂಡಿಕಾ ಹೋಮ ಮತ್ತು ಶ್ರೀಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Sandalwood Actor Shivraj Kumar) ಮತ್ತು ಅವರ ಧರ್ಮಪತ್ನಿ ಗೀತಾ ಶಿವರಾಜ್ ಕುಮಾರ್ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಸೀಕಲ್ ರಾಮಚಂದ್ರ ಗೌಡ ಮಾತನಾಡಿ, ಅಧಿಕ ಮಾಸದಲ್ಲಿ ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ ಮತ್ತು ಶ್ರೀಸತ್ಯನಾರಾಯಣಸ್ವಾಮಿ ಪೂಜೆ ನೆರವೇರಿಸಲಾಗಿದೆ. ಸಕಾಲಕ್ಕೆ ಮಳೆ ಬೆಳೆ ಸಮಸ್ತ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳಲಿ ಎಂದು ದೇವರನ್ನು ಮೊರೆ ಹೋಗಿದ್ದೇವೆ. ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ( Chamundeshwari MLA GT Deve Gowda) ,ನಟ ಶಿವರಾಜ್ ಕುಮಾರ್ ದಂಪತಿ ಮತ್ತು ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ನಟ ಶಿವರಾಜ್ ಕುಮಾರ್ ದಂಪತಿ ಆಗಮನದ ಸುದ್ದಿ ಕೇಳಿದ ಅಭಿಮಾನಿಗಳು ಸಾಕಷ್ಟು ಸಂಖ್ಯೆ ಯಲ್ಲಿ ನೆರೆದು ತಮ್ಮ ನೆಚ್ಚಿನ ನಟನನ್ನು ಕಂಡು ಪುಳಕಿತರಾದರು. ತಾವೊಬ್ಬ ಹಿರಿಯ ನಟ ರೆಂಬುದು ಇಲ್ಲದೆ ಎಲ್ಲರೊಂದಿಗೆ ಬೆರೆತು ನಡೆದುಕೊಂಡಿದ್ದು ಅವರ ಸಜ್ಜನಿಕೆಗೆ ಸಾಕ್ಷಿಯಾಗಿತ್ತು.
ಶಿವರಾಜ್ ಕುಮಾರ್ ದಂಪತಿಗಳು ಪೂಜೆ ನಂತರ ಔತಣಕೂಟದಲ್ಲಿ ಭಾಗವಹಿಸಿ ತದ ನಂತರ ತೆರಳಿದರು. ಬಿಜೆಪಿ ಮುಖಂಡರಾದ ಜಿ.ಎನ್.ವೇಣುಗೋಪಾಲ್ ಸೇರಿ ಎನ್ಡಿಎ ಮುಖಂಡರು ಇದ್ದರು.