ಗುಡಿಬಂಡೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡೂ ಸರ್ಕಾರಗಳು ಎಂದಿಗೂ ರೈತರ ಪರವಾದಂತಹ, ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವುದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯನಾರಾಯಣ ಆರೋಪಿಸಿದರು.
ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ೮ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಅವರು, ಇಂದು ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚಾಗಿ ಆತ್ಮಹತ್ಯೆಗಳು ನಡೆಯುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಸಾಲಗಾರ ರಾಗುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ರೈತರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಚುನಾವಣೆ ಸಮಯ ದಲ್ಲಿ ಮಾತ್ರ ತಾವು ರೈತರ ಪರ ಕೆಲಸ ಮಾಡುತ್ತೇವೆ. ರೈತರಿಗೆ ಅನುಕೂಲವಾಗುವಂತಹ ಯೋಜನೆ ಗಳನ್ನು ಜಾರಿ ಮಾಡುತ್ತೇವೆ ಎಂದು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಬಳಿಕ ಆ ಎಲ್ಲಾ ಮಾತುಗಳನ್ನು ಮರೆಯುತ್ತಾರೆ ಎಂದು ದೂರಿದರು.
ಇದನ್ನೂ ಓದಿ: Gudibande News: ಕಾಯಕ ಗ್ರಾಮ ಯೋಜನೆಯಡಿ ಎಲ್ಲೋಡು ಗ್ರಾ.ಪಂ. ದತ್ತು : ಸಿಇಒ ನವೀನ್ ಭಟ್
ಇತ್ತೀಚಿಗೆ ನಡೆದ ಕಬ್ಬು ಬೆಳೆಗಾರರ ಹೋರಾಟಕ್ಕೆ ಇನ್ನೂ ಸರಿಯಾದ ನ್ಯಾಯ ಸಿಕ್ಕಿಲ್ಲ. ಹೋರಾಟ ಮಾಡಿದರೇ ರೈತರ ಮೇಲೆಯೇ ದೌರ್ಜನ್ಯದಿಂದ ಕೇಸ್ ದಾಖಲಿಸುತ್ತಾರೆ. ಬೆಂಬಲ ಬೆಲೆ ಯೋಜನೆ ಜಾರಿಯಾಗದ ಕಾರಣ ಮೆಕ್ಕೇಜೋಳ 1700 ರೂಪಾಯಿಯಂತೆ ಮಾರಾಟವಾಗುತ್ತಿದೆ. ಇದಕ್ಕೆಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಕಾರಣವಾಗಿದೆ ಎಂದರು.
ಬಳಿಕ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚೆನ್ನರಾಯಪ್ಪ ಮಾತನಾಡಿ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ, ಸ್ಥಳೀಯವಾಗಿ ಗ್ರಾಮ ಘಟಕಗಳನ್ನು ರಚಿಸುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಬೇಕೆಂದು ಸಾಗುವಳಿ ಚೀಟಿ, ಪಡಿತರ ಚೀಟಿ, ನೀರಾವರಿ ಯೋಜನೆಗಳ ಜಾರಿ ಹಾಗೂ ಬಡವರಿಗೆ ನಿವೇಶನ ಸೇರಿದಂತೆ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಸಂಘಟನೆಯ ರೂಪುರೇಷೆಗಳ ಬಗ್ಗೆ ತಿಳಿಸಿದರು.
ಇದೇ ಸಮಯದಲ್ಲಿ ಕೆಪಿಆರ್ಎಸ್ ಸಂಘಟನೆಯ ನೂತನ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಎ.ಆದಿನಾರಾಯಣ, ಕಾರ್ಯದರ್ಶಿಯಾಗಿ ಉಪ್ಪಾರಹಳ್ಳಿ ಶ್ರೀನಿವಾಸ್, ಖಜಾಂಚಿಯಾಗಿ ನರೇಗಾ ಶ್ರೀನಿವಾಸ್ ಸೇರಿದಂತೆ ೧೬ ಮಂದಿ ಸದಸ್ಯರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಈ ಸಮಯದಲ್ಲಿ ಕರ್ನಾಟಕ ಕೃಷಿ ಕೂಲಿಕಾರರ ರಾಜ್ಯ ಉಪಾಧ್ಯಕ್ಷ ಎಂಪಿ ಮುನಿಯಪ್ಪ, ಬಾಗೇಪಲ್ಲಿ ಕೆಪಿಆರ್ಎಸ್ ಸಂಘಟನೆಯ ಕಾರ್ಯದರ್ಶಿ ಮುನಿಸ್ವಾಮಿ, ಜಿಲ್ಲಾಸಂಚಾಲಕರಾದ ಜಯರಾಮರೆಡ್ಡಿ, ವೆಂಕಟರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.