ಶ್ರೀ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಡಾ.ಎಂ.ಸಿ.ಬಾಲಾಜಿ
ಚಿಂತಾಮಣಿ: ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ(Shri Veerendra Hegde) ಅವರನ್ನು ಭೇಟಿ ಮಾಡಿದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ಮತ್ತು ಸಹೋದರ ಡಾ.ಎಂ.ಸಿ.ಬಾಲಾಜಿ ಅವರು ಭೇಟಿ ಯಾಗಿ ಆಶೀರ್ವಾದ ಪಡೆದರಲ್ಲದೆ, ಆಧ್ಯಾತ್ಮಿಕ ರತ್ನ ಎಂದೇ ಪ್ರಸಿದ್ಧವಾಗಿರುವ ದಕ್ಷಿಣ ಕೈಲಾಸ ಶ್ರೀ ಕೈಲಾಸಗಿರಿ ಗುಹಾಂತರ ದೇವಾಲಯಕ್ಕೆ ಭೇಟಿ ನೀಡುವಂತೆ ಧರ್ಮಾಧಿಕಾರಿಗಳಿಗೆ ಭಕ್ತಿಪೂರ್ವಕ ಆಹ್ವಾನ ನೀಡಲಾಯಿತು.
ಶ್ರೀ ಕಂಚಿ ಕಾಮಕೋಟಿ ಪೀಠದ ಜಗದ್ಗುರುಗಳಾದ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿಗಳ ಪವಿತ್ರ ಸಂಕಲ್ಪ ಹಾಗೂ ಖ್ಯಾತ ವಾಸ್ತುಶಿಲ್ಪಿ ಶ್ರೀ ಗಣಪತಿ ಸ್ತಪತಿ ಅವರ ದಿವ್ಯ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಕೈಲಾಸಗಿರಿಯ ಅನನ್ಯತೆಯನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಸಹೋದರ ಡಾ.ಎಂ.ಸಿ.ಬಾಲಾಜಿರವರು ಶ್ರೀಗಳಿಗೆ ವಿವರಿಸಿದರು.
ಇದನ್ನೂ ಓದಿ: Chinthamani News: ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು ತರಬೇತಿ: ಡ್ಯಾನ್ಸ್ ಮಾಸ್ಟರ್ ಕೇಶವ ಅವರ ಸಾಮಾಜಿಕ ಕಳಕಳಿ
ಬೆಟ್ಟದ ಒಡಲನ್ನು ಕೊರೆದು ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲಾಗಿರುವ ಗುಹಾಂತರ ದೇವಾಲ ಯದ ವಿನ್ಯಾಸ ಮತ್ತು ಅಲ್ಲಿ ಕೈಗೊಳ್ಳಲಾಗಿರುವ ನೂತನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕೇಳಿ ಶ್ರೀ ವೀರೇಂದ್ರ ಹೆಗ್ಗಡೆಯವರು ಪ್ರಸನ್ನತೆ ವ್ಯಕ್ತಪಡಿಸಿದರು.
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಕೈಲಾಸಗಿರಿ ಕ್ಷೇತ್ರವು ಬೆಳೆಯು ತ್ತಿರುವ ರೀತಿ ಹಾಗೂ ಭಕ್ತಾದಿಗಳಿಗಾಗಿ ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆದ ಧರ್ಮಾಧಿಕಾರಿಗಳು,ಕ್ಷೇತ್ರದ ಸಮಗ್ರ ಪುನರುತ್ಥಾನಕ್ಕೆ ಹರ್ಷ ವ್ಯಕ್ತಪಡಿಸಿದರು.
ಸಹೋದರರ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಧರ್ಮಾಧಿಕಾರಿಗಳು ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿ ಆಶೀರ್ವದಿಸಿದರು.