ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಆರೋಪಿಸಿದರು.
ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister D K Shivakumar) ಅವರು ಒಂದು ರೂಪಾಯಿ ಭ್ರಷ್ಟಾಚಾರಕ್ಕೂ ಅವಕಾಶ ನೀಡಬಾರದು ಎಂದು ಹೇಳಿದ್ದರೂ ಅಧಿಕಾರಿಗಳು ಹಾಗೂ ಶಾಸಕರು ಅದನ್ನು ಪಾಲಿಸುತ್ತಿಲ್ಲ ಎಂದು ದೂರಿದರು.
ಪೊಲೀಸ್ ಠಾಣೆಗಳಲ್ಲಿ ಡಿವೈಎಸ್ಪಿ ಮಟ್ಟಕ್ಕೆ ಇಷ್ಟು ಹಣ ನಿಗದಿಯಾಗಿದ್ದು, ಅದಕ್ಕಾಗಿ ರೈತರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜಿಲ್ಲೆಯ ಯಾವ ಅಧಿಕಾರಿ ಪ್ರಾಮಾಣಿಕರು, ಯಾರು ಭ್ರಷ್ಟರು ಎಂಬುದು ನನಗೆ ತಿಳಿದಿದೆ ಎಂದರು.
ಇದನ್ನೂ ಓದಿ: Dr K Sudhakar: ಮಹಿಳಾ ಕಾರ್ಯಕರ್ತೆಯರು, ತಾಯಂದಿರ ಸಕ್ರಿಯ ಪಾಲ್ಗೊಳ್ಳುವಿಕೆ ಪಕ್ಷದ ಶಕ್ತಿ ಹೆಚ್ಚಿಸಲಿದೆ: ಡಾ.ಕೆ.ಸುಧಾಕರ್
ಒಕ್ಕಲಿಗ ಸಮುದಾಯದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರಸಭೆ ಆಯುಕ್ತರು ₹2 ಲಕ್ಷ ಲಂಚ ಪಡೆದಿರುವ ಆರೋಪವಿದೆ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೂ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಂದೆರಡು ವಾರ ಕಾದು ನೋಡುತ್ತೇನೆ. ಕ್ರಮ ಕೈಗೊಳ್ಳದಿದ್ದರೆ ನಾನೇ ತೀವ್ರ ಪ್ರತಿಭಟನೆ ಆರಂಭಿಸುತ್ತೇನೆ ಎಂದು ಎಚ್ಚರಿಸಿದರು.
ಎತ್ತಿನಹೊಳೆ ಯೋಜನೆಗೆ ಬಿಜೆಪಿ ಕೂಡ ಕೊಡುಗೆ ನೀಡಿದ್ದು, ಬಯಲುಸೀಮೆಯ ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಮುಂದಿನ ವರ್ಷ ನೀರು ಬಂದರೆ ಸಂತೋಷ. ಎಲ್ಲ ಅಭಿವೃದ್ಧಿ ಯೋಜನೆಗಳಿಗೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಯುಪಿಐ ಶುಲ್ಕದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಡಿಜಿಟಲ್ ಆರ್ಥಿಕತೆ ವೇಗವಾಗಿ ಬೆಳೆದಿದೆ ಎಂದು ಸುಧಾಕರ್ ಹೇಳಿದರು.