ಬಾಗೇಪಲ್ಲಿ: ತಾಲ್ಲೂಕಿನಾದ್ಯಂತ ಸತತವಾಗಿ ೩ ದಿನಗಳಿಂದ ಬಿದ್ದ ಭಾರಿ ಮಳೆಗೆ ತಾಲ್ಲೂಕಿನ ಕಮ್ಮರವಾರಿಪಲ್ಲಿ ಗ್ರಾಮದ ರೈತ ಮಹಿಳೆ ಕೆ.ಎನ್.ಈಶ್ವರಮ್ಮ ಹಾಗೂ ರೈತ ಗೋವಿಂದಪ್ಪ ಬೆಳೆದ ಟೊಮೆಟೊ, ಕ್ಯಾರೆಟ್ ಬೆಳೆ ಸಂಪೂರ್ಣ ನೆಲಕಚ್ಚಿದೆ. ರೈತ ಮಹಿಳೆ ಈಶ್ವರಮ್ಮ, ರೈತ ಗೋವಿಂದಪ್ಪ 2 ಎಕರೆಯಲ್ಲಿ ಕ್ಯಾರೆಟ್ ಹಾಗೂ ಒಂದೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು.
ಸತತ ಮಳೆಯಿಂದ ಹೊಲ ಗದ್ದೆಗಳಲ್ಲಿ ನೀರು ಸಂಗ್ರಹ ಆಗಿದೆ. ತೇವಾಂಶ ಆಗಿ ಕಟಾವು ಹಂತದ ಕ್ಯಾರೆಟ್ ನೆಲಕಚ್ಚಿದೆ. ಟೊಮೆಟೊ ಬೆಳೆಯು ಸಂಪೂರ್ಣವಾಗಿ ನೆಲಕ್ಕೆ ಕುಸಿದಿವೆ. ತಮ್ಮ ಸಂಕಷ್ಟ ಪತ್ರಿಕೆಗೆ ಹಂಚಿಕೊಂಡ ರೈತ ಗೋವಿದಪ್ಪ ಹಾಗೂ ಮಹಿಳೆಯ ಕೈಗೆ ಬಂದದ್ದು ಬಾಯಿಗೆ ಬರದಂತೆ ಆಗಿದೆ ಎಂದು ಪಿ.ಎನ್.ಈಶ್ವರಮ್ಮ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Chief Minister Siddaramaiah: ಗ್ಯಾರಂಟಿಯಾಚೆಯ ಅಭಿವೃದ್ದಿಗೆ ಸರಕಾರ ಬದ್ಧ
ಮೂರು ದಿನಗಳಿಂದ ಸತತ ಮಳೆ: ತಾಲ್ಲೂಕಿನ ಕಸಬಾ, ಮಿಟ್ಟೇಮರಿ, ಗೂಳೂರು ಹೋಬಳಿಗಳ ಗ್ರಾಮಗಳಲ್ಲಿ ಭಾನುವಾರ ದಿಂದ ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆ ಧಾರಾಕಾರ ಮಳೆ ಆಗಿದೆ. ಮಳೆ, ಚರಂಡಿಯ ನೀರು ರಸ್ತೆಗೆ ಹರಿಯಿತು. ಗ್ರಾಮೀಣ ರಸ್ತೆಗಳು ಕೆಸರುಮಯ ಆಗಿತ್ತು. ಬೀದಿಬದಿ ವ್ಯಾಪಾರಕ್ಕೆ ಹಾಗೂ ಜನರ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು.
ಪಟ್ಟಣದ ಮುಖ್ಯರಸ್ತೆ, ವಾಲ್ಮೀಕಿ, ಅಂಬೇಡ್ಕರ್ ನಗರ ಸೇರಿದಂತೆ ಬೀದಿಗಳ ರಸ್ತೆಗಳು, ತಗ್ಗಿನ ಪ್ರದೇಶಗಳು ಜಲಾವೃತಗೊಂಡವು. ಕಲುಷಿತ ಮಳೆಯ ನೀರು ಮನೆಗಳಿಗೆ ನುಗ್ಗಿದೆ. ಮಹಿಳೆಯರು, ಮಕ್ಕಳು ನೀರನ್ನು ಹೊರಗೆ ಹಾಕಲು ಪ್ರಯಾಸಪಟ್ಟರು.