ಚಿಕ್ಕಬಳ್ಳಾಪುರ: ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಊರ ದೇವತೆ ಜಾಲಾರಿ ಗಂಗಮ್ಮ ದೇವಾಲಯದ 64ನೇ ವರ್ಷದ ಧರ್ಮರಾಯಸ್ವಾಮಿ ಕರಗದಮ್ಮದೇವಿ ಹಸಿ ಕರಗ ಮಹೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ಇದನ್ನು ಶಕ್ತಿಯ ಆರಾಧನೆ ಎಂದು ಪರಿಗಣಿಸಿರುವುದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ.
ನಗರದ ಎಲ್ಐಸಿ ಕಚೇರಿ ಮುಂಭಾಗವಿರುವ ಭಾರತಿ ನಗರದ ಕಲ್ಯಾಣಿಯಲ್ಲಿ ಹಸಿ ಕರಗಕ್ಕೆ ಚಾಲನೆ ನೀಡುವ ಮೊದಲು ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಯಿತು.
ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಟ್ಟು ಅಲಂಕಾರ ಮಾಡಿದರು.
ಮೇಲೂರಿನ ಕರಗದ ಪೂಜಾರಿ ಧರ್ಮೇಂದ್ರ ಅವರು ಹಸಿ ಕರಗ ಹೊತ್ತಿದ್ದರು. ವೀರ ಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ನಗರದ ಬಿಬಿ.ರಸ್ತೆ, ಬಜಾರ್ ರಸ್ತೆ ಮೂಲಕ ಗಂಗಮ್ಮನಗುಡಿ ರಸ್ತೆಗೆ ಬಂದು ಜಾಲಾರಿ ಗಂಗಮ್ಮ ದೇವಾಲಯ ಪ್ರವೇ ಶಿಸುವ ಮೊದಲು ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿ, ನೆರದ ಭಕ್ತರ ಮನ ಸೂರೆಗೊಂಡಿತು.
ಈ ಸಂದರ್ಭದಲ್ಲಿ ಕರಗ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್,ಗೌರವಾಧ್ಯಕ್ಷ ವಿ.ಗಂಗಾಧರಮೂರ್ತಿ,ಕೆ.ರಾಮು, ರಾಜ್ ದರ್ಶಿನಿ ಲೋಕೇಶ್, ನಗರಸಭೆ ಮಾಜಿ ಅಧ್ಯಕ್ಷ ಮುನಿ ಕೃಷ್ಣ, ನಗರಸಭೆ ಮಾಜಿ ಸದಸ್ಯ ಮೋಬೈಲ್ ಬಾಬು, ಕೋದಂಡರಾಮ ದೇವಾಲಯದ ಅಧ್ಯಕ್ಷ ಕೆ.ಎಸ್. ಸುದರ್ಶನ್, ಗೋವಿಂದರಾಜು, ವೆಂಕಟಸ್ವಾಮಿ, ಬಾಬು, ಶೇಖರ್, ರಾಜಣ್ಣ, ನಂಜುಂಡ ಚಾರಿ, ಸಿ.ಎನ್.ಸತೀಶ್,ರಘು, ಹರ್ಷ, ಅರ್ಚಕರಾದ ರಾಮಕೃಷ್ಣ ಬುಚಿ, ಮತ್ತಿತರರು ಇದ್ದರು.