ಚಿಂತಾಮಣಿ: ಸರ್ಕಾರದಿಂದ ಹಾಲಿನ ಪ್ರೋತ್ಸಾಹಧನವಾಗಿ ಪ್ರತಿ ಲೀಟರ್ಗೆ 5 ರೂಪಾಯಿ ನೇರವಾಗಿ ರೈತರ ಖಾತೆಗೆ ತಲುಪುವ ವ್ಯವಸ್ಥೆ ಜಾರಿಯಲ್ಲಿದೆ.ಗುಣಮಟ್ಟದ ಹಾಲು ಪೂರೈಸುವ ರೈತರಿಗೆ ಸೂಕ್ತ ಬೆಲೆ ಸಿಗುವಂತಾಗಲು ಸಾಫ್ಟ್ವೇರ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳನ್ನು ತರಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ವೈ.ಬಿ. ಅಶ್ವತ್ ನಾರಾಯಣ ಬಾಬು ರವರು ಹೇಳಿದರು.
ಇಂದು ಚಿಂತಾಮಣಿ ತಾಲೂಕಿನ ಮಾಡಿಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಘದ ಕಮಿಟಿ ಹಾಗೂ ಆಡಳಿತ ಮಂಡಳಿಯು ಕಳೆದ ವರ್ಷದ ವೈವಾಟಿನ ವರದಿಯನ್ನು ಸದಸ್ಯರೆದುರು ಮಂಡಿಸಿದ್ದು, ಕಳೆದ ಸಾಲಿನಲ್ಲಿ ಸಂಘವು ಸುಮಾರು 17 ಲಕ್ಷ ರೂಪಾಯಿಗಳ ಉತ್ತಮ ಲಾಭಗಳಿಸಿದೆ. ಗುಣಮಟ್ಟದ ಆಧಾರದ ಮೇಲೆ ಹಾಲಿಗೆ ಸೂಕ್ತ ದರ ನಿರ್ಧಾರವಾಗುತ್ತಿದ್ದು, ರೈತರು ಗುಣಮಟ್ಟ ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಮಾಡಿಕೆರೆ ಹಾಲು ಸಂಘವು ಸುಮಾರು 35-40 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಪ್ರಮುಖ ಸಂಘವಾಗಿದೆ. ಇದು ರೈತರ ಸಂಸ್ಥೆಯಾಗಿದ್ದು, ಎಲ್ಲರೂ ಒಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು, ಇತ್ತೀಚಿನ ದಿನಗಳಲ್ಲಿ ತೀವ್ರ ಬರಗಾಲ ಮತ್ತು ನೀರಿನ ಅಭಾವದಿಂದಾಗಿ ಹಾಲಿನ ಉತ್ಪಾದನೆ ಹಾಗೂ ಜಾನುವಾರುಗಳ ನಿರ್ವಹಣೆ ಸವಾಲಿನಿಂದ ಕೂಡಿದೆ. ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ರೈತರು ಹಾಗೂ ಹಾಲು ಉತ್ಪಾದಕರಿಗೆ ಯಾವುದೇ ರೀತಿಯ ಅನ್ಯಾಯವಾಗ ಬಾರದು.ಸಂಘದ ಮತ್ತು ಒಕ್ಕೂಟದ ಪ್ರತಿಯೊಂದು ಲಾಭವೂ ನೇರವಾಗಿ ರೈತರಿಗೆ ತಲುಪಬೇಕು ಎಂದು ತಿಳಿಸಿದರು.
ಯಾರೊಬ್ಬರೂ ಶಾಶ್ವತವಲ್ಲ, ಆದರೆ ಹಾಲು ಉತ್ಪಾದಕರ ಸಹಕಾರ ಸಂಘ ಶಾಶ್ವತ. ಹಾಲು ಪರೀಕ್ಷೆ, ತೂಕ ಮತ್ತು ಹಾಲಿನ ಗುಣಮಟ್ಟದ ಆಧಾರದ ಮೇಲೆ ನೀಡುವ ದರದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಹಾಲಿಗೆ ನೀರು ಬೆರೆಸುವುದು ಸೇರಿದಂತೆ ಯಾವುದೇ ದುರಾ ಡಳಿತ ಕಂಡುಬಂದರೆ ಅದಕ್ಕೆ ಸೂಕ್ತ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ರೈತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಂ ವೀರಪ್ಪ ರೆಡ್ಡಿ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಉಪ ವ್ಯವಸ್ಥಾಪಕರಾದ ಡಾ!ರಾಜು ಪಿಬಿ,ವಿಸ್ತೀರ್ಣ ಅಧಿಕಾರಿ ಸತೀಶ್ ಕುಮಾರ್ ಬಿಹೆಚ್, ಸಂಘದ ಉಪಾಧ್ಯಕ್ಷರಾದ ದೇವರಾಜು ಸಿ,ಲಕ್ಷ್ಮಣ್ ರೆಡ್ಡಿ, ವಿ ಸುರೇಶ್, ಗೋವಿಂದ ಗೌಡ,ಎಸ್ ನಾಗೇಶ್, ನಾಗರಾಜು ಎಂ ಎಸ್,ರಾಧಾಕೃಷ್ಣ,ಆರ್ ಶಂಕ್ರಪ್ಪ, ಲಕ್ಷ್ಮಮ್ಮ, ಶಾಂತಮ್ಮ ಹೆಚ್.ಎಸ್,ಶಂಕರಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಜಿ ರಾಜೇಶ್,ಸಹಾಯಕ ಎಂ ಶ್ರೀನಿವಾಸ್,ಅನಿಲ್ ಕುಮಾರಿ ಎಂ ಎ,ಎಂ ಆರ್ ಚೇತನ್ ಕುಮಾರ್,ಅಂಜಪ್ಪ ಸೇರಿದಂತೆ ಮತ್ತಿತರರು ಇದ್ದರು.