ಚಿಕ್ಕಬಳ್ಳಾಪುರ: ಜನ್ಮದಿನವನ್ನು ಆಡಂಬರದಿಂದಲ್ಲ, ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರೆ ಸಮಾಜಕ್ಕೆ ಅನುಕೂಲ ಆಗಲಿದೆ ಎಂದು ಶ್ರೀ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋದಾನಿ (ಆನೇಮಡುಗು) ಹರೀಶ್ ಕೆ.ರೆಡ್ಡಿ ತಿಳಿಸಿದರು .
ನಗರದ ವಿವಿಧ ವಾರ್ಡ್ಗಳಲ್ಲಿ ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ, ಯುವಕರೊಂದಿಗೆ ಜನ್ಮದಿನ ಆಚರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಸ್ಟಿಕರ್ ಪ್ರತಿಭಟನೆ
ಗುರುವಾರ ಬೆಳಿಗ್ಗೆ ನಗರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಹರೀಶ್ ರೆಡ್ಡಿ, ಬಳಿಕ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಳೆಯರಿಗೆ ಸೀರೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ನಂತರ ಮೂಸ್ಟೂರಿನಲ್ಲಿ ಯುವಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಕೇಕ್ ಕತ್ತರಿಸಿ ಯುವಕರೊಂದಿಗೆ ಸಂಭ್ರಮ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಕೆ.ರೆಡ್ಡಿ, "ಜನರಿಂದ ಸಿಗುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬೆಳಗ್ಗೆಯಿಂದಲೇ ನೂರಾರು ದೂರವಾಣಿ ಕರೆಗಳು, ಶುಭಾಶಯಗಳು ಹಾಗೂ ನೇರವಾಗಿ ಭೇಟಿ ನೀಡಿ ಶುಭ ಹಾರೈಸಿದ ಪ್ರತಿಯೊಬ್ಬರ ಪ್ರೀತಿ ನನ್ನ ಮನಸ್ಸನ್ನು ತುಂಬಿದೆ.
ಮುಂದಿನ ದಿನಗಳಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕು ಎಂಬ ಜನರ ಆಶಯ ನನ್ನ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಜನರ ನಂಬಿಕೆಗೆ ಎಂದಿಗೂ ಧಕ್ಕೆಯಾಗದಂತೆ ಪ್ರಾಮಾ ಣಿಕವಾಗಿ ಕೆಲಸ ಮಾಡುತ್ತೇನೆ. ಶ್ರೀ ಹರಿಕೃಷ್ಣ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಬಡವರ ನೆರವಿನಂತಹ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿ ನಿರಂತರ ವಾಗಿ ಮುಂದುವರಿಸುತ್ತೇನೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು, ಶ್ರೀ ಹರಿಕೃಷ್ಣ ಫೌಂಡೇಶನ್ ಪದಾಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಹರೀಶ್ ಕೆ. ರೆಡ್ಡಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.