ಚಿಕ್ಕಬಳ್ಳಾಪುರ: ಗೃಹ ಬಳಕೆಯ ಅಡುಗೆ ಅನಿಲ ಬೆಲೆಯನ್ನು ಏರಿಕೆ(Domestic Gas Price hike) ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕಿನ ಸೇಟ್ ದಿನ್ನೆ ಬಳಿಯ ಕಾಲೋನಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾಸ್ಮೀನ್ ತಾಜ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಗ್ಯಾಸ್ ಬೆಲೆ ಏರಿಕೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀಮಂತರು ಬಳಸುವ ವಸ್ತುಗಳ ಬೆಲೆಯನ್ನು ಏರಿಸಲಿ, ಅದನ್ನು ಬಿಟ್ಟು ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಹಾಕುವುದು ತರವಲ್ಲ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಯುದ್ಧದ ಸಂದರ್ಭವನ್ನು ಬಳಸಿಕೊಂಡು ಗೃಹ ಬಳಕೆ ಸಿಲಿಂಡರ್ ಬೆಲೆ ಏಕಾಏಕಿ 60 ರೂಪಾಯಿ ಹೆಚ್ಚಳ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಬಿದ್ದಿದೆ .ಇದೇ ಕೇಂದ್ರದ ಬಡವರ ನೀತಿಯಾಗಿದೆ ಎಂದರು.
ಇದನ್ನೂ ಓದಿ: No Gas Trouble: ಪರ್ಯಾಯ ಅನಿಲ; ನಿತ್ಯ ದಾಸೋಹಿಗಳಿಗಿಲ್ಲ ಟೆನ್ಶನ್
ಮೋದಿ ಸರಕಾರ ಬರುವ ಮೊದಲು ದೇಶವಾಸಿಗಳು ಅಡಿಗೆ ಮಾಡಲ ಉರುವಲು ಕಟ್ಟಿಗೆ ಇತ್ಯಾದಿ ಸಾಂಪ್ರದಾಯಿಕ ಪದ್ಧತಿಗಳನ್ನು ಬಳಸುತ್ತಿದ್ದರು.ಇದರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಿದರು. ಕಟ್ಟಿಗೆ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗೆ ಪ್ರಕೃತಿ ಮೇಲೆಯೂ ಉಂಟಾಗಲಿದೆ ಎಂದು ಬೊಬ್ಬೆ ಹೊಡೆಯುತ್ತಾ ಉಚಿತ ಗ್ಯಾಸ್ ಕನೆಕ್ಷನ್ ನೀಡಿ ಇದಕ್ಕೆ ಕಟ್ಟು ಬೀಳುವಂತೆ ಮಾಡಿದರು. ಉಜ್ವಲ ಯೋಜನೆಯ ಸಬ್ಸೀಡಿ ನಿಲ್ಲಿಸಿ ಎಷ್ಟೋ ವರ್ಷಗಳಾದವು. ಜನ ಗ್ಯಾಸ್ ಬಳಸುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ತಂದು ಈಗ ಯುದ್ದದ ನೆಪದಲ್ಲಿ ದಿಢೀರನೆಂದು 60 ರೂಪಾಯಿ ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ಮನೆಗಳಲ್ಲಿ ಮತ್ತೆ ಒಲೆಯ ಮೇಲೆ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇಂತಹ ಸಂಕಷ್ಟಕರ ಪರಿಸ್ಥಿತಿಗೆ ಕಾರಣವಾದ ಕೇಂದ್ರ ಬಿಜೆಪಿ ಸರ್ಕಾರ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಜನಸಾಮಾನ್ಯರ ಬಗ್ಗೆ ಕನಿಷ್ಠ ಕಳಕಳಿ ಇದ್ದರೆ ತಕ್ಷಣವೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ನಿರ್ಧಾರ ವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಭಾಗವಾಗಿ ಮಹಿಳೆಯರು ಸೌದೆ ಒಲೆಯ ಮೇಲೆ ಟೀ ತಯಾರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈವೇಳೆ ಕೇಂದ್ರ ಸರ್ಕಾರದ ಬಡವರ ವಿರೋಧಿ ಧೋರಣೆ ಯನ್ನು ಖಂಡಿಸಿ ಘೋಷಣೆ ಕೂಗಿದರು.
ಈ ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವೆಂಕಟರತ್ನ, ಗುಂತಪನಹಳ್ಳಿ ಮಂಜು, ಐರನ್ ಮಂಜಮ್ಮ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವೆಂಕಟಲಕ್ಷ್ಮಿ, ನಿಮ್ಮಾಕುಲ ಕುಂಟೆ ಮಂಜು,ಒಬಲಮ್ಮ,ಮAಜುಳಾ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.