ಗುಡಿಬಂಡೆ: ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದುದು, ಈ ಸಮಯದಲ್ಲಿ ಓದುವುದನ್ನು ಬಿಟ್ಟು, ಸಮಯ ವ್ಯರ್ಥ ಮಾಡಿದರೇ ಇಡೀ ಜೀವನ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಓದುವ ಸಮಯವನ್ನು ವ್ಯರ್ಥ ಮಾಡದೇ ಶಿಸ್ತು, ಸಂಯಮ ಮೈಗೂಡಿಸಿಕೊಂಡು ಓದುವ ಮೂಲಕ ಸಾಧನೆ ಮಾಡಬೇಕು ಎಂದು ಅಮೇರಿಕಾ ಮೂಲದ ಕಾರ್ಪೋರೇಟ್ ಕಂಪನಿ ನಾಸ್ಡಾಕ್ ನ ಮುಖ್ಯಸ್ಥ ಭರತ್ ಪಟೇಲ್ ತಿಳಿಸಿದರು.
ಪಟ್ಟಣದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಾಸ್ಡಾಕ್ ಹಾಗೂ ರೈಟ್ ಟು ಲೀವ್ ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಶಾಲಾ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಸಮಯವನ್ನು ಅನಗತ್ಯ ಚಟುವಟಿಕೆಗಳಲ್ಲಿ ವ್ಯರ್ಥ ಮಾಡದೆ, ಗುರಿ ಯೊಂದಿಗೆ ಅಧ್ಯಯನ ನಡೆಸಬೇಕು. ಶಿಕ್ಷಣವೇ ಜೀವನದ ಭದ್ರ ಅಡಿಪಾಯವಾಗಿದ್ದು, ಇಂದಿನ ಪರಿಶ್ರಮವೇ ನಾಳಿನ ಯಶಸ್ಸಿಗೆ ದಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಯದ ಮಹತ್ವ ಅರಿತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಾದ ತಾವುಗಳು ತಮ್ಮ ಕುಟುಂಬ, ಪೋಷಕರು ಹಾಗೂ ಶಿಕ್ಷಕರನ್ನು ಗೌರವಿಸಬೇಕು. ಒಳ್ಳೆಯ ಸಾಧನೆ ಮಾಡಿ ನೀವು ಸಹ ಮುಂದಿನ ದಿನಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಈ ರೀತಿಯ ಸೇವೆ ಮಾಡಬೇಕು ಎಂದರು.
ಇದನ್ನೂ ಓದಿ: Gudibande News: ದಲಿತ ರೈತರ ವಿರುದ್ಧ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.29ರಂದು ಜಿಲ್ಲಾದ್ಯಂತ ಪ್ರತಿಭಟನೆ: ದಸಂಸ
ಕಾರ್ಯಕ್ರಮದಲ್ಲಿ ರೈಟ್ ಟು ಲೀವ್ ಸಂಸ್ಥೆಯ ನಿರ್ದೇಶಕ ಟಿ.ವಿ.ಶ್ರೀಧರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ತಾವುಗಳು ತಮ್ಮ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಳ್ಳಬೇಕು. ಇಂದು ಅನೇಕ ಸಂಸ್ಥೆಗಳು ಸರ್ಕಾರಿ ಶಾಲೆಗಳ ನವೀಕರಣ ಹಾಗೂ ದುರಸ್ಥಿಗಾಗಿ ಮುಂದೆ ಬರುತ್ತಿವೆ ಎಂದರು.
ನಮ್ಮ ರೈಟ್ ಟು ಲೀವ್ ಸಂಸ್ಥೆ ವಿವಿಧ ಕಂಪನಿಗಳ ಸಹಯೋಗದಲ್ಲಿ ಅನೇಕ ಶಾಲೆಗಳನ್ನು ಉನ್ನತೀಕರಿಸಲಾಗಿದೆ. ಈ ಕಾರ್ಯ ಇದೇ ರೀತಿ ಮುಂದುವರೆಯಲಿದೆ ಎಂದರು.
ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ಮಾತನಾಡಿ, ಗಡಿ ಭಾಗದಲ್ಲಿರುವ ಗುಡಿಬಂಡೆ ಸರ್ಕಾರಿ ಶಾಲೆಗಳನ್ನು ನವೀಕರಣ ಹಾಗೂ ದುರಸ್ಥಿ ಮಾಡಲು ನಾಸ್ಡಾಕ್ ಹಾಗೂ ರೈಟ್ ಟು ಲೀವ್ ಸಂಸ್ಥೆ ಯವರು ಮುಂದಾಗಿರುವುದು ಶ್ಲಾಘನೀಯವಾದ ವಿಚಾರವಾಗಿದೆ. ಶಾಲಾ ಕೊಠಡಿಗಳ ನವೀಕರಣ, ಶೌಚಾಲಯ ಸೇರಿದಂತೆ ಆಧುನಿಕ ರೀತಿಯ ಉಪಕರಣಗಳನ್ನು ಶಾಲೆಗೆ ಪೂರೈಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ನಾಗಮಣಿ, ಬಿಇಒ ಕೃಷ್ಣಕುಮಾರಿ, ಶಿಕ್ಷಕ ವಿ.ವೆಂಕಟೇಶ್ ರವರುಗಳು ಮಾತನಾಡಿದರು.
ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ನಾಸ್ಡಾಕ್ ಕಂಪನಿಯ ಪ್ರೀತಿ ತೊಪ್ಪಿಲ್, ಸುಮಿತ್ರ, ದಿನೇಶ್, ರೈಟ್ ಟು ಲೀವ್ ಸಂಸ್ಥೆಯ ಶಾಂಭವಿ, ಹರೀಶ್, ನರ್ಗೀಸ್, ಸುನೀಲ್, ಗಣೇಶ್, ಹುಸೇನ್ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರುಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.