ಚಿಕ್ಕಬಳ್ಳಾಪುರ: ಡಾ.ಬಿ.ಆರ್.ಅಂಬೇಡ್ಕರ್(Dr B R Ambedkar) ಭಾರತ ಮಾತೆ ದೇಶಕ್ಕೆ ನೀಡಿರುವ ಅದ್ಭುತ ಚೈತನ್ಯ ವಾಗಿದ್ದಾರೆ ಎಂದು ನಂದಿ ಮೆಡಿಕಲ್ ಕಾಲೇಜಿನ ಡೀನ್ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟು ಗಟ್ಟಿಯಾಗಿ ಹಾಗೂ ಸತ್ವಯುತವಾಗಿ ಇರಲು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಲಭ್ಯವಾಗಲು ಸಂವಿಧಾನ ಕಾರಣ. ಈ ಸಂವಿಧಾನವನ್ನು ದೇಶಕ್ಕೆ ನೀಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಇದನ್ನೂ ಓದಿ: Chikkaballapur News: 5 ಲಕ್ಷ ಗಿಡ ನೆಟ್ಟು ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ: ನ್ಯಾ.ಟಿ.ಪಿ.ರಾಮಲಿಂಗೇಗೌಡ
ಬಾಲ್ಯದಿಂದಲೇ ಜಾತಿಯ ಕಾರಣಕ್ಕಾಗಿ ಅವಮಾನ ಸಂಕಟಗಳನ್ನು ಅನುಭವಿಸಿದರೂ ಓದನ್ನು ಯಜ್ಞದಂತೆ ಸ್ವೀಕರಿಸಿ, ವಿದ್ಯಾಸರಸ್ವತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಕಾರಣ ಜ್ಞಾನ ಸೂರ್ಯ ರಾಗಿ ಬೆಳಗಿದ್ದಾರೆ.ತಾವು ಬರೋಡ ಮಹಾರಾಜರ ನೆರವಿನಲ್ಲಿ ಉನ್ನತ ಶಿಕ್ಷಣವನ್ನು ದೇಶ ವಿದೇಶಗಳಲ್ಲಿ ಪಡೆಯುವಂತಾದ ಪರಿಣಾಮವಾಗಿ ವಿಶ್ವವೇ ಮೆಚ್ಚುವ ಪರಿಪೂರ್ಣ ಸಂವಿಧಾನ ವೆಂಬ ಭಗವದ್ಗೀತೆಯನ್ನು ಭಾರತ ದೇಶಕ್ಕೆ ನೀಡಿದ ಕೀರ್ತಿಗೆ ಅವರು ಪಾತ್ರವಾಗಿದ್ದಾರೆ ಎಂದರು.
ಭಾರತೀಯರು ಇಂದು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರು ಬರೆದಿರುವ ಗಟ್ಟಿಯಾದ ಸಂವಿಧಾನ ವಾಗಿದೆ. ವಿಶ್ವದ ಭೂಪಟದಲ್ಲಿ ಎಲ್ಲಿಯವರೆಗೆ ಭಾರತ ರಾರಾಜಿಸುತ್ತದೆಯೋ ಅಲ್ಲಿಯವರೆಗೆ ಅಂಬೇಡ್ಕರ್ ಬರೆದ ಸಂವಿಧಾನ ಇರಲಿದೆ, ಅಂಬೇಡ್ಕರ್ ಜೀವಂತವಾಗಿ ಇರಲಿದ್ದಾರೆ ಎಂದು ಹೇಳಿದರು.
ಕೇವಲ ಭಾರತ ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಸಹ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರೀತಿಸುವವರು ಅಭಿಮಾನಿಸುವವರು ಆರಾಧಿಸುವರು ಇದ್ದಾರೆ ಹಾಗಾಗಿ ಅವರು ವಿಶ್ವ ಶ್ರೇಷ್ಠ ವ್ಯಕ್ತಿ ಎಂದು ಬಣ್ಣಿಸಿದರು.
ಅಂಬೇಡ್ಕರ್ ದಲಿತ ಸಮುದಾಯದ ಏಳಿಗಾಗಿ ಸಂವಿಧಾನದಲ್ಲಿ ಏನೆಲ್ಲಾ ಕೊಟ್ಟಿದ್ದರೂ ಕೂಡ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ದಲಿತರ ಸ್ಥಿತಿಗತಿಗಳಲ್ಲಿ ಆಮೂಲಾಗ್ರ ಬದಲಾವಣೆ ಕಂಡಿಲ್ಲ.ಇವತ್ತಿಗೂ ಹೆಚ್ಚಿನ ಭಾಗದ ದಲಿತರು ಬಡತನದಲ್ಲಿ ಬೇಯುತ್ತಿದ್ದಾರೆ.ಉಳ್ಳವರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದಾರೆ.ಇದನ್ನು ಬಿಟ್ಟು ಅಂಬೇಡ್ಕರ್ ಹೇಳಿದ ಹಾಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಅಂಬೇಡ್ಕರ್ ಮರುಹುಟ್ಟು ಪಡೆಯ ಬೇಕು. ಆಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಬರಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಅಕಾಡಮಿಕ್ ರಿಜಿಸ್ಟ್ರಾರ್ ಹಾಗೂ ವಿಭಾಗ ಮುಖ್ಯಸ್ಥೆ ಡಾ.ಎಂ.ಆರ್.ಅನಿತಾ, ವಿಭಾಗ ಮುಖ್ಯಸ್ಥರಾದ ಡಾ.ರಮೇಶ್, ಡಾ.ವೆಂಕಟೇಶಬಾಬು,ಡಾ. ನಾಗಲಕ್ಷ್ಮೀ, ನರ್ಸಿಂಗ್ ಪ್ರಾಶಂಶುಪಾಲೆ ಶಾಂತಿ, , ಪ್ರಾಧ್ಯಾಪಕರಾದ ಡಾ.ಪುಷ್ಪ, ಡಾ.ನರಸಿಂಹ, ಡಾ.ಚೈತ್ರ, ಡಾ.ಜ್ಯೋತಿ. ಡಾ.ಹೇಮಂತ್ ಕುಮಾರ್, ಡಾ.ಅನಿತಾಲಕ್ಷ್ಮೀ, ಡಾ.ಶ್ರೀನಿವಾಸ್, ಬೋಧಕ, ಬೋಧಕೇತರ ಸಿಬ್ಬಂಧಿ, ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.