ಚಿಂತಾಮಣಿ: ಪೊಲೀಸ್ ಉಪವಿಭಾಗದಲ್ಲಿ ಮಹತ್ವದ ಬದಲಾವಣೆಯಾಗಿದೆ.ಕಳೆದ ಒಂದೂವರೆ ವರ್ಷಗಳಿಂದ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಿವೈಎಸ್ಪಿ ಮುರಳೀಧರ್ ಪಿ. (DySP Muralidhar P) ಅವರು ಈಗ ವಿಜಯಪುರ ಜಿಲ್ಲೆಯ ಹೊಸಪೇಟೆಗೆ ವರ್ಗಾವಣೆ ಗೊಂಡಿದ್ದಾರೆ.
ರಾಜ್ಯ ಸರ್ಕಾರದ ಪೊಲೀಸ್ ಮಹಾನಿರ್ದೇಶಕರು ಮತ್ತು ಅರಕ್ಷಕ ಮಹಾನಿರ್ದೇಶಕರ ಪರವಾಗಿ ಸುಮೆಂದು ಮುಖರ್ಜಿ ಅವರು ಈ ವರ್ಗಾವಣೆ ಆದೇಶವನ್ನು ಹೊರಡಿಸಿದ್ದಾರೆ. 2023ರ ಅಕ್ಟೋಬರ್ 4 ರಂದು ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಮುರಳೀಧರ್ ಅವರು,ಇದೀಗ ವಿಜಯನಗರ ಜಿಲ್ಲೆಯ ಹೊಸಪೇಟೆ ಉಪ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.
ಇದನ್ನೂ ಓದಿ: Transfer of Judges: ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ
ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕುಗಳ ವ್ಯಾಪ್ತಿ ಹೊಂದಿರುವ ಈ ಉಪ ವಿಭಾಗಕ್ಕೆ ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯನ್ನು ಸರ್ಕಾರ ನೇಮಿಸುತ್ತದೆ. 2021ರಲ್ಲಿ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರು ಇಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನ ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡ ಬಳಿಕ,ಈ ಸ್ಥಾನವು ಕೆಲಕಾಲ ಖಾಲಿ ಇತ್ತು. ತದ ನಂತರ ಬಂದ ಮುರಳೀಧರ್ ಅವರು ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
ಸಾಮಾನ್ಯವಾಗಿ ಡಿವೈಎಸ್ಪಿಗಳ ವರ್ಗಾವಣೆ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ, ಮುರಳೀಧರ್ ಅವರು ಅಧಿಕಾರ ವಹಿಸಿಕೊಂಡ ನಂತರ ಹೆಚ್ಚುವರಿಯಾಗಿ 6 ತಿಂಗಳು ಸೇವೆ ಸಲ್ಲಿಸಿರುವುದು ವಿಶೇಷ. ಸದ್ಯ ಇವರ ವರ್ಗಾವಣೆಯಾಗಿದ್ದು, ಚಿಂತಾಮಣಿಯ ನೂತನ ಡಿವೈಎಸ್ಪಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.