ಚಿಕ್ಕಬಳ್ಳಾಪುರ: ಹೊಸ ವರ್ಷ ಬಂದರೆ ಸಾಕು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿರುತ್ತದೆ. ಜನರು 2026ರನ್ನ ಭರ್ಜರಿಯಾಗಿ ಸ್ವಾಗತಿಸಲು ಪ್ಲಾನ್ ಕೂಡ ಮಾಡಿಕೊಂಡಿರುತ್ತಾರೆ.ಕೆಲವರು ಹೊಸ ವರ್ಷದ ದಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಭ್ರಮಿಸುತ್ತಾರೆ. ಬೆಂಗಳೂರಿನ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸಿದ್ದರೆ ಈಗಲೇ ಪ್ಲಾನ್ ಚೇಂಜ್ ಮಾಡಿ.
ಹೊಸ ವರ್ಷದ ಸಂಭ್ರಮದಿಂದ ಅನಾಹುತ ಆಗುವ ಸಾಧ್ಯತೆ ಹಿನ್ನೆಲೆ ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಈ ಕುರಿತು ಮಾತನಾಡಿದ್ದು, ಡಿಸೆಂಬರ್ 31-12-25 ಮಧ್ಯಾಹ್ನದಿಂದ 01- 01- 26 ಮಧ್ಯಾಹ್ನದವರೆಗೂ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧೀಸಲಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
ಹೊಸ ವರ್ಷ ಹಿನ್ನೆಲೆ ನಂದಿ ಬೆಟ್ಟ ಸುತ್ತಮುತ್ತ ಇರುವ ಹೋಟೆಲ್, ಹೋಮ್ ಸ್ಟೇ ಮತ್ತು ರೆಸಾರ್ಟ್ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮೋಜು ಮಸ್ತಿ ಹೆಸರಿನಲ್ಲಿ ಕಾನೂನು ಉಲ್ಲಂಘಿಸಿ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ಗಳು ನಿಗದಿತ ಅವಧಿಗೆ ಕ್ಲೋಸ್ ಮಾಡುವಂತೆ ಎಸ್ಪಿ ಆದೇಶಿಸಿದ್ದಾರೆ. ಇನ್ನು ಹೊಸ ವರ್ಷ ದಿನದಂದು ಚಿಕ್ಕಬಳ್ಳಾಪುರದಲ್ಲಿರುವ ಇಶಾ ಪೌಂಡೇಶನ್ಗೆ ಸಾವಿರಾರು ಜನರು ಆಗಮಿಸುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕಟ್ಟೆಚ್ಚರ
ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಬೆಂಗಳೂರಿನ ಕೋರಮಂಗಲದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಬೈಕ್ ರೈಡ್ ಮೂಲಕ ಕೋರಮಂಗಲದ ಪ್ರಮುಖ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಹಲವೆಡೆ ಹಲವು ಕಡೆ ತನಿಖಾ ಸಂಸ್ಥೆಗಳು ಹೆಚ್ಚಿನ ನಿಗಾ ವಹಿಸಿವೆ.
ಹೊಸ ವರ್ಷ ಆಚರಣೆ ವೇಳೆ ನಗರದ ಮೇಲೆ ಹದ್ದಿನ ಕಣ್ಣಿಡಲಿರುವ ಡ್ರೋಣ್ ಕ್ಯಾಮರಾಗಳ ಬಗ್ಗೆ ತರಬೇತಿ ಸಂಬಂಧ ಪ್ರಾಯೋಗಿಕ ಹಾರಾಟವೂ ನಡೆಯುತ್ತಿದೆ. ಈಗಾಗಲೇ ಹೊಸ ವರ್ಷಾಚರಣೆಗೆ ಪೊಲೀಸರು ಕೆಲ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಪಿಜಿಗಳಿಗೂ ಕಟ್ಟುನಿಟ್ಟಿನ ನಿಯಮವನ್ನು ವಿಧಿಸಲಾಗಿದೆ.
ಚಾಣಕ್ಯ ನೀತಿಯಂತೆ ಹೊಸ ವರ್ಷದ ಮೊದಲ ದಿನ ಈ ಸಂಕಲ್ಪ ಮಾಡಿ ಬದುಕು ಬಂಗಾರವಾಗುತ್ತದೆ
ಪಿ.ಜಿ.ಗಳ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್ ಕಟ್ ಮಾಡಬಾರದು. ಮಹಿಳಾ ಪಿಜಿಗಳಿಗೆ ಶುಭ ಕೋರಲು ಬರುವ ಪುರುಷರಿಗೆ ಅವಕಾಶ ನೀಡಬಾರದು. ಪಿ.ಜಿ. ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಅದಕ್ಕೆ ಮಾಲೀಕರೆ ಹೊಣೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.