ಗಂಧದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರ ಭಾಗಿ
ಹಿಂದೂ–ಮುಸ್ಲಿಮರ ಸಾಮರಸ್ಯದ ಸಂದೇಶ
ಚಿಂತಾಮಣಿ: ಹಿಂದೂ–ಮುಸ್ಲಿಮರ ಭಾವೈಕ್ಯತೆಯ ಪ್ರತೀಕವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್–ಬಾವಾಜಾನ್ ದರ್ಗಾದಲ್ಲಿ ವಾರ್ಷಿಕ ಉರುಸ್ ಅಂಗವಾಗಿ ಮೊದಲ ದಿನದ ಗಂಧೋತ್ಸವವನ್ನು ಸಡಗರ, ಸಂಭ್ರಮ ಹಾಗೂ ಶಾಂತಿಯುತವಾಗಿ ಆಚರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಉರುಸ್ನ ಮೊದಲ ದಿನ ಗ್ರಾಮಸ್ಥರ ಮನೆಗಳಿಂದ ಗಂಧದ ಮೆರವಣಿಗೆ ನಡೆಯಿತು. ಪಟೇಲ್ ಭಾಷು, ಹಾಜಿ ಅನ್ಸರ್ ಖಾನ್, ಫೈಯಾಜ್, ಜಂಗ್ಲಿಪೀರ್ ಬಾಬಾ ದರ್ಗಾದ ಮುತವಲ್ಲಿ ಬಾಬಾ ಜಾನ್, ದಿವಂಗತ ಅನ್ವರ್ ಸಾಬ್ ಹಾಗೂ ನೂರ್ ಜಾನ್ ಅವರ ಮನೆಗಳಿಂದ ಗಂಧವನ್ನು ಮೆರವಣಿಗೆಯಲ್ಲಿ ತರಲಾಯಿತು. ಭಕ್ತರು ಗಂಧ ಹಚ್ಚಿ, ಛಾದರ್ ಸಮರ್ಪಿಸಿ ಇಷ್ಟಾರ್ಥ ಈಡೇರಿಸು ವಂತೆ ಹರಕೆ ಸಲ್ಲಿಸಿದರು.
ಇದನ್ನೂ ಓದಿ: Chikkaballapur News: ಸೆ.6ರಂದು 12ನೇ ವರ್ಷದ ಸಾಮೂಹಿಕ ಸೀಮಂತ: ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹಜರತ್ ಅವರ ಅನುಯಾಯಿಗಳು ವಿವಿಧ ರೀತಿಯ ಪವಾಡ ಪ್ರದರ್ಶನಗಳ ಮೂಲಕ ಗಮನ ಸೆಳೆದರು. ಉರುಸ್ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯಿಂದ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಿತ್ತು.
ಭಾವೈಕ್ಯತೆಯ ಸಂದೇಶ
ದರ್ಗಾದ ಪ್ರಮುಖರು ಮಾತನಾಡಿ, ಹಿಂದೂ–ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಉರುಸ್ನ ಮೊದಲ ದಿನದ ಕಾರ್ಯಕ್ರಮವನ್ನು ಶಾಂತಿಯುತವಾಗಿ ಆಚರಿಸಿರುವುದು ಮುರುಗಮಲ್ಲದ ಭಾವೈಕ್ಯತೆಯ ಪರಂಪರೆಗೆ ಸಾಕ್ಷಿಯಾಗಿದೆ. ಧರ್ಮ, ಜಾತಿಯ ಭೇದ ಮರೆತು ಎಲ್ಲರೂ ಸಹೋದರತ್ವದಿಂದ ಪಾಲ್ಗೊಳ್ಳುವುದು ಉರುಸ್ನ ವಿಶೇಷತೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕ್ಫ್ ಮಂಡಳಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮದ ಹಿಂದೂ–ಮುಸ್ಲಿಂ ಬಾಂಧವರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.