ಗೌರಿಬಿದನೂರು: ದಕ್ಷಿಣ ಭಾರತದಲ್ಲಿ ಶೌರ್ಯ ಪರಾಕ್ರಮಗಳಿಗೆ ಹೆಸರು ಪಡೆದವರು ವಿಜಯ ನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯ. ಇವರ ಕಾಲದಲ್ಲಿ ಹಂಪಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಹಾ ಮುತ್ತು ರತ್ನಗಳನ್ನು ಮಾರುತ್ತಿದ್ದರು ಎಂದು ವಿದೇಶಿ ರಾಯಭಾರಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಇದು ಬಲಿಜ ಸಮುದಾಯಕ್ಕೆ ಹೆಮ್ಮೆ ತರುವ ವಿಚಾರ ಎಂದು ಪುರಸಭೆಯ ಮಾಜಿ ಸದಸ್ಯ ಅನಂತರಾಜು ತಿಳಿಸಿದರು. ಶ್ರೀಕೃಷ್ಣದೇವರಾಯರ 555ನೇ ಜಯಂತಿ ಪ್ರಯುಕ್ತ ರಾಜ್ಯದ ಎಲ್ಲಾ ತಾಲುಕುಗಳಲ್ಲಿ ಸಂಚರಿಸು ತ್ತಿರುವ ರಥಕ್ಕೆ ಇಂದು ನಗರದ ಎಂಜಿ ವೃತ್ತದಲ್ಲಿ ಸಾರ್ವಜನಿಕರಿಂದ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್ ಮಾತನಾಡುತ್ತಾ, ಬಿಜಾಪುರದ ಬಹುಮನೀ ಸುಲ್ತಾನರಿಗೆ ಸಂಹಸ್ವಪ್ನರಾಗಿದ್ದ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ವಿಜಯನಗರ ರಾಜ್ಯ ಸಂಪದ್ಭರಿತವಾಗಿತ್ತು ಎಂದು ತಿಳಿಸಿದರು. ರಾಜ್ಯ ಹೆದ್ದಾರಿಯಲ್ಲಿ ವೃತ್ತಕ್ಕೇ ಈಗಾಗಲೇ ಶ್ರೀಕೃಷ್ಣದೇವರಾಯರ ಹೆಸರಿಡಲಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು, ಜನರ ಸಹಕಾರದೊಂದಿಗೆ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Chiranjeevi: ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿ ವಿವಾದಕ್ಕೀಡಾದ ಮೆಗಾಸ್ಟಾರ್ ಚಿರಂಜೀವಿ
ಬಲಿಜ ಯುವ ಘರ್ಜಣೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮಾತನಾಡುತ್ತಾ ಶ್ರೀ ಕೃಷ್ಣದೇವರಾಯರು ಸಮರಾಂಗಣ ಸಾರ್ವಬೌಮರು ಜೊತೆಗೆ ಸಾಹಿತಿಗಳೂ ಹೌದು,ಅವರು ತೆಲುಗಿನಲ್ಲಿ ಗೋದಾದೇವಿ ಕಥೆಯನ್ನು ಅಮುಕ್ತಮಾಲ್ಯದ ಕೃತಿಯನ್ನು ರಚಿಸಿದ್ದಾರೆ.ಅವರು ತನ್ನ ರಾಜ್ಯವನ್ನು ಇಂದಿನ ಒರಿಸ್ಸಾ ರಾಜ್ಯದ ಕಟಕ್ ವರಿಗೂ ವಿಸ್ತರಿಸಿದ್ದರು.ತಿರುಪತಿ ತಿಮ್ಮಪ್ಪ ಇವರ ಮನೆದೇವರು. ತಿರುಮಲೆ ಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದರು ಎಂದು ತಿಳಿಸಿದರು.
ಸ್ವಾಗತ ಕಾರ್ಯಕ್ರಮದಲ್ಲಿ ವೆಂಕಟಾದ್ರಿ, ಪ್ರಕಾಶ್, ರಾಜಕುಮಾರ್, ವಿಶ್ವ ಹಿಂದು ಪರಿಷತ್ತಿನ ರಮೇಶ್ ಬಾಬು, ಭಜನೆ ಗೋವಿಂದಪ್ಪ,ರಾಮಕೃಷ್ಣ, ಪ್ರಕಾಶ್, ವೆಂಕಟೇಶ್, ಚಂದ್ರಣ್ಣ, ಭಾಸ್ಕರ್, ಪರಮೇಶ್, ಅನಿಲ್, ಮುಂತಾದವರು ಭಾಗವಹಿಸಿದ್ದರು.