ಚಿಕ್ಕಬಳ್ಳಾಪುರ: ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಲು ಉತ್ತಮ ಶಿಕ್ಷಣ ಅಗತ್ಯ. ಉತ್ತಮ ಶಿಕ್ಷಣದ ಮೂಲಕವೇ ಸರಿಯಾದ ಬದುಕಿನ ದಾರಿ ತೋರಿಸಿದರೆ ಖಂಡಿತವಾಗಿ ಆಕೆ ರಾಷ್ಟ್ರ ನಿರ್ಮಾಣದಲ್ಲಿ ಸಮರ್ಥವಾಗಿ ಕೈಜೋಡಿಸಲು ಸಾಧ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ತಿಳಿಸಿದರು.
ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಹೆಣ್ಣು ಮಕ್ಕಳು ಅವಲಂಬನೆಯಿಲ್ಲದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕಾದರೆ ಉತ್ತಮ ಶಿಕ್ಷಣ ಅಗತ್ಯ.ಹೆಣ್ಣು ಮಕ್ಕಳು ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗದೆ ಕೌಶಲ್ಯಯುತ ಶಿಕ್ಷಣ ಪಡೆಯಲು ಮುಂದಾಗಬೇಕು. ಇದರಿಂದಲೇ ಸಮರ್ಥ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
೨೧ನೇ ಶತಮಾನದಲ್ಲಿಯೂ ಕೂಡ ಸಮಾಜದಲ್ಲಿ ಲಿಂಗತಾರತಮ್ಯ ಇರುವುದು ನಾಗರೀಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಮನೆಯಿಂದಲೇ ಈ ತಾರತಮ್ಯ ಪ್ರಾರಂಭವಾಗುವುದರಿಂದ ಹೆಣ್ಣಾಗಲಿ ಗಂಡಾಗಲಿ ಇಬ್ಬರೂ ಮಕ್ಕಳೇ ಆಗಿದ್ದಾರೆ ಎಂದು ಪೋಷಕರು ಎಂದು ಭಾವಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ದೇವೇಗೌಡರ ಆರೋಗ್ಯ ಸುಧಾರಿಸಲೆಂದು ಜೆಡಿಎಸ್ನಿಂದ 101 ಈಡುಗಾಯಿ ಹೊಡೆದು ದೇವರ ಮೊರೆ
ಪ್ರತಿ ವರ್ಷ ಅಕ್ಟೋಬರ್ ೧೧ ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾ ಚರಣೆ ಆಚರಿಸಲಾಗುತ್ತದೆ. ಈ ದಿನದ ನೆಪದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಮಾಜ ಎಷ್ಟೇ ಮುಂದುವರೆದಿದ್ದರೂ ಲಿಂಗ ಅಸಮಾನತೆ,ಹೆಣ್ಣು ಸಂತಾನದ ಬಗ್ಗೆ ತಾತ್ಸಾರ ಭಾವ ಕಡಿಮೆಯಾಗಿಲ್ಲ. ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ,ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಷ್ಟೇ ಪ್ರಾಬಲ್ಯವನ್ನು ಸಾಧಿಸಿದರೂ ಸಮಾಜದಲ್ಲಿ ಸಮಾನ ಸ್ಥಾನಮಾನ ದೊರೆಯುತ್ತಿಲ್ಲ. ಹೆಣ್ಣು ಭ್ರೂಣಹತ್ಯೆ, ಲೈಂಗಿಕ ದೌರ್ಜನ್ಯಕ್ಕೆ ಎಷ್ಟೋ ಮಕ್ಕಳು ಬಲಿಯಾಗುತಿರುವುದು ಆತಂಕದ ವಿಚಾರವಾಗಿದೆ ಎಂದರು.
ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಉದ್ದೇಶವೇನೆಂದರೆ ಬಾಲ್ಯವಿವಾಹ, ಶಿಕ್ಷಣ, ಸಾಮಾಜಿಕ ತಾರತಮ್ಯ ಮತ್ತು ಕೌಟುಂಬಿಕ ಹಿಂಸೆ ಸೇರಿದಂತೆ ಪ್ರಪಂಚದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಆಧಾರಿತ ಅಸಮಾನತೆ ಕೊನೆಗಾಣಿಸುವುದಾಗಿದೆ. ದಿನಾಚರಣೆ ನೆಪದಲ್ಲಿ ಯಾದರೂ ಅವರ ಹಕ್ಕುಗಳು, ಸುರಕ್ಷತೆ, ಸಮಾನತೆ ಬಗ್ಗೆ ಜಾಗೃತಿ ಮೂಡಿಸಿ ಅವರಲ್ಲಿ ಸವಾಲು ಎದುರಿಸುವ ಧೈರ್ಯವನ್ನು ತುಂಬುವುದೇ ಆಗಿದೆ. ಮೇಲಾಗಿ ಯಾವುದೇ ಹೆಣ್ಣು ಮಕ್ಕಳಿಗೆ ಸಮಸ್ಯೆ ಎದುರಾದರೆ ಕೂಡಲೇ ೧೦೯೮ಗೆ ಕರೆ ಮಾಡಿ ರಕ್ಷಣೆ ಪಡೆಯಬಹುದಾಗಿದೆ ಎಂದರು.
ಈ ವೇಳೆ ಶಾಲೆಯ ಪ್ರಾಂಶುಪಾಲರು, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.