ಚಿಕ್ಕಬಳ್ಳಾಪುರ: ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಕಲಾ ಪರಂಪರೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ಆರಂಭವಾದ ಭಾರತ ಸಂಗೀತ ಸಮ್ಮೇಳನ–2026 ದೇಶದ ವಿವಿಧ ಭಾಗ ಗಳ ಕಲಾವಿದರು, ಕಲಾಭಿಮಾನಿಗಳು ಹಾಗೂ ವಿದ್ವಾಂಸರನ್ನು ಒಂದೇ ವೇದಿಕೆಗೆ ಕರೆ ತಂದಿತು.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ (One World One Family Mission)ಆಶ್ರಯದಲ್ಲಿ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಹಾಗೂ ನಾದ ಗುರುಕುಲಂ ಸಂಯುಕ್ತವಾಗಿ ಆಯೋಜಿಸಿರುವ ನಾಲ್ಕನೇ ಆವೃತ್ತಿ ಯ ಈ ರಾಷ್ಟ್ರೀಯ ಸಮ್ಮೇಳನವು 'ಕಲಾಸ್ರೋತಃ – ದಿ ಇಟರ್ನಲ್ ಸ್ಟ್ರೀಮ್ ಆಫ್ ಆರ್ಟ್' ಎಂಬ ಧ್ಯೇಯವಾಕ್ಯದಡಿ ಜು.13ರಿಂದ 15ರವರೆಗೆ ನಡೆಯಲಿದೆ. ಸಮ್ಮೇಳನವನ್ನು ಪದ್ಮವಿಭೂಷಣ್ ಪದ್ಮಾಸುಬ್ರಮಣ್ಯಂ(Padma Vibhushan Padmasubramaniam) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಕಾಡೆಮೀಸ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಬ್ಯೂರೋದ ನಿರ್ದೇಶಕ ಅನೀಶ್ ಪಿ.ರಾಜನ್, ಭರತನಾಟ್ಯ ಕಲಾವಿದೆ ಹಾಗೂ ಲೇಖಕಿ ನಂದಿನಿ ರಮಣಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಮಹೇಂದ್ರ ಡಿ., ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, ನಾದ ಗುರುಕುಲಂ ನಿರ್ದೇಶಕಿ ರೇವತಿ ರಾಮಚಂದ್ರನ್ ಹಾಗೂ ಸದ್ಗುರು ಮಧುಸೂದನ್ ಸಾಯಿ ಉಪಸ್ಥಿತರಿದ್ದರು.
ಭಾರತೀಯ ಕಲೆಯ ನಿರಂತರ ಹರಿವನ್ನು ಪ್ರತಿಬಿಂಬಿಸುವ 'ಕಲಾಸ್ರೋತಃ' ಪರಿಕಲ್ಪನೆಯಡಿ ನಡೆಯುತ್ತಿರುವ ಸಮ್ಮೇಳನವು ಗುರು–ಶಿಷ್ಯ ಪರಂಪರೆಯ ಸಂರಕ್ಷಣೆ, ಕಲಾ ಸಂಶೋಧನೆಗೆ ಉತ್ತೇಜನ, ಕಲಾತ್ಮಕ ಶ್ರೇಷ್ಠತೆ ಮತ್ತು ಸಂಪ್ರದಾಯ ಆಧಾರಿತ ಸೃಜನಶೀಲತೆಗೆ ಒತ್ತು ನೀಡುತ್ತಿದೆ.
ಮೂರು ದಿನಗಳ ಕಾಲ ದೇಶದ ಖ್ಯಾತ ಸಂಗೀತ ವಿದ್ವಾಂಸರು ಹಾಗೂ ನೃತ್ಯ ಕಲಾವಿದರಿಂದ ಸಂಗೀತ ಕಚೇರಿಗಳು, ನೃತ್ಯ ಪ್ರದರ್ಶನಗಳು, ಉಪನ್ಯಾಸ–ಪ್ರದರ್ಶನಗಳು, ವಿಚಾರ ಸಂಕಿರಣಗಳು ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಂಜೆ ಸತ್ಯಸಾಯಿ ಗ್ರಾಮದ ಶ್ರೀ ಸಾಯಿ ಕೃಷ್ಣ ಪ್ರೇಮಾಮೃತಂ ಸಭಾಂಗಣದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ರಸಿಕರನ್ನು ರಂಜಿಸಲಿವೆ.
ಜು.15ರಂದು ನಡೆಯುವ ಸಮಾರೋಪ ಸಮಾರಂಭದೊಂದಿಗೆ ಸಮ್ಮೇಳನ ತೆರೆ ಕಾಣಲಿದ್ದು, ಭಾರತೀಯ ಶಾಸ್ತ್ರೀಯ ಕಲೆಗಳ ವೈಭವವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸುವ ಸಂಕಲ್ಪಕ್ಕೆ ಈ ಸಮ್ಮೇಳನ ವೇದಿಕೆಯಾಗಲಿದೆ.