ಶಿಡ್ಲಘಟ್ಟ: ಮಾತೃ ಶ್ರೀ ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಶಿಡ್ಲಘಟ್ಟ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ನಿರ್ಗತಿಕ ಮಾಶಾಸನ ಫಲಾನುಭವಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ, ಅವರ ಯೋಗಕ್ಷೇಮ ವಿಚಾರಿಸುವ ಮೂಲಕ ಅರ್ಥಪೂರ್ಣ ವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಪ್ರಸಾದ್, ಮಾತೃ ಹೃದಯಿ ಹೇಮಾ ವತಿ ಅಮ್ಮನವರು ಸಮಾಜದ ನಿರ್ಗತಿಕರು, ವೃದ್ಧರು ಹಾಗೂ ನೊಂದ ಹೆಣ್ಣುಮಕ್ಕಳಿಗೆ ಆಸರೆಯಾಗುವಂತೆ ಹಲವು ಮಾನವೀಯ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Shidlaghatta News: ಶಿಡ್ಲಘಟ್ಟದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ: ಅನ್ನದಾಸೋಹ ಮೂಲಕ ಭಕ್ತರ ನಮನ
ವಾತ್ಸಲ್ಯ ಯೋಜನೆಯಡಿ ಪ್ರತಿ ತಿಂಗಳು ನಿರ್ಗತಿಕರಿಗೆ ರೂ.1000 ಮಾಶಾಸನ ವಿತರಣೆ, ವಾಸ್ತವ್ಯ ವ್ಯವಸ್ಥೆ ಇಲ್ಲದವರಿಗೆ ಮನೆ ನಿರ್ಮಾಣ, ಹಳೆಯ ಮನೆಗಳ ದುರಸ್ಥಿ, ಪ್ರತಿ ವರ್ಷ ಬಟ್ಟೆ ಮತ್ತು ಪಾತ್ರೆ ಕಿಟ್ ವಿತರಣೆ ಸೇರಿದಂತೆ ಅನೇಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಜೊತೆಗೆ, ನೊಂದ ಹೆಣ್ಣುಮಕ್ಕಳ ಸಾಂತ್ವಾನಕ್ಕಾಗಿ ‘ಗೆಳತಿ’ ವಿಶೇಷ ಸಮಾಲೋಚನಾ ಕೇಂದ್ರ ಸ್ಥಾಪಿಸಿರುವುದು ಗಮನಾರ್ಹ ಎಂದು ತಿಳಿಸಿದರು.
ರಾಜ್ಯಾದ್ಯಂತವೂ ಇವರ ಹುಟ್ಟುಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಮನ್ವಯ ಅಧಿಕಾರಿ ಅರುಣ್, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.