ಚಿಂತಾಮಣಿ: ನಗರದ ಹಳೆಯ ಐಡಿಎಸ್ಎಂಟಿ ಮಾರುಕಟ್ಟೆಯ ಮಳಿಗೆಗಳ ತೆರವು ಹಾಗೂ ಪುನರ್ನಿರ್ಮಾಣದ ಕುರಿತಂತೆ ಉದ್ಭವಿಸಿರುವ ಗೊಂದಲಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ನಗರಸಭೆ ಕಾರ್ಯಾಲಯದಲ್ಲಿ ವ್ಯಾಪಾರಸ್ಥರೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಾರುಕಟ್ಟೆಯ ಅಭಿವೃದ್ಧಿ ದೃಷ್ಟಿಯಿಂದ ಹಳೆಯ ಮಳಿಗೆಗಳನ್ನು ತೆರವುಗೊಳಿಸಿ ಸುಸಜ್ಜಿತ ಸಂಕೀರ್ಣ ನಿರ್ಮಿಸುವ ಸರ್ಕಾರದ ಯೋಜನೆಯ ಬಗ್ಗೆ ವಿವರಿಸಿದರು.ಮಳಿಗೆಗಳನ್ನು ನಂಬಿಕೊAಡಿರುವ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಅನ್ಯಾಯ ವಾಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕೃತವಾಗಿ ಮಳಿಗೆಗಳನ್ನು ಹೊಂದಿರುವ ಮತ್ತು ಬಾಡಿಗೆ ಪಾವತಿಸುತ್ತಿರುವ ವ್ಯಾಪಾರಸ್ಥರ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ. ಅರ್ಹ ವ್ಯಾಪಾರಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಇದನ್ನೂ ಓದಿ: Chinthamani News: ಚಿಂತಾಮಣಿ ನಗರವಾಸಿಗಳಿಗೆ ಸುವರ್ಣಾವಕಾಶ: ಆಸ್ತಿ ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ ವಿಸ್ತರಣೆ
ಐಡಿಎಸ್ಎಂಟಿ ಮಾರುಕಟ್ಟೆಯ ಅಭಿವೃದ್ಧಿ ನಗರದ ಬೆಳವಣಿಗೆಗೆ ಪೂರಕವಾಗಿದೆ.ವ್ಯಾಪಾರಸ್ಥರು ಆತಂಕ ಪಡುವ ಅಗತ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು. ನಗರಸಭೆಯ ಅಧಿಕಾರಿಗಳಿಗೆ ಬಾಕಿ ಇರುವ ಬಾಡಿಗೆ ವಸೂಲಿ ಮತ್ತು ದಾಖಲೆಗಳ ಸಮರ್ಪಕ ನಿರ್ವಹಣೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆ ಸಂಕೀರ್ಣದಲ್ಲಿ ಸ್ವಚ್ಛತೆ,ನೀರು ಮತ್ತು ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಗಳನ್ನು ಕಲ್ಪಿಸಲು ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದ ಅವರು ಮಳಿಗೆಗಳ ವಿಚಾರದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮಾರುಕಟ್ಟೆಯ ಮಳಿಗೆಗಳ ಬಾಡಿಗೆ ಪಾವತಿ,ಹಂಚಿಕೆ ಪ್ರಕ್ರಿಯೆ ಮತ್ತು ಮೂಲಸೌಕರ್ಯಗಳ ಬಗ್ಗೆ ವ್ಯಾಪಾರಸ್ಥರ ಅಹವಾಲುಗಳನ್ನು ಆಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಜಿ ಎನ್ ಚಲಪತಿ, ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿ ದ್ದರು.