ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚೇನಹಳ್ಳಿ ತಾಲೂಕು ಗಿಡಗಾನಹಳ್ಳಿ ಗ್ರಾಮದದಲ್ಲಿ ಪತ್ನಿಯನ್ನು ಕೊಂದು ಗಂಡ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಪವಿತ್ರಾಳನ್ನು ಕೊಂದು ಪರಾರಿಯಾಗಿರುವ ಪತಿ ಹೆಸರು ವೆಂಕಟೇಶ್ ಎಂದು ತಿಳಿದು ಬಂದಿದೆ.
ವೆಂಕಟೇಶ್ ಮೃತೆಯಾದ ಪವಿತ್ರಾಳನ್ನು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದು ಇದಕ್ಕೆ ಸಾಕ್ಷಿಯೆಂಬಂತೆ ಮೂರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಕೂಡ ಇವರಿಬ್ಬರ ನಡುವೆ ಅನ್ಯೋನ್ಯತೆಯ ಕೊರತೆಯಿದ್ದು, ಇದರ ಜತೆಗೆ ಎರಡು ಮೂರು ವರ್ಷಗಳಿಂದ ಹಣದ ವಿಚಾರಕ್ಕಾಗಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಗಂಡ ಹೆಂಡಿರ ಮಧ್ಯೆ ಜಗಳ ನಡೆಯುತ್ತಿದ್ದು ಕಳೆದ ಶನಿವಾರ ರಾತ್ರಿ ಪತಿ ವೆಂಕಟೇಶ್ ಪವಿತ್ರಾಳನ್ನು ಕೊಂದು ಪರಾರಿ ಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: Chinthamani News: ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಿಎಲ್ಒಗಳ ಬಳಕೆ? ಸೀಕಲ್ ಆನಂದ್ ಗೌಡ ಆಕ್ರೋಶ...!
ಮಾಧ್ಯಮದೊಂದಿಗೆ ಮಾತನಾಡಿದ ಪವಿತ್ರಳ ಸಹೋದರ ಅಶೋಕ್ ಕುಮಾರ್ 2011ರಲ್ಲಿ ವೆಂಕಟೇಶ್ಗೆ ನನ್ನ ಸಹೋದರಿ ಪವಿತ್ರಾಳನ್ನು ಕೊಟ್ಟು ನಾಲ್ಕುಜನ ಮೆಚ್ಚುವ ಹಾಗೆ ಮದುವೆ ಮಾಡಿಕೊಟ್ಟಿದ್ದೆವು. ಮದುವೆ ಆದಾಗಿನಿಂದಲೂ ಯಾವಾಗಲೂ ಜಗಳ ನಡೆಯುತ್ತಿತ್ತು.ನಾವು ಬಂದು ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳಿದರೆ ಮನೆಯನ್ನು ಬೇರೆಯವರಿಗೆ ಒತ್ತೆ ಇಟ್ಟು ಹಣ ಪಡೆದಿದ್ದು ಅದರ ಬಡ್ಡಿ ಕಟ್ಟಿಲ್ಲವೆಂದು ಹಣ ಕೊಡು ಎಂದು ತೊಂದರೆ ಕೊಡುವ ಜತೆಗೆ ಕುಡಿದು ಬಂದು ಹೊಡೆಯುವುದು ಮಾಮೂಲಿಯಾಗಿತ್ತು.
ಕಳೆದ ಆರು ತಿಂಗಳು ಹಿಂದೇ ರಕ್ತ ಬರುವ ಹಾಗೆ ಹೊಡೆದು ಆಕೆ ಪ್ರಜ್ಷೆ ತಪ್ಪಿದ ಕೂಡಲೇ ಓಡಿ ಹೋಗಿದ್ದ. ಆಗಲೂ ರಾಜಿ ಮಾಡಿ ಗಂಡ ಹೆಂಡತಿ ಸಂಸಾರ ಚೆನ್ನಾಗಿರಬೇಕು ಎಂದು ಬುದ್ದಿ ಹೇಳಿದ್ದೆವು. ಆದರೆ ಶನಿವಾರ ರಾತ್ರಿ ಪ್ರಾಣವನ್ನೇ ತೆಗೆದು ಬಿಟ್ಟಿದ್ದಾನೆ. ಇಂತಹವರು ಕ್ಷಮೆಗೆ ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರ ತಿಳಿದು ಕೂಡಲೇ ಸ್ಥಳಕ್ಕೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತು ಮಂಚೇನಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಪುನೀತ್ ನಂಜರಾಯ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು ಆರೋಪಿಗಾಗಿ ಬೆಲೆಯನ್ನು ಬೀಸಿದ್ದಾರೆ.