ಚಿಕ್ಕಬಳ್ಳಾಪುರ: ರಾಜ್ಯ ಸರಕಾರ ಖಾಲಿ ಇರುವ 56342 ಹುದ್ದೆಗಳ ಭರ್ತಿಯಲ್ಲಿ ಕೂಡಲೇ ನಾಗಮೋಹನ್ ದಾಸ್ ವರದಿಯಲ್ಲಿ ಸೂಚಿಸಿರುವಂತೆ ಒಳಮೀಸಲಾತಿ(Internal reservation)ಗೆ ಅನುಗುಣವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಸಮಾಜ ಕಲ್ಯಾಣ ಇಲಾಖೆ ಸಚಿವರು ಸೇರಿದಂತೆ ಬಲಗೈ ಸಮುದಾ ಯದ ನಾಯಕರ ಒತ್ತಡಕ್ಕೆ ಕಟ್ಟು ಬಿದ್ದು ಬದಲಾವಣೆ ಮಾಡಿದಲ್ಲಿ ಮಾದಿಗ ಸಮುದಾಯದಿಂದ ಉಗ್ರö ಹೋರಾಟ ನಡೆಸಲಾಗುವುದು ಎಂದು ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ ಸರಕಾರವನ್ನು ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಮಾದಾರ ಮಹಾಸಭಾ ವತಿಯಿಂದ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮಾದಿಗ ಸಂಬಂಧಿತ ಜಾತಿಗಳು ಒಳಮೀಸಲಾತಿ ಸಂಬಂಧ ನಡೆಸಿದ ಹೋರಾಟದ ಭಾಗವಾಗಿ ನೇಮಕಾತಿ ಸ್ಥಗಿತವಾಗಿತ್ತು. ರಾಜ್ಯಪಾಲರು ಇತ್ತೀಚೆಗೆ ಒಳಮೀಸಲು ವಿಧೆಯಕಕ್ಕೆ ಅಂಕಿತ ಹಾಕುವ ಮೂಲಕ ನೇಮಕಾತಿಗೆ ಚಾಲನೆ ನೀಡಿದಂತಾಗಿದೆ.
ಪ್ರಸ್ತುತ ನೇಮಕಾತಿ ನಡೆಯುವ 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಶೇ.21ರಂತಾಗಲಿ, ಅಥವಾ ಶೇ 18 ರಂತಾಗಲಿ ಹೇಗಾದರೂ ಆಗಲಿ ಒಳಮೀಸಲಾತಿಯಂತೆಯೇ ನಡೆಯಬೇಕು. ಆ ಮೂಲಕ 35 ವರ್ಷಗಳ ಹೋರಾಟಕ್ಕೆ ನ್ಯಾಯ ನೀಡಬೇಕು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳಬೇಕು. ಒತ್ತಡಕ್ಕೆ ಮಣಿದಲ್ಲಿ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯದ ಪ್ರತಿರೋಧ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬದಲು ನಮ್ಮ ಸಮುದಾಯದ ಪಾತ್ರ ಹೆಚ್ಚಿದೆ. ಇದರ ಋಣ ತೀರಿಸಬೇಕಾದರೆ ಮೊದಲು ಒಳಮೀಸಲಾತಿಯಂತೆ ನೇಮಕಾತಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಆನೂರು ಮೂರ್ತಿ ಮಾತನಾಡಿ, ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಿಕೊಂಡು ಬರುತ್ತಿದ್ದಾರೆ. ಹೀಗೆ ಮುಂದು ವರಿದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿ ತಾಲೂಕಿನಿಂದ ನಮ್ಮ ಸಮುದಾಯದವರು ಕಾಲ್ನಡಿಗೆ ಮುಖಾಂತರ ವಿಧಾನ ಸೌಧ ಮುತ್ತಿಗೆ ಹಾಕಲಾಗುತ್ತದೆ. ಶಾಸಕರಾದ ಪ್ರದೀಪ್ ಈಶ್ವರ್, ಸುಬ್ಬಾರೆಡ್ಡಿ, ಸಚಿವ ಸುಧಾಕರ್ ನಮ್ಮ ಸಮುದಾಯದ ಪರ ದನಿ ಎತ್ತಬೇಕು. ಆ ಮೂಲಕ ನ್ಯಾಯಯುತ ಹಕ್ಕುಗಳ ಪಡೆಯಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಗೌರಿಬಿದನೂರು ತಾಲೂಕು ಅಧ್ಯಕ್ಷ ನಾಗಾರ್ಜುನ, ಕೆಪಿಸಿಸಿ ಮಾಧ್ಯಮ ವಕ್ತಾರ ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ದಿಬ್ಬುರು ಶ್ರೀನಿವಾಸ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮುನಿಯಪ್ಪ, ಮಾದಾರ ಮಹಾ ಸಭಾ ಸಮಿತಿಯ ರಾಜ್ಯ ಮುಖಂಡ ತಿರುಮಳಪ್ಪ, ವಿಜಯ್ ಕೃಷ್ಣ, ದೇವರಾಜು, ಮೈಲಾರಪ್ಪ, ಜ.ಕೃಷ್ಣಪ್ಪ, ಮತ್ತಿತರರು ಈ ಸುದ್ಧಿಗೋಷ್ಠಿಯಲ್ಲಿ ಇದ್ದರು.