ಚಿಕ್ಕಬಳ್ಳಾಪುರ ತಾಲ್ಲೂಕು ಕಸಾಪದಿಂದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ಸಂಸ್ಥಾಪನಾ ದಿನಾಚರಣೆ
ಚಿಕ್ಕಬಳ್ಳಾಪುರ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಶ್ರಮದಿಂದ 1915ರಲ್ಲಿ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ನೂರ ಹನ್ನೆರಡನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರವುದು ಕನ್ನಡಿಗರ ಸೌಭಾಗ್ಯ ಎಂದರು.
ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಕಸಾಪದ 112ನೇ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮೈಸೂರು ಸಂಸ್ಥಾನದ ಒಡೆಯರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಡಳಿತಾವಧಿ ಯಲ್ಲಿ ಜನಸಾಮಾನ್ಯರ ಬದುಕಿಗೆ ಬೇಕಾಗಿರುವ ಆರೋಗ್ಯ, ಶಿಕ್ಷಣ, ಕೈಗಾರಿಗೆ, ಕೃಷಿ, ವಾಣಿಜ್ಯೋ ದ್ಯಮ ಇತ್ಯಾದಿ ಎಲ್ಲಾ ವಿಭಾಗಗಳ ಅಭಿವೃದ್ಧಿಗೆ ಶ್ರಮಿಸಿ ಉತ್ತಮ ಆಡಳಿತ ನೀಡಿದರು.
ಅದೇ ರೀತಿ ನಾಡು ನುಡಿ, ಕಲೆ ,ಸಂಸ್ಕೃತಿಯ ಬೆಳವಣಿಗೆ ಒಂದು ಸಂಸ್ಥೆಯ ಅವಶ್ಯಕತೆ ಯನ್ನು ಮನಗಂಡು ನಾಡಿನ ಹಿರಿಯ ಸಾಹಿತಿ ದಿಗ್ಗಜರೊನ್ನೊಳಗೊಂಡಂತೆ ಸರ್.ಎಂ.ವಿ.ವಿಶ್ವೇಶ್ವರಯ್ಯ ನವರ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು ಎಂದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಎಂಬುದು ಭವಿಷ್ಯದ ಸೋಪಾನವಾಗಬೇಕು: ಸಂದೀಪ್ ರೆಡ್ಡಿ ಅಭಿಮತ
ಸರ್.ಮಿರ್ಜಾ ಇಸ್ಮಾಯಿಲ್ ಅವರು ಈಗಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕಛೇರಿ ಇರುವ ಜಾಗವನ್ನು ಪರಿಷತ್ತಿಗೆ ನೀಡುವ ಮೂಲಕ ನಾಡಿನ ಹೆಮ್ಮೆಯ ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಿದರು. 1938ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರಿಸಲಾಯಿತು ಎಂದರು.
ಹೆಚ್.ವಿ.ನಂಜುಂಡಯ್ಯ ಕಸಾಪದ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಯನ್ನು ಹೊಂದಿರುವ ಪರಿಷತ್ತಿನಲ್ಲಿ ಹಲವಾರು ದಿಗ್ಗಜರು ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಯು ಪುಸ್ತಕ ಪ್ರಕಟಣೆ,ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ನಾಡಿನಾದ್ಯಂತ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ.ಕಾವಾ ಜಾಣ ಅಂತಹ ಪರೀಕ್ಷೆಗಳನ್ನು ನಡೆಸಿ ಭಾಷೆ ಕಲಿಸುವ ಮಹತ್ಕಾರ್ಯವನ್ನು ಪರಿಷತ್ತು ಮಾಡುತ್ತಿದೆ. ಇದುವರೆಗೂ 87 ಅಖಿಲ ಭಾರತ ಸಮ್ಮೇಳನಗಳನ್ನು ಮಾಡಿ ಕನ್ನಡಿಗರ ಮನೆಮಾತಾಗಿದೆ. ಹೊರನಾಡ ಘಟಕಗಳನ್ನು ಹೊಂದಿರುವ ಪರಿಷತ್ತು ನಾಡಿನ ಬಹುದೊಡ್ಡ ಅಸ್ಮಿತೆ ಎಂದು ಬಣ್ಷಿಸಿದರು.
ಜಿಲ್ಲಾಧ್ಯಕ್ಷರಾದ ಡಾ. ಕೋಡಿರಂಗಪ್ಪ ಮಾತನಾಡಿ,ಮೈಸೂರು ಸಂಸ್ಥಾನವು ದೇಶದಲ್ಲಿಯೇ ಅತ್ಯಂತ ಜನಾನುರಾಗಿ ಆಡಳಿತ ನೀಡಿ,ಮಹಾತ್ಮ ಗಾಂಧಿಯವರಿಂದ ಪ್ರಶಂಸೆ ಪಡೆದಿತ್ತು. ಮಹಿಳೆಯರಿಗೆ, ಶೋಷಿತ ಸಮುದಾಯಗಳ ಏಳ್ಗೆಗೆ ಬಹುದೊಡ್ಡ ಕೊಡುಗೆ ನೀಡಿದ ನಾಲ್ವಡಿ ಯವರು, ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಕನ್ನಡಿಗರ ಹೃನ್ಮನಗಳಲ್ಲಿ ಅಜರಾಮರರಾಗಿದ್ದಾರೆ ಎಂದರು.
ಇಂತಹ ಪರಂಪರೆ ಹೊಂದಿರುವ ಕಸಾಪ ಇತ್ತೀಚೆಗೆ ರಾಜಕೀಯ ಒಳಸುಳಿಗೆ ತುತ್ತಾಗಿ ಅನಪೇಕ್ಷಿತ ವಿಚಾರಗಳಿಗೆ ಸುದ್ದಿಯಾಗುತ್ತಿರುವುದು ಬೇಸರ ತರಿಸಿದೆ. ಪರಿಷತ್ತಿನ ಗೌರವ ಘನತೆಗೆ ಚ್ಯುತಿ ಬಾರ ದಂತೆ ಕಾಪಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಈ ಬಾರಿ ಹತ್ತನೇ ತರಗತಿಯಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಮಂಚನಬಲೆಯ ಪ್ರಣತಿ ರಾಜ್ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಯಲುವಹಳ್ಳಿ ಸೊಣ್ಣೇಗೌಡ ವಹಿಸಿದ್ದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಸಿ.ಎಂ.ಮುನಿಕೃಷ್ಣಪ್ಪ, ವಾಪಸಂದ್ರ ಸರ್ಕಾರಿ ಬಾಲಕೀ ಯರ ಪ್ರೌಢಶಾಲೆಯ ಸಹಶಿಕ್ಷಕರಾದ ಟಿ.ವಿ.ರಾಜಣ್ಣ, ಜಿ.ಅಣ್ಣಮ್ಮ, ನಂದಿ ಹೋಬಳಿ ಕಸಾಪ ಘಟಕದ ಅಧ್ಯಕ್ಷರಾದ ಎಂ.ಮುನೇಗೌಡ, ಶ್ರೀನಿವಾಸ್, ಸೌಭಾಗ್ಯ ಕಾಲೇಜಿನ ಬೋಧಕ ವರ್ಗ ಉಪಸ್ಥಿತರಿದ್ದರು.