ಚಿಕ್ಕಬಳ್ಳಾಪುರ: ತಾಲೂಕಿನ ಸೊಣ್ಣಾಪುರ ಜೋಡಿ ಗ್ರಾಮದ ಸರ್ವೆ ನಂ. 27/1ಕ್ಕೆ ಸಂಬಂಧಿಸಿದ ಸುಮಾರು 2 ಎಕರೆ 15 ಗುಂಟೆ ಭೂಮಿಯ ಮಾಲೀಕತ್ವ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಎರಡು ಪಕ್ಷಗಳ ನಡುವೆ ನಡೆಯುತ್ತಿರುವ ಸಿವಿಲ್ ವ್ಯಾಜ್ಯದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ.
ಇದನ್ನೂ ಓದಿ: Chikkaballapur News: ಕೆಂಪೇಗೌಡ ಜಯಂತಿ ಗದ್ದಲ ಪ್ರಕರಣ: ಸಂಸದ ಡಾ.ಕೆ.ಸುಧಾಕರ್ ವಿರುದ್ಧ ತನಿಖೆಗೆ ಆಗ್ರಹಿಸಿ ಎಸ್ಪಿಗೆ ದೂರು
ಭೂಮಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ತಮ್ಮ ಪರವಾಗಿ ನ್ಯಾಯಾಲಯದಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶವಿದೆ ಎಂದು ಒಂದು ಪಕ್ಷ ಹೇಳಿ ಕೊಂಡರೆ, ಮತ್ತೊಂದು ಪಕ್ಷ ತಾವು ಹಲವು ವರ್ಷಗಳಿಂದ ಸದರಿ ಭೂಮಿಯ ಸ್ವಾಧೀನ ಮತ್ತು ಅನುಭವದಲ್ಲಿದ್ದೇವೆ ಎಂದು ಪ್ರತಿಪಾದಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುರೇಶ್ ಅವರು ಎರಡೂ ಕಡೆಯವರ ಅಹವಾಲು ಆಲಿಸಿ, ಸಂಬಂಧಿತ ದಾಖಲೆಗಳನ್ನು ಪೊಲೀಸ್ ಠಾಣೆಗೆ ಸಲ್ಲಿಸು ವಂತೆ ಸೂಚಿಸಿದ್ದು, ನ್ಯಾಯಾಲಯದ ಆದೇಶ ಹಾಗೂ ದಾಖಲೆಗಳ ಪರಿಶೀಲನೆಯ ನಂತರ ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಕುರಿತು ಎರಡೂ ಪಕ್ಷಗಳು ಪರಸ್ಪರ ವಿರುದ್ಧ ಆರೋಪಗಳನ್ನು ಮಾಡಿದ್ದು, ಪ್ರಕರಣವು ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಅಂತಿಮ ತೀರ್ಪು ಬರುವವರೆಗೆ ವಿವಾದದ ಸತ್ಯಾಸತ್ಯತೆ ನ್ಯಾಯಾಂಗ ಪ್ರಕ್ರಿಯೆಯಲ್ಲಿಯೇ ನಿರ್ಧಾರವಾಗಬೇಕಿದೆ.