ಕೈವಾರ: ಲೌಕಿಕ ಪ್ರಪಂಚದಲ್ಲಿ ಮುಳುಗಿರುವವರು ‘ನಾನು, ನನ್ನದು’ ಎಂಬ ಸ್ವಾರ್ಥದ ಅಭಿಮಾನ ತೊರೆದು ಗುರುವಿಗೆ ಶರಣಾಗಬೇಕು. ಮಾನವ ಜನ್ಮದಲ್ಲಿಯೇ ಮೋಕ್ಷ ಸಾಧಿಸಿಕೊಳ್ಳಲು ಅಗತ್ಯವಾದ ಬುದ್ಧಿಯನ್ನು ಬೆಳೆಸಿಕೊಂಡು ಜಾಗೃತರಾಗಬೇಕು ಎಂಬುದು ಕೈವಾರ ತಾತಯ್ಯನವರ ಬೋಧನೆಯಾಗಿತ್ತು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಹೇಳಿದರು.
ಶ್ರೀಕ್ಷೇತ್ರ ಕೈವಾರದ ಗುಹೆಯ ಬಳಿಯ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯನವರ 300ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ 12ನೇ ತಿಂಗಳ ಶ್ರೀರಾಮ ಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Kaiwara News: ಗುರುಪೂಜಾ ಸಂಗೀತೋತ್ಸವಕ್ಕೆ ವಿದ್ಯುಕ್ತ ತೆರೆ
ಸನಾತನ ಗುರು–ಶಿಷ್ಯ ಪರಂಪರೆಯು ವಿಶೇಷತೆಯಿಂದ ಕೂಡಿದ್ದು, ಪರಿಪೂರ್ಣ ಜ್ಞಾನದ ಸಂಪತ್ತನ್ನು ಹೊಂದಿರುವ ಗುರುವಿನ ಅನುಗ್ರಹ ಪಡೆಯುವುದು ಸುಲಭದ ಮಾತಲ್ಲ. ಮೋಕ್ಷದ ಮಾರ್ಗವನ್ನು ತೋರಿಸುವಂತಹ ಬದ್ಧತೆ ಹಾಗೂ ವಿಧೇಯತೆಯಿಂದ ಕೂಡಿರುವ ಶಿಷ್ಯನನ್ನು ಕಾಣುವುದು ಅಪರೂಪ ಎಂದು ತಾತಯ್ಯನವರು ಹೇಳಿದ್ದಾರೆ. ಮಾನವ ಜನ್ಮದಲ್ಲಿಯೇ ಮೋಕ್ಷ ಪಡೆಯಲು ಸಾಧ್ಯವಿದ್ದು, ಅದಕ್ಕಾಗಿ ಅಗತ್ಯವಾದ ಬುದ್ಧಿಯನ್ನು ಬೆಳೆಸಿಕೊಂಡು ಜಾಗೃತರಾಗ ಬೇಕು ಎಂಬ ಸಂದೇಶವನ್ನು ಸಾರಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗಂಟಾನಾದ, ಸುಪ್ರಭಾತ ಹಾಗೂ ಗೋ ಪೂಜೆ ನೆರವೇರಿಸಲಾಯಿತು. ಬಳಿಕ ಗುಹೆಯ ಬಳಿಯ ಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರಾಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಮಕೋಟಿ ನಡೆಯುವ ಸ್ಥಳದಲ್ಲಿ ಶ್ರೀಸೀತಾರಾಮರ ವಿಗ್ರಹಗಳು ಹಾಗೂ ಕೈವಾರ ತಾತಯ್ಯ ನವರ ಭಾವಚಿತ್ರಗಳೊಂದಿಗೆ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು.
ಧರ್ಮಾಧಿಕಾರಿ ದಂಪತಿ ದೀಪ ಬೆಳಗಿಸುವ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು. ನಿರಂತರ 24 ಗಂಟೆಗಳ ಕಾಲ ನಡೆದ ಜಪಯಜ್ಞದಲ್ಲಿ ಮೂರು ತಂಡಗಳಾಗಿ ಭಕ್ತರು ಪಾಲ್ಗೊಂಡು ಶ್ರೀರಾಮಭವತಾರಕ ಮಂತ್ರವನ್ನು ಪಠಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ನಾಮಸ್ಮರಣೆಯಲ್ಲಿ ಭಾಗವಹಿಸಿ ಪುನೀತರಾದರು. ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಶ್ರೀಯೋಗಿನಾರಾಯಣ ಮಠದ ಉಪಾಧ್ಯಕ್ಷ ಜೆ.ವಿ.ಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯನಾರಾಯಣ, ಶ್ರೀಯೋಗಿನಾರಾಯಣ ಸಂಕೀರ್ತನಾ ಯೋಜನೆ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್, ಸದಸ್ಯ ಕೆ.ನರಸಿಂಹಪ್ಪ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಉಪಸ್ಥಿತರಿದ್ದರು.