ಚಿಕ್ಕಬಳ್ಳಾಪುರ: ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಸರಕಾರ ಈ ಕೂಡಲೇ ಹೆಚ್ ಎನ್ ವ್ಯಾಲಿಯ ನೀರನ್ನು 3ನೇ ಹಂತದ ಶುದ್ಧೀಕರಣ ಮಾಡಿಯೇ ಕೆರೆಗಳಿಗೆ ಹರಿಸಬೇಕು. ಈಗಾಗಲೇ ಲೇಪಾಕ್ಷಿವರೆಗೆ ಬಂದಿರುವ ಕೃಷ್ಣಾ ನದಿಯ ಜಿಲ್ಲೆಗೆ ಹರಿಸಿ. ತುರ್ತಾಗಿ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಿ ಕೆರೆಗಳಿಗೆ ಶುದ್ಧ ನೀರನ್ನು ಕೊಡುವ ಕೆಲಸ ಮಾಡಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯಲು ಏ.7ರಂದು ಬೃಹತ್ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಕೃಷ್ಣ ಫೌಂಡೇಷನ್ ಅಧ್ಯಕ್ಷ ಹರೀಶ್ರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಹರಿಕೃಷ್ಣ ಫೌಂಡೇಷನ್ ವತಿಯಿಂದ ಏರ್ಪಡಿ ಸಿದ್ದ ಏ.7ರ ಬೃಹತ್ ಪಾದಯಾತ್ರೆ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಂಬಂಧ ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತಪರ ಸಂಘಟನೆಗಳು, ಜನಪರ ಕಾಳಜಿಯುಳ್ಳ ಸಂಸ್ಥೆಗಳು ಅವಿರತ ವಾಗಿ ಹೋರಾಟ ಮಾಡುತ್ತಲೇ ಬಂದಿವೆ. ಆದರೂ ಜಿಲ್ಲಾಡಳಿತ ಮತ್ತು ಸರಕಾರಗಳು ಇತ್ತ ದಿವ್ಯ ನಿರ್ಲಕ್ಷ್ಯ ಹರಿಸಿರುವ ಕಾರಣ, ನಮ್ಮ ಹರಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಂದವಾರ ಕೆರೆಯ ನೀರನ್ನು ಮಂತ್ರಿ ಮುಖ್ಯಮಂತ್ರಿಗಳು ಶಾಸಕ ಸಚಿವರಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ಕಳಿಸುವ ಕೆಲಸ ಮಾಡಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಏ.5ರಂದು ಬಾಬು ಜಗಜೀವನ್ ರಾಮ್ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ: ಪಟ್ರೇನಹಳ್ಳಿ ಕೃಷ್ಣ
ಏ.7ರಂದು ಮಂಗಳವಾರ ನಗರದ ಶನಿ ಮಹಾತ್ಮಾಸ್ವಾಮಿ ದೇವಾಲಯದಿಂದ ಜಿಲ್ಲಾಡಳಿತದವರೆ ಸಾವಿರಾರು ಮಂದಿ ಸೇರಿ ಕಾಲ್ನಡಿಗೆ ಜಾಥಾ ನಡೆಸಲು ತೀರ್ಮಾನಿಸ ಲಾಗಿದೆ.
ಶಾಂತಿಯುತ ಬೃಹತ್ ಪಾದಯಾತ್ರೆ ಯಶಸ್ವಿಯಾಗಿಸಲು ಪ್ರಜ್ಞಾವಂತರಾದ ಪ್ರತಿ ಯೊಬ್ಬರೂ ಸ್ವಯಂ ಪ್ರೇರಿತರಾಗಿ ಧರ್ಮಜಾತಿ ಮತ ಪಕ್ಷಬೇಧವಿಲ್ಲದೆ ಭಾಗವಹಿಸ ಬೇಕೆಂದು ಜಿಲ್ಲೆಯ ಸಮಸ್ತ ನಾಗರೀಕರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ಮೆರವಣಿಗೆಯು ಬಿಬಿ ರಸ್ತೆಯಲ್ಲಿ ಬರುವ ಅಭಿಷೇಕ್ ಹೋಟೆಲ್ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಇದು ಕೇವಲ ಪಾದಯಾತ್ರೆಯ ಜಾಥಾ ಮಾತ್ರವಲ್ಲ, ಬದಲಿಗೆ ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳ ರೈತರ ಶುದ್ಧ ಕುಡಿಯುವ ನೀರು ಪಡೆಯುವ ಒಕ್ಕೊರಲ ಆಗ್ರಹವಾಗಿದೆ ಎಂದರು.
ಹೆಚ್.ಎನ್.ವ್ಯಾಲಿಯ ನೀರನ್ನು 3 ಹಂತದಲ್ಲಿ ಶುದ್ಧೀಕರಿಸಿ ಹರಿದಿ ಎಂಬ ಆಗ್ರಹದ ಜತೆಗೆ ಮುಂದುವರೆದ ಭಾಗವಾಗಿ ಆಂಧ್ರದ ಗಡಿಯವರೆಗೆ ಬಂದಿರುವ ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ಹರಿಸಲು ಅವಳಿ ರಾಜ್ಯಗಳ ಮುಖ್ಯಮಂತ್ರಿಗಳು ನಡುವೆ ಚರ್ಚೆ ನಡೆಸಬೇಕು. ಬರಡು ಜಿಲ್ಲೆಗಳ ಕುಡಿಯುವ ನೀರಿನದಾಹ ನೀಗಿಸುವ ಏಕೈಕ ಉದ್ದೇಶದಿಂದ ಪ್ರಾರಂಭ ವಾಗಿರುವ ಎತ್ತಿನ ಹೊಳೆ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸಿ ಜಿಲ್ಲೆಗೆ ಹರಿಸುವ ಕೆಲಸ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ ಅವರು ಹೋರಾಟಕ್ಕೆ ಬೆಂಬಲ ಸೂಚಿಸಲು 9482817789 ಸಂಖ್ಯೆಗೆ ಕರೆ ಮಾಡಬೇಕು ಎಂದು ಮನವಿ ಮಾಡಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ಏ.7ರಂದು ನಡೆಯಲಿರುವ ಕಾಲ್ನಡಿಗೆ ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆಯ ನಾನಾ ಭಾಗಗಳಿಂದ ಜನತೆ ಸ್ವಯಂ ಪ್ರೇರಣೆಯಿಂದ ಬಂದು ಕುಡಿಯುವ ಶುದ್ಧ ನೀರಿನ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದರು.
ಜಿಲ್ಲಾಧಿಕಾರಿಗಳು ನಮ್ಮನ್ನು ಜಿಲ್ಲಾಡಳಿತ ಭವನದ ಎದುರು ಬಿಟ್ಟುಕೊಳ್ಳುವ ಮನಸ್ಸು ಮಾಡದಿದ್ದಲ್ಲಿ ಶಿಡ್ಲಘಟ್ಟ ವೃತ್ತಕ್ಕೆ ಬಂದು ಮನವಿ ಸ್ವೀಕರಿಸಿದರೆ ಇಲ್ಲಿಯೇ ಮನವಿ ಪತ್ರ ಕೊಟ್ಟು ಹೋರಾಟವನ್ನು ಮೊಟಕುಗೊಳಿಸಲಾಗುವುದು.
ಈ ವೇಳೆ ಮುಷ್ಟೂರು ಹರೀಶ್, ಬಿ.ಎನ್.ಬಾಲಕುಂಟಹಳ್ಳಿ ಗಂಗಾಧರಪ್ಪ, ಕೆಳಗಿನ ತೋಟ ಮಂಜುನಾಥ್ ಗೌಡ, ತಿಪ್ಪೇನಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ಮುರಳೀಧರ್, ಟ್ರಸ್ಟ್ ಖಜಾಂಚಿ ಬಿ.ಪಿ.ಕೇಶವ, ಹೋರಾಟಗಾರ ವಾಪಸಂದ್ರ ಪ್ರದೀಪ್ ಕುಮಾರ್ ಸೇರಿದಂತೆ ಇತರರು ಇದ್ದರು.