ಬಾಗೇಪಲ್ಲಿ: ಗ್ರಾಮೀಣ ಭಾಗದ ರೈತರ ಕಲ್ಪವೃಕ್ಷವಾಗಿರುವ ಹಾಲು ಉತ್ಪಾಧಕ ಸಹಕಾರ ಸಂಘಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ದಿಗೊಳಿಸುವುದರ ಜತೆಗೆ ಚಿಮುಲ್ ಒಕ್ಕೂಟವನ್ನು ಆರ್ಥಿಕವಾಗಿ ಮುನ್ನಡೆಸುವುದೆ ಚಿಮುಲ್ ಆಡಳಿತ ಮಂಡಳಿಯ ಮುಖ್ಯ ಉದ್ದೇಶವಾಗಿದ್ದು ಒಕ್ಕೂಟದ ಅಭಿವೃದ್ದಿಗೆ ಹಾಲು ಉತ್ಪಾಧಕರು ಕೈಜೋಡಿಸಬೇಕಾಗಿದೆ ಎಂದು ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಹೇಳಿದರು.
ಬಾಗೇಪಲ್ಲಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆವರಣ ದಲ್ಲಿ ಅಯೋಜಿಸಿದ್ದ ನೂತನ ಚಿಮುಲ್ ಅಧ್ಯಕ್ಷರಾಗಿ ಅಯ್ಕೆಗೊಂಡಿರುವ ವಿ.ಮಂಜು ನಾಥ ರೆಡ್ಡಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹಾಲು ಉತ್ಪಾದಕರಿಗೆ ಉಚಿತ ಹಾಲಿನ ಕ್ಯಾನುಗಳ ವಿತರಣೆ ಕಾರ್ಯಕ್ರಮವನ್ನು ವಿವಿಧ ಗಣ್ಯರು ಉದ್ಘಾಟಿಸಿದರು.
ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ, ಅವಿಭಜಿತ ಕೋಲಾರ ಚಿಕ್ಕಬಳ್ಳಾ ಪುರ ಜಿಲ್ಲೆಯ ಕೋಚಿಮುಲ್ ಒಕ್ಕೂಟದಿಂದ ಚಿಮುಲ್ ಬೇರ್ಪಟ್ಟರೇ ಚಿಮುಲ್ ಒಕ್ಕೂಟ ನಷ್ಟದಲ್ಲಿ ನಡೆಯುತ್ತೆ ಎಂಬ ಅಪನಂಬಿಕೆಯನ್ನು ಕೆಲವರು ಸೃಷ್ಠಿ ಮಾಡಿದ್ದರು, ಆದರೇ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಮುಲ್ ಒಕ್ಕೂಟ ಲಾಭದಲ್ಲಿ ನಡೆಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆ ಹಾಲು ಒಕ್ಕೂಟ ಹೊರತು ಪಡಿಸಿದರೆ ರಾಜ್ಯದಲ್ಲಿ ಉಳಿದಿರುವ 15 ಹಾಲು ಒಕ್ಕೂಟಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಒಕ್ಕೂಟ ಮಾತ್ರ ರೈತರ ಒಂದು ಲೀಟರ್ ಹಾಲಿಗೆ 36.90 ರೂ ಹಣ ಕೊಟ್ಟು ಈ ಬಾಗದ ಹಾಲು ಉತ್ಪಾಧಕರ ಹಿತವನ್ನು ಕಾಪಾಡುತ್ತಿದ್ದೇವೆ. ಹಾಲು ಉತ್ಪಾಧಕರ ಬೇಡಿಕೆಯಂತೆ ಚಾಪ್ ಕಟ್ಟರ್, ಮ್ಯಾಟ್, ಮಿಲ್ಕಿಂಗ್ ಮಿಷನ್ ಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶೇ 95 ರಷ್ಟು ರೈತರು ಗುಣಮಟ್ಟದ ಹಾಲು ಪೂರೈಸುತ್ತಿದ್ದು ಉಳಿದಂತಹ ರೈತರು ಸಹ ಗುಣಮಟ್ಟದ ಹಾಲು ಪೂರೈಸಿ ಡೈರಿಗಳ ಅಭಿವೃದ್ದಿಗೆ ಸಹಕಾರ ನೀಡುವ ಕೆಲಸ ಮಾಡಿದರೆ ಚಿಮುಲ್ ಒಕ್ಕೂಟ ಆರ್ಥಿಕವಾಗಿ ಅಭಿವೃದ್ದಿ ಹೊಂದುತ್ತದೆ. ಶೇ 100 ರಷ್ಟು ರೈತರು ಗುಣಮಟ್ಟದ ಹಾಲು ಪೂರೈಸಿದರೆ ಸರ್ಕಾರ ನೀಡುವ 5 ರೂ ಹಾಗೂ ಒಕ್ಕೂಟ ನೀಡುವ 2 ರೂ ಸೇರಿ ಒಟ್ಟು 7 ರೂಗಳ ಪ್ರೋತ್ಸಾಹ ದನವನ್ನು ನೀಡಲು ಸಹಕಾರಿ ಆಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ನೂತನ ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿರನ್ನು ಡೈರಿ ವತಿಯಿಂದ ಸನ್ಮಾನಿಸಿ ಹಾಲು ಉತ್ಪಾಧಕರಿಗೆ ಉಚಿತವಾಗಿ ಹಾಲಿನ ಕ್ಯಾನುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಡೈರಿ ಅಧ್ಯಕ್ಷರಾದ ರಂಗಾರೆಡ್ಡಿ, ಉಪಾಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ನಿರ್ದೇಶಕರಾದ ಶ್ರೀನಾಥ್, ಪ್ರಭಾಕರರೆಡ್ಡಿ, ಶಿವಾರೆಡ್ಡಿ, ಎನ್.ಕೃಷ್ಣಪ್ಪ, ಶ್ರೀರಾಮಪ್ಪ, ಗಂಗನ್ನ, ಆಧಿನಾರಾಯಣಪ್ಪ, ಬಾಬುರೆಡ್ಡಿ, ಅಧಿಲಕ್ಷ್ಮಮ್ಮ, ಲಕ್ಷ್ಮೀ ನರಸಮ್ಮ, ಕಾರ್ಯದರ್ಶಿ ಶ್ರೀಕಾಂತ್ ರೆಡ್ಡಿ ಮತ್ತಿತರರು ಇದ್ದರು.