ಚಿಂತಾಮಣಿ: ನಗರದ ರಾಮಕುಂಟೆಯಲ್ಲಿ 32 ಕೋಟಿ ರೂ.ಗಳಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಖಾಸಗಿ ಬಸ್ ಟರ್ಮಿನಲ್ ಹಾಗೂ ವಾಹನ ದುರಸ್ತಿ ಕೇಂದ್ರದ ಬೃಹತ್ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ದಿಢೀರ್ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಸದ್ಯ ಶೀಘ್ರಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯ ವಿನ್ಯಾಸ ಹಾಗೂ ಗುಣಮಟ್ಟವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು ಗುಣಮಟ್ಟದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದೆಂದು ಸಚಿವ ಡಾ.ಎಂ ಸಿ ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Chikkaballapur News: ರಸಗೊಬ್ಬರ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪುಟ್ಟಣ್ಣಯ್ಯ ಬಣದ ರೈತ ಸಂಘ ಪ್ರತಿಭಟನೆ
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳ ಲಾಗಿದ್ದು, ನಿಗದಿತ ಅವಧಿಯೊಳಗಾಗಿ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಇಂಜಿನಿಯರ್ಗಳು ಹಾಗೂ ಗುತ್ತಿಗೆದಾರರಿಗೆ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರೊಂದಿಗೆ ಸಚಿವರು ನೇರವಾಗಿ ಸಂವಾದ ನಡೆಸಿದರು.ಬಸ್ ಟರ್ಮಿನಲ್ ಮತ್ತು ವಾಹನ ದುರಸ್ತಿ ಕೇಂದ್ರದಿಂದ ನಗರದ ಸಂಚಾರ ದಟ್ಟಣೆ ಹೇಗೆ ನಿಯಂತ್ರಣಕ್ಕೆ ಬರಲಿದೆ ಹಾಗೂ ಇದರಿಂದ ಸಾರ್ವಜನಿಕರಿಗೆ ಸಿಗುವ ಬಹುಮುಖಿ ಸೌಲಭ್ಯಗಳ ಕುರಿತು ಜನರಿಗೆ ಸವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟರು.
ಅಭಿವೃದ್ಧಿ ಕೆಲಸಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯವೆಂದ ಸಚಿವರು ಕಾಮಗಾರಿಯ ಕುರಿತು ಜನರಿಗೆದ್ದ ಹಲವು ಗೊಂದಲ ಹಾಗೂ ಸಂಶಯಗಳಿಗೆ ಸ್ಥಳದಲ್ಲೇ ಆಪ್ತವಾಗಿ ಉತ್ತರಿಸಿ ಸ್ಪಷ್ಟನೆ ನೀಡಿ ಗಮನ ಸೆಳೆದರು.