ಚಿಕ್ಕಬಳ್ಳಾಪುರ: ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ತಮ್ಮದೇ ಆದ ಕನಸು ಹೊಂದಿರುವ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರು ಪ್ರಥಮ ಪ್ರಯತ್ನದಲ್ಲಿಯೇ ಮೂಲ ಸೌಕರ್ಯಗಳ ಬಲವರ್ಧನೆಗೆ ಒತ್ತು ನೀಡಿರುವುದು ಇತ್ತೀಚೆಗೆ ಕ್ಷೇತ್ರ ದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳ ಶಂಕುಸ್ಥಾಪನೆ ನೋಡಿದರೆ ಎಂತಹವರಿಗಾದರೂ ಮನವರಿಕೆ ಆಗುತ್ತದೆ.
ಹೌದು. ಇದಕ್ಕೆ ಪುಷ್ಟಿ ನೀಡುವಂತೆ ಬುಧವಾರ ಬೆಳಿಗ್ಗೆ ತಾಲೂಕಿನ ತರ್ನಹಳ್ಳಿ ಗ್ರಾಮದಿಂದ ವಿಶ್ವ ವಿಖ್ಯಾತ ಸರ್.ಎಂ.ವಿ ಜನ್ಮಸ್ಥಳವಾದ ಮುದ್ದೇನಹಳ್ಳಿವರೆಗೆ 2 ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ದ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ತರ್ನಹಳ್ಳಿ ಗ್ರಾಮದಿಂದ ಮುದ್ದೇನಹಳ್ಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ದಿಪಡಿಸಿ ಕೊಡುವಂತೆ ನಾಗರೀಕರಿಂದ ಒತ್ತಾಯವಿತ್ತು.ಕಾರಣ ಈ ರಸ್ತೆಯು ಸತ್ಯಸಾಯಿ ಗ್ರಾಮಕ್ಕೆ ಭೇಟಿಕೊಡುವ ಪ್ರಮುಖ ರಸ್ತೆಯಾಗಿದೆ. ಈ ಮಾರ್ಗದ ಮೂಲಕವೇ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಗೆ ನಿತ್ಯವೂ ನೂರಾರು ಮಂದಿ ಸಂಚರಿಸುತ್ತಾರೆ. ದೇಶ ವಿದೇಶಗಳ ಮಂದಿ ಇಲ್ಲಿಗೆ ಭೇಟಿ ಕೊಡುತ್ತಾರೆ. ಮೇಲಾಗಿ ಮುದ್ದೇನಹಳ್ಳಿಯ ಸರ್.ಎಂ.ವಿ. ಸಮಾಧಿಸ್ಥಳ ನೋಡಲು ಕೂಡ ನಿತ್ಯವೂ ಪ್ರವಾಸಿಗರು ಆಗಮಿಸು ತ್ತಾರೆ. ಹೀಗಾಗಿ ಇಲ್ಲಿ ಸುಸಜ್ಜಿತವಾದ ಸಿಸಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಹೆಚ್ಚಿನ ಒತ್ತಡ ಇದ್ದ ಕಾರಣ ಈ ದಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಇದೇ ವೇಳೆ, ಸತ್ಯಸಾಯಿ ಆಸ್ಪತ್ರೆಯ ಉಚಿತ ಆರೋಗ್ಯ ಸೇವೆಯ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಸದ್ಗುರು ಮಧುಸೂಧನ್ ಸಾಯಿ ಆಶೀರ್ವಾದ ಪಡೆದರು.
ಇಲ್ಲಿನ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಇಲ್ಲಿ ಬಸ್ ತಂಗುದಾಣವನ್ನು ಕೂಡ ನಿರ್ಮಿಸಿಕೊಡುವ ಬಗ್ಗೆ ಕೂಡ ನಾಗರೀಕರಿಂದ ಒತ್ತಾಯವಿದೆ. ಹೀಗಾಗಿ ಶೀಘ್ರದಲ್ಲಿಯೇ ಇಲ್ಲಿ ತಂಗುದಾಣ ನಿರ್ಮಿಸಿ ಅನುಕೂಲ ಮಾಡಿಕೊಡ ಲಾಗುವುದು ಎಂದು ಹೇಳಿದರು.
ಇದೇ ವೇಳೆ, ಚಿಕ್ಕಬಳ್ಳಾಪುರದಿಂದ ಕರ್ಲಹಳ್ಳಿಯವರೆಗೆ ಶಾಲಾಕಾಲೇಜು ವೇಳೆಯಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸುವಂತೆ ನಾಗರೀಕರು ಮಾಡಿದ ಮನವಿಗೆ ಓಗೊಟ್ಟ ಶಾಸಕರು ನಾಳೆಯಿಂದಲೇ ಹೆಚ್ಚುವರಿ ಬಸ್ ಓಡಿಸುವಂತೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದರು.
ಸಚಿವನಾಗುವ ಭರವಸೆಯಿದೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ನಿಮಗೆ ಅವಕಾಶ ದೊರೆಯುವ ವಿಶ್ವಾಸವಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಯೂಥ್ ಕೋಟಾದಲ್ಲಿ ಐದು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಅರ್ಜಿ ಹಾಕಲಾಗಿದೆ. ಐವರಲ್ಲಿ ಯಾರಿಗೇ ಕೊಟ್ಟರೂ ನನಗೆ ಸಮ್ಮತಿ ಇದೆ. ಒಂದಿಬ್ಬರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು.
ಒಂದು ವೇಳೆ ನನಗೆ ಸಚಿವ ಸ್ಥಾನ ಸಿಕ್ಕಿದರೆ ಚಿಕ್ಕಬಳ್ಳಾಪುರ ಜಿಲ್ಲೆಗೆ 50 ವರ್ಷಗಳ ಬಳಿಕ ಅಹಿಂದ ವರ್ಗಕ್ಕೆ ಸಚಿವ ಸಿಕ್ಕಂತಾಗುತ್ತದೆ. ಅಹಿಂದ ವರ್ಗದ ಧ್ವನಿಯಾಗಿ ಕೆಲಸ ಮಾಡಲು ಉತ್ಸುಕ ನಾಗಿದ್ದು ನನಗೆ ಮಂತ್ರಿ ಸ್ಥಾನ ಕೊಡ್ತಾರೆ ಎಂಬ ನಂಬಿಕೆ ಇದೆ. ಆದರೆ ಇದುವರೆಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರನ್ನು ನಾನು ಬಾಯಿ ಬಿಟ್ಟು ಕೇಳಿಲ್ಲ. ನನ್ನ ಮುಖ ನೋಡಿ ಸ್ಮೈಲ್ ಕೊಟ್ಟಿದ್ದಾರೆ ಅಷ್ಟೆ. ಏನಾಗುತ್ತದೋ ನೋಡೋಣ ಎನ್ನುವ ಮೂಲಕ ರೇಸ್ನಲ್ಲಿ ನಾನೂ ಇದ್ದೇನೆ ಎಂಬುದನ್ನು ಖಚಿತಪಡಿಸಿದರು.
*
ಮೋದಿ ಅವರ 12 ವರ್ಷಗಳ ಸಾಧನೆಯ ಸಂಭ್ರಮದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 12 ವರ್ಷದಲ್ಲಿ ಮೋದಿ ಸಾಧನೆ ಜಾಸ್ತಿ ಇದೆ.
ಇಟಲಿಗೆ, ಮೆಲೋನಿಗೆ ಮೆಲೋಡಿ ಚಾಕೊಲೇಟ್ ಕೊಟ್ಟಿದ್ದು ಮೊದಲನೇ ಸಾಧನೆ, ಮೆಲೋನಿಗೆ ಮೆಲೋಡಿ ಕೊಟ್ಟಂತಹ ಕಿಲಾಡಿಗೆ 12ನೇ ವರ್ಷದ ಶುಭಾಷಯಗಳು ಎಂದು ವ್ಯಂಗ್ಯವಾಡಿದರು.
12 ವರ್ಷದಲ್ಲಿ ದೇಶದಲ್ಲಿ ನಿರುದ್ಯೋಗ ಹೆಚ್ಚು ಮಾಡಿರುವ ಸಾಧನೆ ಮಾಡಿದ್ದಾರೆ. ವಿದೇಶಿ ಸಾಲ ಹೆಚ್ಚಳ,ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಜಾಸ್ತಿ ಮಾಡಿರುವ ಸಾಧನೆ ಅವರ ಬೆನ್ನಿಗಿದೆ. ಪ್ರಧಾನಿ ಆದ ಮೊದಲ ವರ್ಷದಲ್ಲಿ ಹೇಳಿದಂತೆ ಪ್ರತಿಯೊಬ್ಬ ನಾಗರೀಕರಿಗೆ 15 ಲಕ್ಷ ಹಾಕ್ತೀನಿ ಅಂದ್ರು 15 ಪೈಸೆನೂ ಬರಲಿಲ್ಲಾ.ಮೋದಿ ಅಂದಭಕ್ತರು ದೇಶಕ್ಕೆ ಹಾನಿಕಾರಕವಾಗಿದ್ದಾರೆ. ಅವರ ಪರವಾಗಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಟ್ ಬೀಸುವಸ 300-400 ಅಂದ ಭಕ್ತರು ದೇಶ ದ್ರೋಹಿಗಳು. ಕಾಂಗ್ರೆಸ್ ಪಕ್ಷ ಅಭಿವೃದ್ದಿಯ ಕಾಲದಲ್ಲಿ ಇಟ್ಟ ಹೆಸರುಗಳನ್ನು ಹೊಸ ನಾಮಕರಣ ಮಾಡಿದ್ದೆ ಮೋದಿ ಸಾಧನೆ. 2023ರ ಚುನಾವಣೆಯಲ್ಲಿ ಮೋದಿ ಚಾರ್ ಸೌ ಬಾರ್ ಅಂದ್ರು ತೀನ್ ಸೌ ಬಾರ್ ಆಗಲಿಲ್ಲ.
ಮೋದಿ ಇನ್ನೂ 3 ವರ್ಷ ಇರ್ತಾರೇನೋ. ಚಂದ್ರಬಾಬುನಾಯ್ಡು, ನಿತೀಶ್ ಕುಮಾರ್ ಯಾವಾಗ ಕೋಪ ಮಾಡಿಕೊಳ್ತಾರೋ ಗೊತ್ತಿಲ್ಲಾ. 2029ಕ್ಕೆ ಇಂಡಿಯಾ ಕೂಟ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ರಾಹುಲ್ ಗಾಂಧೀ ಪ್ರಧಾನಿ ಆಗ್ತಾರೆ ಎಂದು ಮೋದಿ ಸಾಧನೆ ವಿರುದ್ಧ ವ್ಯಂಗ್ಯವಾಡಿದರು.