ಚಿಕ್ಕಬಳ್ಳಾಪುರ: ಪ್ರಧಾನ ಮಂತ್ರಿಯವರ ವಿಕಸಿತ ಭಾರತ್ 2047 ಆಶಯವನ್ನು ಯಶಸ್ವಿ ಗೊಳಿಸಲು ಮೊದಲು ವಿಕಸಿತ್ ವಿಲೇಜ್ ಆಶಯವನ್ನು ಈಡೇರಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನಬಾರ್ಡ್ ಬ್ಯಾಂಕ್ ಶಾಖೆ (Branch of NABARD Bank )ಆರಂಭ ಕಾರ್ಯಕ್ರಮದಲ್ಲಿ ನಬಾರ್ಡ್'ನ ಜಿಲ್ಲಾ ಶಾಖೆ ಉದ್ಘಾಟಿಸಿ ಮಾತನಾಡಿದರು.
ನಬಾರ್ಡ್ ಬ್ಯಾಂಕ್ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಬ್ಯಾಂಕ್ ಆಗಿದೆ. ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಅಸ್ತಿತ್ವಕ್ಕೆ ಬಂದ 17 ವರ್ಷಗಳ ನಂತರ ನಬಾರ್ಡ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭವಾಗುತ್ತಿದೆ.
ಇದನ್ನೂ ಓದಿ: MP Dr. K. Sudhakar: ವಕ್ಕಲಿಗ ಸಮುದಾಯ ಸಂಘಟಿತ ಶಕ್ತಿಯ ಪ್ರತಿರೂಪ: ಸಂಸದ ಡಾ.ಕೆ.ಸುಧಾಕರ್
ನಬಾರ್ಡ್ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಜಿಲ್ಲೆಗೆ ನಬಾರ್ಡ್ ಶಾಖೆ ನೀಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಅವರು ಸ್ಪಂದಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿದ್ದ ಚಿಕ್ಕಬಳ್ಳಾಪುರ ನಬಾರ್ಡ್ ಇಂದು ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದಿದೆ. ನಬಾರ್ಡ್ ಇತರೆ ಬ್ಯಾಂಕುಗಳಂತಲ್ಲ.
ಮಹಿಳೆಯರ ಸಬಲೀಕರಣ, ಸ್ತ್ರೀ ಶಕ್ತಿ ಸಂಘಗಳು, ಸಣ್ಣ ಮಧ್ಯಮ ರೈತರು, ಬೀದಿ ಬದಿ ವ್ಯಾಪಾರಿ ಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ರೈತರು ನಬಾರ್ಡ್ ಬ್ಯಾಂಕ್ ನ ಪ್ರಯೋಜನ ಪಡೆಯಬೇಕು. ನಬಾರ್ಡ್ ನಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಅತಿಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರೆಯಲಿದೆ ಎಂದರು.
ನಬಾರ್ಡ್ ರಾಜ್ಯಾಧ್ಯಕ್ಷ ಡಾ.ಸುರೇಂದ್ರಬಾಬು ಹಾಗೂ ನಬಾರ್ಡ್ ಕರ್ನಾಟಕ ವೃತ್ತದ ಮಹಾ ಪ್ರಬಂಧಕ ಡಾ.ಅಶುತೋಶ್ ಕುಮಾರ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೋಲಾರ ಪ್ರಾದೇಶಿಕ ವ್ಯವಸ್ಥಾಪಕ ಎಂ.ಇ. ವಿನಯ್, ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಹದೇವ್ ರೆಡ್ಡಿ ಕಾರ್ಯಕ್ರಮ ದಲ್ಲಿ ಹಾಜರಿದ್ದರು.