ಚಿಂತಾಮಣಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ವತಿಯಿಂದ ಈ ವರ್ಷದ ಪ್ರತಿಷ್ಠಿತ ಕಾಯಕಯೋಗಿ ರಾಜ್ಯ ಪ್ರಶಸ್ತಿ ಪಡೆದ ನಗರಸಭೆಯ ಸಿಬ್ಬಂದಿ ಸಿ.ಕೆ.ಬಾಬು ಅವರಿಗೆ ಅಭಿನಂದನೆ ಗಳ ಮಹಾಪೂರವೇ ಹರಿಯುತ್ತಿದೆ.ಈ ಹಿನ್ನೆಲೆಯಲ್ಲಿ,ನಗರದ ಚಿಂತಾಮಣಿ ಬಲಿಜ ಜನಾಂಗದ ಸೇವಾ ಟ್ರಸ್ಟ್ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಿ.ಕೆ.ಬಾಬು ಅವರ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಸಮಾಜದ ಏಳಿಗೆಗೆ ಮತ್ತು ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಯಲ್ಲಿ ಅವರು ತೋರುತ್ತಿರುವ ಶ್ರದ್ಧೆ ಇತರರಿಗೆ ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಗಣ್ಯರು ಶ್ಲಾಘಿಸಿದರು.
ಈ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಕುಂಡಗಟ್ಟೆ ಲಕ್ಷ್ಮಣ್, ವೇಣು, ನಿರಂಜನ್, ನಾಗರಾಜ್, ಅಶೋಕ್ ಆರ್. ಎಂ.ಜೆ.ಶ್ರೀನಿವಾಸ್, ಲಕ್ಷ್ಮಯ್ಯ, ಪಟಾಲ್ ಮುರಳಿ, ನವೀನ್, ಪ್ರಭು, ಜಯರಾಮ್, ಶಂಕರರೆಡ್ಡಿ ಸೇರಿದಂತೆ ಟ್ರಸ್ಟ್ನ ಹಲವು ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಬಾಬು ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಕೆ.ಬಾಬು ಅವರು ನನ್ನ ಕೆಲಸವನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ಜನಾಂಗದ ಸೇವಾ ಟ್ರಸ್ಟ್ನ ಪ್ರೀತಿ ಮತ್ತು ಸನ್ಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.