ಗೌರಿಬಿದನೂರು: ಸರ್ಕಾರದಿಂದ ಮಂಜೂರು ಮಾಡುವ ನಿವೇಶನವು ಬಡವರಿಗೆ ಮತ್ತು ನಿವೇಶನವಿಲ್ಲದ ಅರ್ಹ ಫಲಾನುಭವಿಗಳಿಗೆ ಮಾತ್ರ ದೊರೆಯಬೇಕು. ಅಧಿಕಾರಿಗಳು ಕೂಡ ಇತ್ತ ಗಮನ ಹರಿಸಬೇಕು ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA KH. Puttaswamy Gowda) ರು ತಿಳಿಸಿದರು.
ತಾಲೂಕಿನ ಜಿ.ಕೊತ್ತೂರು ಗ್ರಾಮ ಪಂಚಾಯತಿಯಲ್ಲಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿವೇಶನ ಹಂಚಿಕೆ ವಿಷಯದಲ್ಲಿ ಅಧಿಕಾರಿಗಳು ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷಗಳಿಗೆ, ಮುಖಂಡರ ಒತ್ತಡಗಳಿಗೆ ಮಣೆ ಹಾಕದೆ ಪ್ರತಿಯೊಬ್ಬ ನಿವೇಶನ ರಹಿತರ ದಾಖಲೆ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ಅರ್ಹರಿಗೆ ಮಾತ್ರ ನಿವೇಶನಗಳ ನೀಡುವಂತೆ ಸೂಚಿಸಿದರು.
ನಿವೇಶನ ರಹಿತ ಫಲಾನುಭವಿಗಳ ಆಯ್ಕೆಯಲ್ಲಿ ಲೋಪದೋಷಗಳು ಉಂಟಾದರೆ ಇದಕ್ಕೆ ಸಂಭಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಾದ್ಯಂತ ಸುಮಾರು 176 ಏಕರೆ ಜಮೀನನ್ನು ನಿವೇಶನ ರಹಿತರಿಗೆ ನಿವೇಶನ ಗಳನ್ನು ನೀಡಲು ಈಗಾಗಲೆ ಗುರುತಿಸಲಾಗಿದ್ದು ,ಸುಮಾರು ನಾಲ್ಕು ಸಾವಿರ ನಿವೇಶನ ಗಳನ್ನು ನಿವೇಶನ ರಹಿತರಿಗೆ ನೀಡಲು ಗುರಿ ಹೊಂದಲಾಗಿದೆ ಎಂದರು.
ಗ್ರಾಮಸಭೆಯಲ್ಲಿ ತಾಲೂಕು ಪಂಚಾಯತಿ ಇಓ ಜಿಕೆ.ಹೊನ್ನಯ್ಯ, ನೂಡಲ್ ಅಧಿಕಾರಿ ವಿರೂಪಾಕ್ಷ, ಪಂಚಾಯತಿ ಆಡಳಿತ ಅಧಿಕಾರಿ ಸಿಡಿಪಿಓ ರವಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬೈರೇಗೌಡ ಹಾಗೂ ಗುಂಡ್ಲುಕೊತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಂದಲೂ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು.