ಚಿಕ್ಕಬಳ್ಳಾಪುರ: ಗೃಹಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಿದ್ದರೂ ಸಹ ಕೆಲ ವದಂತಿಗಳಿಂದ ಸಿಲಿಂಡರ್ಗಾಗಿ ಏಜೆನ್ಸಿಗಳ ಮುಂದೆ ಆತಂಕಿತ ಜನತೆ ಸಾಲುಗಟ್ಟಿ ನಿಂತಿದ್ದಾರೆ.
ತಾಲ್ಲೂಕಿನ ಪೆರಸಂದ್ರ ಗ್ರಾಮದಲ್ಲಿರುವ ಅನಿಲ ಸರಬರಾಜು ಕೇಂದ್ರದ ಮುಂದೆ ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಜನರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಜನರ ಆತಂಕ ವನ್ನು ಸಾರಿ ಹೇಳುತ್ತಿದ್ದವು.
ಇದನ್ನೂ ಓದಿ: Chikkaballapur News: ಮಾ.15ರ ಬಂದ್ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ಆರ್.ಆಂಜನೇಯರೆಡ್ಡಿ ಘೋಷಣೆ
ಜಿಲ್ಲಾಡಳಿತ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಅಧಿಕಾರಿಗಳು ಗೃಹ ಬಳಕೆಯ ಸಿಲಿಂಡರ್ಗೆ ಕೊರತೆ ಇಲ್ಲ. ಜನರು ಆತಂಕಕ್ಕೊಳಗಾಗಬಾರದು ಎಂದು ಪದೇ ಪದೇ ಹೇಳುತ್ತಿದ್ದರೂ ಸಹ ಜನತೆ ನಾ ಮುಂದು ತಾ ಮುಂದು ಎಂಬಂತೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟಿಲ್ಲ. ದಶಕಗಳ ಹಿಂದೆ ಸೀಮೆಎಣ್ಣೆಗಾಗಿ ಜನರು ಕ್ಯೂ ನಿಲ್ಲುವಂತೆ ಈಗ ಸಿಲಿಂಡರ್ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸರ್ವೆಸಾಮಾನ್ಯವಾಗಿವೆ.
ವಾಣಿಜ್ಯ ಸಿಲಿಂಡರ್ ಸರಬರಾಜಿನಲ್ಲಿ ಮಾತ್ರ ವ್ಯತ್ಯಯವಾಗುತ್ತಿದ್ದು, ಗೃಹಬಳಕೆ ಸಿಲಿಂಡರ್ ಬುಕ್ ಮಾಡಿದರೆ ಸಿಗುತ್ತದೆ ಎಂದು ಏಜೆನ್ಸಿಯವರು ಹೇಳುತ್ತಿದ್ದಾರೆ. ಆದರೆ ಜಾತ್ರೆ, ಯುಗಾದಿ ಹಬ್ಬ ಬಂದಿದೆ. ಎಲ್ಲಿ ಸಿಲಿಂಡರ್ಗಳು ಸಿಗುವುದಿಲ್ಲವೋ ಎಂದು ಕೆಲಸ ಕಾರ್ಯಗಳನ್ನು ಬಿಟ್ಟು ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಡಬ್ಬಲ್ ಸಿಲಿಂಡರ್ ಇದ್ದವರೂ ಕೂಡ ಮುಂಜಾಗ್ರತಾ ಕ್ರಮವಾಗಿ ಸಿಲಿಂಡರ್ಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆಲ್ಲಾ ಜಿಲ್ಲಾಡಳಿತ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ ಜನತೆ ಸಿಲಿಂಡರ್ ಹಿಡಿದು ಬಡಿದಾಡುವ ಸಂದರ್ಭ ಬಂದರೂ ಬರಬಹುದು ಎನ್ನುವುದು ಹಿರಿಯ ನಾಗರೀಕರೊಬ್ಬರ ಆತಂಕದ ಮಾತಾಗಿದೆ.