ಅರಿಕೆರೆ ಗ್ರಾಮದಲ್ಲಿ ಭಾನುವಾರ ನಡೆದ 135ನೇ ಅಂಬೇಡ್ಕರ್ ಜಯಂತಿಯಲ್ಲಿ ಭಾಗಿಯಾಗಿ ಹೇಳಿಕೆ
ಚಿಕ್ಕಬಳ್ಳಾಪುರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ವ್ಯಕ್ತಿ ಪೂಜೆ, ಮೂರ್ತಿ ಪೂಜೆಯ ವಿರೋಧಿಯಾಗಿದ್ದರು. ಆದರೆ ಇಂದಿನ ದಿನಗಳಲ್ಲಿ ಅವರ ವಿಚಾರಗಳನ್ನು ಬದಿಗಿಟ್ಟು ವ್ಯಕ್ತಿ ಪೂಜೆ, ಮೂರ್ತಿಪೂಜೆ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ವಿಷಾದನೀಯ ಎಂದು ಸಮತ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟರಮಣಪ್ಪ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘವು ಏರ್ಪಡಿಸಿದ್ದ 135ನೇ ಅಂಬೇಡ್ಕರ್ ಜಯಂತಿಯಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿದರು.
ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿಯ ನಾಯಕನನ್ನಾಗಿ ನೋಡದೇ, ಸರ್ವ ಸಮುದಾಯದ ವಿಮೋಚಕರಾಗಿ ನೋಡಬೇಕು. ವಿಶ್ವದ ಮಟ್ಟದಲ್ಲಿ ಅವರನ್ನು ಜ್ಞಾನದ ಸಂಕೇತ ವಾಗಿ ಗುರುತಿಸುತ್ತಿರುವುದನ್ನು ಅರಿಯಬೇಕು ಎಂದರು. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಕೂಡ ಅಂಬೇಡ್ಕರ್ ಅವರ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿರುವುದನ್ನು ಅವರು ಸ್ಮರಿಸಿದರು.
ಇದನ್ನೂ ಓದಿ: Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು
2 ವರ್ಷ 11 ತಿಂಗಳು 18 ದಿನಗಳ ಕಾಲ ಸಂವಿಧಾನವನ್ನು ಅಂಬೇಡ್ಕರ್ ಬರೆದಿದ್ದಾರೆ.ಹೀಗಾಗಿ ಸಂವಿಧಾನ ಎಂಬುದು ಮಗ್ಗೀ ಪುಸ್ತಕವಲ್ಲ, ಬದಲಿಗೆ ಬಲಿಷ್ಟ ಭಾರತದ ಹಣೆಬರಹವಾಗಿದೆ. ಸಂವಿಧಾನದ ಪೀಠಿಕೆ ಅರಿತವರು ಯಾರೂ ಕೂಡ ಅಂಬೇಡ್ಕರ್ ಅವರನ್ನು ಹಿಯಾಳಿಸುವುದಿಲ್ಲ ಎಂದರು. ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ಬದಲಾದರೆ 140 ಕೋಟಿ ಮಂದಿ ಒಬ್ಬೊಬ್ಬ ಅಂಬೇಡ್ಕರ್ ಆಗಲಿದ್ದಾರೆ ಎಂದರು.
ಭಾರತೀಯರ ವಿಮೋಚನೆಗಾಗಿ ಒಂದೆಡೆ ಬ್ರಿಟೀಷರ ವಿರುದ್ದ, ಮತ್ತೊಂದೆಡೆ ಭಾರತೀಯ ಮನು ವಾದಿಗಳ ವಿರುದ್ದ ಹೋರಾಟ ನಡೆಸಿ ಅದರಲ್ಲಿ ಯಶಸ್ಸು ಕಂಡ ಮಹಾನ್ ಸಮಾಜ ಸುಧಾರಕ. ಬಹುಜನ ಭಾರತದ ಧೃವತಾರೆ ಬಾಬಾ ಸಾಹೇಬ ಅಂಬೇಡ್ಕರ್ ಎಂದರು.
ಸಂವಿಧಾನದಿಂದ ದಲಿತರಿಗೆ ಮಾತ್ರ ಹಕ್ಕುಗಳು ಸಿಕ್ಕಿರುವುದು ನಿಜವೇ ಆಗಿದ್ದರೆ ನಾವೇ ಯಾಕೆ ಇನ್ನೂ ಹೋರಾಟ ಮಾಡಬೇಕಾಗಿತ್ತು ಎಂಬ ಬಗ್ಗೆ ಶೇ 32ರಷ್ಟು ಮೀಸಲಾತಿ ಸೌಲಭ್ಯ ಉಣ್ಣುತ್ತಿರು ವವರು, 10ರಷ್ಟು ವಿಶೇಷ ಮೀಸಲಾತಿ ಸೌಕರ್ಯ ಪಡೆದವರು ಚಿಂತಿಸಬೇಕಿದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೆಂಕಟೇಶ್ (ವೆಂಕಿ) ಮಾತನಾಡಿ, ಅಂಬೇಡ್ಕರ್ ಅವರು ಅನೇಕ ಸಂಕಷ್ಟಗಳನ್ನು ಎದುರಿಸಿ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅವರು ಲಂಡನ್ನಲ್ಲಿ ವಿದ್ಯಾಭ್ಯಾಸ ಮಾಡಿ ಭಾರತಕ್ಕೆ ಬಂದರೂ ಜಾತಿಪದ್ದತಿಯ ಕ್ರೂರತೆಯಿಂದ ದೂರವಾಗಲಾಗಲಿಲ್ಲ. ಪಾರ್ಸಿ ವಸತಿಗೃಹದಲ್ಲಿ ಬಾಡಿಗೆ ನೀಡಿ ವಾಸ್ತವ್ಯ ಹೂಡಿ ದ್ದರೂ ಅವರನ್ನು ಜಾತಿಯ ನೆಪ ಹೇಳಿ ಹೊರದಬ್ಬುತ್ತಾರೆ. ನನ್ನ ಜನ ನನ್ನಂತೆ ಜಾತಿಯ ನೋವನ್ನು ಅನುಭವಿಸಬಾರದು ಎಂದು ಸಂವಿಧಾನ ಬರೆದು ಆಮೂಲಕ ಘನತೆಯ ಬದುಕು ಸಾಗಿಸಲು ಅವಕಾಶ ನೀಡಿದ್ದಾರೆ ಎಂದರು.
ದೇಶದ ಸಾಮಾಜಿಕ ಪರಿಸ್ಥಿತಿಯನ್ನು ಅರಿತುಕೊಂಡಿದ್ದ ಅವರು ಕರಡು ಸಮಿತಿಯಲ್ಲಿ ಹೆಸರಿಗೆ ಮಾತ್ರ ಸದಸ್ಯರಿದ್ದರೂ ಏಕಾಂಗಿಯಾಗಿ ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ನಿರಂತರ ಶ್ರಮಪಟ್ಟು ಸಂವಿಧಾನವನ್ನು ರಚಿಸಿದ ಪರಿಣಾಮವಾಗಿ ಇಂದು ಬಹುಜನ ಬಂಧುಗಳು ಸಮಾನ ಹಕ್ಕುಗಳೊಂದಿಗೆ ನೆಮ್ಮದಿಯ ಬದುಕು ಬದುಕುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ನಂತರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯೂ ಸಂವಿಧಾನದ ಮಹತ್ವವನ್ನು ತೋರಿಸುತ್ತದೆ. ಅಂಬೇಡ್ಕರ್ ಅವರು ಕೇವಲ ಕಾನೂನು ಮಂತ್ರಿಯಾಗಿಯೇ ಅಲ್ಲದೆ, ಸಮಾಜ ಪರಿವರ್ತಕರಾಗಿ ಮಹಿಳೆಯರ ಆಸ್ತಿ ಹಕ್ಕು, ಶಿಕ್ಷಣ ಹಾಗೂ ಸಮಾನತೆಗೆ ಹೋರಾಟ ನಡೆಸಿದರು ಎಂದು ತಿಳಿಸಿದರು.
ಎಸ್ಎಸ್ಡಿ ರಾಜ್ಯಾಧ್ಯಕ್ಷ ವೆಂಕಟರೋಣಪ್ಪ, ಪ್ರಾಧ್ಯಾಪಕ ಡಾ. ಆದಿನಾರಾಯಣ, ಡಾ. ಪ್ರಶಾಂತ್, ಟಿಪಿಎಸ್ ಮಾಜಿ ಸದಸ್ಯ ಮುನಿರಾಜು, ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಅಂಗಡಿ ನಾಗಪ್ಪ, ಮಾಜಿ ಗ್ರಾ.ಪಂ ಸದಸ್ಯ ನಾಗರಾಜು, ಬಿ. ಶಂಕರ್, ಅಂಜಿನಪ್ಪ, ಡಿ. ಮುನಿರಾಜು, ಪೊಲೀಸ್ ಇಲಾಖೆಯ ಶ್ಯಾಮಣ್ಣ, ಛಲವಾದಿ ಮಹಾಸಭಾದ ತ್ಯಾಗರಾಜು, ಪ್ರಜಾಪ್ರಗತಿ ಜಿಲ್ಲಾ ವರದಿಗಾರ ನಾರಾಯಣಸ್ವಾಮಿ, ವಿಶ್ವವಾಣಿ ದಿನಪತ್ರಿಕೆ ಜಿಲ್ಲಾ ವರದಿಗಾರ ಮುನಿರಾಜು ಎಂ ಅರಿಕೆರೆ, ವಿಶ್ವಜ್ಞಾನಿ ಅಂಬೇಡ್ಕರ್ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಮುಖಂಡರು ಉಪಸ್ಥಿತ ರಿದ್ದರು.
![]()
“ಈ ದೇಶದಲ್ಲಿ ಜಾತಿ, ಅನ್ಯಾಯ ಮತ್ತು ಅಸಮಾನತೆಗಳ ವಿರುದ್ಧ ಅಂಬೇಡ್ಕರ್ ಅವರು ಹೋರಾಟ ನಡೆಸಿದ ಪರಿಣಾಮವೇ ನಾವು ಇಂದು ಗೌರವಯುತ ಜೀವನ ನಡೆಸುತ್ತಿದ್ದೇವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.”
– ಪುಟ್ಟು ಅಂಜಿನಪ್ಪ, ಕಾಂಗ್ರೆಸ್ ಮುಖಂಡ
![]()
“ಯುವಜನತೆ ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಅಂಬೇಡ್ಕರ್ರ ಬರಹ ಭಾಷಣ, ತತ್ವ ಮತ್ತು ಚಿಂತನೆಗಳನ್ನು ಆಳವಾಗಿ ತಿಳಿದುಕೊಳ್ಳಬೇಕು.ಆಮೂಲಕ ಅವರ ಸಂದೇಶವನ್ನು ಸಾರಬೇಕು. ಅವರ ಪುಸ್ತಕಗಳನ್ನು ಓದುವುದರಿಂದ ವಿಮರ್ಶಾತ್ಮಕ ಚಿಂತನೆ ಜತೆಗೆ ಜಾಗೃತಿ ಮೂಡಲಿದೆ.
– ಮುನಿರಾಜು, ಉಪನ್ಯಾಸಕರು, ಅರಿಕೆರೆ