ಮಂಚೇನಹಳ್ಳಿ: ಕರ್ನಾಟಕ ಸರ್ಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ವತಿಯಿಂದ 2025-2026 ನೇ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮಗಳು ಮತ್ತು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಗ್ರಾಮೀಣ ಯುವ ಕಲಾ ಸಂಘ ಗೊಟ್ಲಗುಂಟೆ ಗೌರಿಬಿದನೂರು ಇವರ ವತಿಯಿಂದ ಜಿಲ್ಲೆಯ ಅಯ್ದ 20 ಹಳ್ಳಿಗಳಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಸ್ವಾಮಿ ಖಂಜರ ಬಾರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಬೀದಿ ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ (ಉಚಿತ ವಿದ್ಯುತ್), ಗೃಹಲಕ್ಷ್ಮಿ (ಮಹಿಳೆಯರಿಗೆ ಮಾಸಿಕ 2000 ರೂ), ಅನ್ನ ಭಾಗ್ಯ (10 kg ಅಕ್ಕಿ), ಶಕ್ತಿ ( ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ), ಮತ್ತು ಯುವ ನಿಧಿ (ನಿರುದ್ಯೋಗ ಭತ್ಯೆ) ಯೋಜನೆಗಳನ್ನು ಜನರಿಗೆ ತಲುಪಿಸುವುದು, ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ನೋಂದಣಿ ಪ್ರಕ್ರಿಯೆಗೆ ಸಹಾಯ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಇದನ್ನೂ ಓದಿ: Chikkaballapur News: ತಾಯಿಯ ಸ್ಮರಣಾರ್ಥ ಪೌರ ಕಾರ್ಮಿಕರಿಗೆ ಸ್ಪೆಟರ್ ವಿತರಿಸಿದ ನಗರಸಭೆ ಮಾಜಿ ಸದಸ್ಯ ಆರ್.ಮಟಮಪ್ಪ
ಗ್ರಾಮ ಸಂಪರ್ಕ ಕಾರ್ಯಕ್ರಮದ ಉದ್ದೇಶಗಳು:
ಜಾಗೃತಿ ಮೂಡಿಸುವುದು: ಗ್ಯಾರಂಟಿ ಯೋಜನೆಗಳ ಸಂಪೂರ್ಣ ಪ್ರಯೋಜನಗಳು ಮತ್ತು ಅರ್ಹತಾ ಮಾನದಂಡಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸುವುದು.
ಅರ್ಜಿ ಸಲ್ಲಿಕೆಗೆ ಸಹಾಯ: ಅರ್ಹ ಫಲಾನುಭವಿಗಳು ಯೋಜನೆಗಳಿಗೆ ಸುಲಭವಾಗಿ ಅರ್ಜಿ ಸಲ್ಲಿಸಲು ಸಹಾಯ ಮಾಡುವುದು.
ಸಮಸ್ಯೆಗಳಿಗೆ ಪರಿಹಾರ: ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವುದು.
ಕಾರ್ಯಕ್ರಮದಲ್ಲಿ ಒಳಗೊಂಡಿರುವ ಯೋಜನೆಗಳು ಐದು ಗ್ಯಾರಂಟಿಗಳಲ್ಲಿ ಗೃಹಜ್ಯೋತಿ: ಪ್ರತಿ ಮನೆಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್.
ಗೃಹಲಕ್ಷ್ಮಿ: ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2,000 ರೂ.ಗಳು.
ಅನ್ನ ಭಾಗ್ಯ: ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ ,
ಶಕ್ತಿ: ಕರ್ನಾಟಕದ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ.
ಯುವ ನಿಧಿ: ಪದವೀಧರ ನಿರುದ್ಯೋಗಿ ಯುವಕರಿಗೆ ಭತ್ಯೆ.
ಈ ಕಾರ್ಯಕ್ರಮದ ಮೂಲಕ, ಸರ್ಕಾರದ ಯೋಜನೆಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತ ವಾಗದೆ ಗ್ರಾಮೀಣ ಪ್ರದೇಶಗಳ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ನಮ್ಮ ಗ್ರಾಮಿಣ ಯುವ ಕಲಾ ಸಂಘದ ವತಿಯಿಂದ ಸಾರ್ವಜನಿಕರಿಗೆ ಬೀದಿ ನಾಟಕದ ಮುಖಾಂತರ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಗೊಟ್ಲಗುಂಟೆ ವೆಂಕಟರೋಣಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ ಕೃಷ್ಣ, ಶಿಕ್ಷಕರಾದ ಅಮರೇಶ್, ನಾರಾಯಣಪ್ಪ ಅಶ್ವತ್ಥಪ್ಪ, ಮಣಿ ಕುಮಾರ್, ಬಾಲಮ್ಮ, ಕೋಮಲ, ವಿಜಯಲಕ್ಷ್ಮಿ, ಗ್ರಾಮೀಣ ಕಲಾ ಸಂಘದ ಕಲಾವಿದರಾದ ರೋಜಮ್ಮ, ಶಮೀರ, ಬಾಲಕೃಷ್ಣ ಬಿ , ವೆಂಕಟಸ್ವಾಮಿ, ಎನ್ ಬಾಲಪ್ಪ, ನರಸಿಂಹಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.