ಗೌರಿಬಿದನೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ತಾಲೂಕು ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಶಾಖೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ರೈತ ಸಂಘದ ತಾಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ, ಕಳೆದ ಮೂರು ತಿಂಗಳಿಂದ ಸುಮಾರು 2,876 ರೈತರ ಅರ್ಜಿಗಳು ಯಾವುದೇ ಇತ್ಯರ್ಥವಿಲ್ಲದೆ ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಕಂದಾಯ ಸಚಿವರು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು, ಈಗಾಗಲೇ ರಾಜ್ಯದ ಹಲವು ಕಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರವು ಈ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಸರಿಯಲ್ಲವೆಂದರು.
ಸರ್ಕಾರವು ಡಿಜಿಟಲ್ ಪದ್ಧತಿಯ ಬದಲು ಹಳೆಯ ಮ್ಯಾನುವಲ್ ಪದ್ಧತಿಯ ಮೂಲಕ ರೈತರ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಪರವಾನಿಗೆ ಭೂ-ಮಾಪಕರ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ರೈತರ ಜಮೀನುಗಳ ಹದ್ದುಬಸ್ತು, 11-ಇ ನಕ್ಷೆ ಹಾಗೂ ತತ್ಕಾಲ್ ಪೋಡಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Gauribidanur News: ಇಂಟೆಕ್ ಉಪಾಧ್ಯಕ್ಷರಾಗಿ ಕುದುರೇಬ್ಯಾಲ್ಯದ ಪದ್ಮರಾಜ್ ಆಯ್ಕೆ
ತಾಲೂಕಿನಲ್ಲಿ 2,876 ಮತ್ತು ಜಿಲ್ಲೆಯಾದ್ಯಂತ ಸುಮಾರು 16,071 ಅರ್ಜಿಗಳು ಭೂಮಾಪನ ಇಲಾಖೆಯಲ್ಲಿ ವಿಲೇವಾರಿಯಾಗದೆ ಬಾಕಿ ಇವೆ. ಪರವಾನಿಗೆ ಭೂ-ಮಾಪಕರ ಮುಷ್ಕರ ದಿಂದಾಗಿ ಸರ್ವೇ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ಪ್ರಸ್ತುತ ಮುಂಗಾರು ಪೂರ್ವ ಮಳೆ ಸುರಿದಿದ್ದು, ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಕಾರ್ಯ ಆರಂಭಿಸಿ, ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಭೂಮಿ ಅಳತೆ ಮತ್ತು ದಾಖಲೆಗಳು ಸರಿಯಿಲ್ಲದ ಕಾರಣ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಈ ವಿಷಯವನ್ನು ಈಗಾಗಲೇ ತಾಲೂಕಿನ ಶಾಸಕರು ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ.
ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಭೂ-ಮಾಪಕರ ಬೇಡಿಕೆಗಳನ್ನು ಈಡೇರಿಸಿ, ಬಾಕಿ ಉಳಿದಿ ರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ರೈತ ಸಂಘದಿಂದ ಮುಖ್ಯ ಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ತಲುಪಿಸುತೆ ಮನವಿ ಪತ್ರವನ್ನು ತಹಸೀಲ್ದಾರ್ ಅರವಿಂದ್.ಕೆ.ಎಂ ಅವರಿಗೆ ನೀಡಿದರು. ರೈತ ಮುಖಂಡರಾದ ಮುದ್ದರಂಗಪ್ಪ, ರಾಜಣ್ಣ, ಗೋಪಿ, ನರಸರೆಡ್ಡಿ, ನಂದನ್, ಮಲ್ಲಿಕಾರ್ಜುನ್, ಪ್ರಸನ್ನ ಕುಮಾರ್, ಮಂಜಣ್ಣ, ಗೋವಿಂದರಾಜು, ಶ್ರೀನಿವಾಸ, ಬಿ.ಸಿ.ಗಂಗಾಧರ್ ಇದ್ದರು.