ಚಿಕ್ಕಬಳ್ಳಾಪುರ : ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತರುತ್ತಿರುವುದನ್ನು ಕೈಬಿಡಲು ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸ ಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯ ಮೂಲಕ ಸರ್ಕಾರ ಹಿಂದೂ ಜಾತಿಗಳ ನಡುವೆ ಕ್ರೈಸ್ತ ಸಮುದಾಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದೆ. ಇದರಿಂದ ಹಿಂದೂ ಸಮಾಜಗಳಲ್ಲಿ ಅಸಮಾಧಾನ ಉಂಟಾಗಲಿದೆ. ಆದ್ದರಿಂದ ತಕ್ಷಣವೇ ಈ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Chikkaballapur News: ಸೆ.25ಕ್ಕೆ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆಗೆ ಅಧಿಕೃತ ಚಾಲನೆ
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಹಿಂದೂ ಸಮುದಾಯಗಳೊಂದಿಗೆ ಕ್ರೈಸ್ತ ಪದವನ್ನು ಸೇರಿಸಿರುವುದು ಸರಿಯಲ್ಲ ಡ್ರಾಪ್ಡೌನ್ ಪಟ್ಟಿಯಲ್ಲಿ ಕ್ರೈಸ್ತ ಎಂಬ ಆಯ್ಕೆಯನ್ನು ಉಳಿಸದೇ ಸಂಪೂರ್ಣವಾಗಿ ತೆಗೆದು ಹಾಕಬೇಕು. ಕಾಂತರಾಜು ಆಯೋಗ ಹಾಗೂ ನಾಗಮೋಹನ್ ದಾಸ್ ಆಯೋಗದ ವರದಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಜಾತಿಗಳನ್ನು ಒಡೆಯಲು ಈ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಹಿಂದೂಗಳನ್ನು ಹಿಂದೂವAತೆ, ಮುಸ್ಲಿಮರನ್ನು ಮುಸ್ಲಿಮರಂತೆ ಹಾಗೂ ಕ್ರಿಶ್ಚಿಯನ್ ಕ್ರಿಶ್ಚಿಯನ್ನರಂತೆ ಮಾಡಬೇಕು. ಹಿಂದೂ ಧರ್ಮವೂ ಕ್ರಿಶ್ಚಿಯನ್ ಧರ್ಮ ಮಾಡಲು ಯಾವ ಸಂವಿಧಾನದಲ್ಲಿ ಇದೆ ಎಂಬುದು ಗೊತ್ತಿಲ್ಲ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ನಡೆಸುತ್ತಿರುವ ಸರ್ಕಾರ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಕಿಡಿಕಾರಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಳಿಧರ್, ಮರಳುಕುಂಟೆ ಕೃಷ್ಣಮೂರ್ತಿ, ಅಶೋಕ್, ನಂದೀಶ್, ಮೋಹನ್, ಮೃತ್ಯುಂಜಯ, ವೇಣು ಮಾಧವ್, ವೆಂಕಟೇಶ್, ಪ್ರೇಮ ಲೀಲಾ ವೆಂಕಟೇಶ್, ಪುರುಷೋತ್ತಮ್, ಚೆಲುವರಾಜು, ಶಿವಕುಮಾರ್ ಇದ್ದರು.