ಮುದ್ದೇನಹಳ್ಳಿ: ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿರುವ ಒತ್ತಡದ ವಾತಾವರಣದಿಂದಾಗಿ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಪ್ರಾಯ ಪಟ್ಟರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ೭೧ನೇ ದಿನವಾದ ಶನಿವಾರ ಅವರು ಆಶೀರ್ವಚನ ನೀಡಿದರು. ಬದಲಾದ ಜೀವನ ಪದ್ಧತಿ, ಸಾಮಾಜಿಕ ಮತ್ತು ಕೌಟುಂಬಿಕ ರಚನೆಯಲ್ಲಿ ಕಂಡು ಬರುತ್ತಿರುವ ಮೌಲ್ಯಗಳ ಕುಸಿತವು ಆತಂಕ ಉಂಟು ಮಾಡುತ್ತದೆ ಎಂದರು.
ಗ್ರಾಮೀಣ ಭಾಗವು ಶೈಕ್ಷಣಿಕ ಮೂಲ ಸೌಕರ್ಯಗಳು ಇಲ್ಲದೆ ಬಳಲುತ್ತಿದೆ. ಆರೋಗ್ಯ ಪೋಷಣೆಯು ನಮ್ಮ ಒಂದು ಜಗತ್ತು ಒಂದು ಕುಟುಂಬದ ಜಾಗತಿಕ ಧ್ಯೇಯದ ಮುಖ್ಯ ವಿಷಯವಾಗಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಎನ್ನುವ ಮೂರು ಸೇವೆಗಳನ್ನು ಆರಿಸಿಕೊಂಡಿದ್ದೇವೆ. ನಾವು ಈ ಕ್ಷೇತ್ರಗಳಲ್ಲಿ ಕೆಲಸ ಮುಂದುವರಿಸುತ್ತೇವೆ ಎಂದು ನುಡಿದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಶ್ರೀಮಂತ ದೇಶಗಳಲ್ಲೂ ಸಹ, ಉತ್ತಮ ಪೋಷಣೆಯ ಕೊರತೆ ಇದೆ. ಶಿಕ್ಷಣದಲ್ಲಿ ಕೊರತೆ ಇದೆ, ನಗರ ಪ್ರದೇಶದ ಜನರಲ್ಲಿ ಸುಧಾರಣೆಗಳಿವೆ, ಆದರೆ ಗ್ರಾಮೀಣ ಸಮುದಾಯಗಳಲ್ಲಿ ಆರೋಗ್ಯ ರಕ್ಷಣೆಯ ಕೊರತೆ ಇದೆ ಎಂದು ವಿವರಿಸಿದರು.
ಅನ್ನಪೂರ್ಣ ಬೆಳಿಗ್ಗಿನ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ಪರಂ ಫ್ಯಾಮಿಲಿ ಫೌಂಡೇಶನ್ ಗೆ ಸಿಎರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರತಿನಿಧಿ ಶ್ರೀ ವಿದ್ಯಾ ಅವರು ಪ್ರಶಸ್ತಿ ಸ್ವೀಕರಿಸಿದರು. ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸೆನೆಗಲ್ ದೇಶದ ಅಬ್ದುಲ್ ಕರೀಮ್ ಸಾಲ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ಘೋಷಿಸಲಾಯಿತು.
ಅಬ್ದುಲ್ ಅವರ ಅನುಪಸ್ಥಿತಿಯಲ್ಲಿ ಅಸ್ನಾಬಾ ಅವರು ಪ್ರಶಸ್ತಿ ಸ್ವೀಕರಿಸಿದರು. ಬುರ್ಕಿನಾ ಫಾಸೋ ದೇಶದ ಪ್ರತಿನಿಧಿ ಅಬ್ದುಲ್ಲ ಸ್ಯಾನ್ಪೋ ಗಾಂಬಿಯಾ, ಗಾಂಬಿಯಾ ಪ್ರತಿನಿಧಿ ಅಬಾಸ್ ಎಫ್ ಸೋಂಕೋ, ಸೆನೆಗಲ್ ಪ್ರತಿನಿಧಿ ಅಬ್ದು ಡಿಬಾ ಅವರು ತಮ್ಮ ದೇಶಗಳ ಕರೆನ್ಸಿ, ಹವಾಮಾನ, ಭಾಷೆ, ಕಲೆ, ಸಂಗೀತ, ಖ್ಯಾತ ತಾಣಗಳು, ಸಾಂಪ್ರದಾಯಿಕ ಉಡುಪು, ಪ್ರಸಿದ್ಧ ಖಾದ್ಯಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದರು.