ಬಾಗೇಪಲ್ಲಿ : ಪಟ್ಟಣದ 13 ನೇ ವಾರ್ಡಿನ ಸಂತೇ ತೋಪು (ಸಂತೆ ಮೈದಾನ) ಕಸಕಡ್ಡಿ ಮತ್ತಿತರೆ ತ್ಯಾಜ್ಯ ವಸ್ತುಗಳಿಂದ ತುಂಬಿ ತುಳುಕುತ್ತಿದೆ. ಕೊಳಚೆ ನೀರು ಈ ಸಂತೆ ಮೈದಾನ ವನ್ನು ರಾಡಿಯನ್ನಾಗಿ ಮಾಡಿದೆ, ನೊಣ, ಸೊಳ್ಳೆ, ಹೆಗ್ಗಣ, ಹಾವು, ಚೇಳು ಇತ್ಯಾದಿಗಳಿಂದ ಮುಕ್ತವನ್ನಾಗಿಸಿ ವ್ಯಾಪಾರ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿ, ಸಂತೆ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಹಳೆಯದನ್ನು ಕಳೆದುಕೊಂಡು, ಹೊಸದಕ್ಕೆ ಎದುರು ನೋಡುವ ಪರಿಪಾಠ ಕೆಲವರಲ್ಲಿ ಇರುತ್ತದೆ, ಅದೇ ರೀತಿಯಲ್ಲಿ ಪುರಸಭೆಯೂ ಆಗಿದೆ, ಒಂದು ಕಾಲದಲ್ಲಿ ಈ ಭಾಗದ ರೈತಾಪಿ ಜನರು ಬೆಳೆಯುತ್ತಿದ್ದ ತರಕಾರಿ ಮತ್ತಿತರೆ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತಿತ್ತು.
ತಾಲ್ಲೂಕಿನ ಗ್ರಾಮೀಣ ಪ್ರದೇಶದ ಎಲ್ಲಾ ಜನರ ಕೊಳ್ಳುವ ಹಾಗೂ ಮಾರುವ ಕೇಂದ್ರ ವಾಗಿತ್ತು. ಆದರೆ ಇಂದು ಅವ್ಯವಸ್ಥೆ ಗಳಿಂದ ಸಂತೆ ಸಂಸ್ಕೃತಿ ಮಾಯವಾಗುತ್ತಿದೆ. ಮೊದಲಿ ನಿಂದಲೂ ಹಳೇ ಮೈಸೂರು ಬ್ಯಾಂಕ್ ರಸ್ತೆಯ ಹುಣಸೆ ತೋಪಿನಲ್ಲಿ ಪ್ರತಿ ಸೋಮವಾರ ನಡೆಯುತ್ತಿತ್ತು. ಸಂತೆ ಹುಣಸೆ ತೋಪಿನಲ್ಲಿ ನಡೆಯುವುದರಿಂದ, ಹುಣಸೆ ತೋಪಿಗೆ ಸಂತೆ ತೋಪು ಎಂದು ಹೆಸರಾಗಿದೆ. ನೆರಳು, ಕುಡಿಯುವ ನೀರು ಹಾಗೂ ವ್ಯಾಪಾರಸ್ಥರು ತಮ್ಮ ಸರಕು ಸರಂಜಾಮಗಳನ್ನು ಇಳಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶ ಇದ್ದದ್ದರಿಂದ ಸಂತೆ ಬಹು ಜೋರಾಗಿಯೇ ನಡೆಯುತ್ತಿತ್ತು. ಈಗ ಸಂತೆ ಮೈದಾನದಲ್ಲಿ ಸ್ವಲ್ಪ ಜಾಗದಲ್ಲಿ ನೀರು ಶುದ್ಧೀಕರಣ ಘಟಕದ ಸ್ಥಾವರ ನಿರ್ಮಾಣವಾಗಿರುವುದರಿಂದ ಉಳಿದ ಸ್ಥಳದಲ್ಲಿ ಸಂತೆ ನಡೆಯುತ್ತಿದೆ.
ಹಬ್ಬ ಹರಿದಿನಗಳಲ್ಲಿ ಸಂತೆ ವಿಶೇಷವಾಗಿ ನಡೆಯುತ್ತಿತ್ತು. ಹಬ್ಬಕ್ಕೆ ಬೇಕಾದ ಹೊಸ ಬಟ್ಟೆ ಗಳು, ಹೋಳಿಗೆ, ಪಾಯಸ, ಕಜ್ಜಾಯ ಮಾಡಲು ಬೆಲ್ಲ, ಬೇಳೆ, ಮೈದಾ, ಗೋಧಿಹಿಟ್ಟು ಮಂತಾದ ವಸ್ತುಗಳನ್ನು ಕೊಳ್ಳಲು ತಂಡೋಪತಂಡವಾಗಿ ಮಕ್ಕಳು ಮರಿಗಳು ಜೊತೆಗೂಡಿ ಮನೆಯ ಯಜಮಾನರು ಬರುತ್ತಿದ್ದರು.
ಹಾಗಾಗಿ ಹಬ್ಬದ ಮುಂಚಿನ ಸಂತೆ ವಿಶೇಷವಾಗಿ ಕಳೆ ಕಟ್ಟುತ್ತಿತ್ತು. ಬಹು ವೈಭವವಾಗಿ ನಡೆಯುತ್ತಿದ್ದ ಸಂತೆ ಇಂದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಊರು ಅಭಿವೃದ್ಧಿಯಾಗಿ, ಪ್ರತಿಯೊಂದು ವಸ್ತುವಿಗೂ ಸಂತೆಗಳ ಮೇಲೆ ಅವಲಂಬಿತ ವಾಗುವ ಕಾಲ ಇಲ್ಲದಿರುವುದು ಒಂದು ಕಾರಣವಾದರೆ, ಈ ಸಂತೆಯ ಬಗ್ಗೆ ಗಮನ ನೀಡದ ಪುರಸಭೆಯು ಸಹ ಈ ಸಂತೆ ಹೀನವಾದ ಸ್ಥಿತಿಗೆ ಬಂದು ತಲುಪಿ, ಈಗ ಸ್ಥಗಿತವಾಗಿದೆ. ಈ ಹಿಂದೆ ಸಂತೆ ಮೈದಾನವನ್ನು ಅಭಿವೃದ್ಧಿ ಪಡಿಸಲು ಹಾಗೂ ಮಳೆ ಮತ್ತು ಬಿಸಿಲಿನ ರಕ್ಷಣೆ ಯಲ್ಲಿ ವ್ಯಾಪಾರ ಮಾಡಲು ಶೆಡ್ಗಳನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿ ಹರಡಿರುವ ಕೊಳಚೆ ಮತ್ತು ಕಸದಿಂದ ವ್ಯಾಪಾರ ಮಾಡಲು ಸಾಧ್ಯವಾಗದೆ ಈ ಶೆಡ್ಗಳು ನಿರುಪಯುಕ್ತ ವಾಗಿವೆ.
ಎತ್ತು ಎಮ್ಮೆಗಳನ್ನು ಕಟ್ಟಲು ಸುತ್ತಮುತ್ತಲಿರುವ ರೈತರು ಈ ಶೆಡ್ಗಳನ್ನು ಬಳಸಿಕೊಳ್ಳು ತ್ತಿದ್ದಾರೆ. ಈ ಸಂತೆ ತೋಪಿನಲ್ಲಿರುವ ಎಲ್ಲಾ ಕಸವನ್ನು ಬೇರೆಡೆಗೆ ಸಾಗಿಸಿ, ಸ್ಟಚ್ಛವಾದ ವಾತಾವರಣ ನಿರ್ಮಾಣ ಮಾಡಬೇಕು. ಒತ್ತುವರಿ ಮತ್ತು ಕಸ ಹಾಕುವುದನ್ನು ತಡೆಗಟ್ಟಲು ಸುತ್ತಲು ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಬೇಕು ಸಂತೆಯನ್ನು ನಡೆಸಲು ಅನುವು ಮಾಡಿಕೊಟ್ಟು, ಬಹು ವರ್ಷಗಳಿಂದ ನಡೆಯುತ್ತಿರುವ ಸಂತೆ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ. ಈ ¨ಗ್ಗೆ ಪುರಸಭ ಅಧಿಕಾರಿಗಳು ಗಮನಹರಿಸಬೇಕಾಗಿದೆ.