ಶಿಡ್ಲಘಟ್ಟ: ಸಮಾಜ ಸೇವೆ, ಶಿಕ್ಷಣ ಹಾಗೂ ದಾಸೋಹ ಪರಂಪರೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕು ತಂದ ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ (Dr. Sri Sri Shivakumar Swamiji)ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ನಗರ್ತ ಮಂಡಳಿಯ ಅಧ್ಯಕ್ಷ ಕೆ.ಆರ್.ಶಿವಶಂಕರ್ ಹೇಳಿದರು.
ನಗರದ ಶಿಡ್ಲಘಟ್ಟ ಮೊದಲನೇ ನಗರ್ತ ಪೇಟೆಯಲ್ಲಿರುವ ಶ್ರೀ ನಗರೇಶ್ವರ ದೇವಾಲಯ ಆವರಣದಲ್ಲಿ ಬುಧವಾರ ಶ್ರೀ ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಯಿತು.
ಈ ವೇಳೆ ಮಾತನಾಡಿದ ಶಿವಶಂಕರ್, ಶಿವಕುಮಾರ ಸ್ವಾಮೀಜಿಗಳು ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿದ ಮಹಾನ್ ವ್ಯಕ್ತಿ ಎಂದರು. ಅವರ ದಾಸೋಹ ಪರಂಪರೆ ಇಂದಿಗೂ ಜನರಿಗೆ ಪ್ರೇರಣೆಯಾಗಿದ್ದು, ಎಲ್ಲರೂ ಅದನ್ನು ಮುಂದುವರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Shidlaghatta News: ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಡಿವೈಎಸ್ಪಿ ಮುರಳೀಧರ್
ಮಂಡಳಿಯ ಉಪಾಧ್ಯಕ್ಷ ಎಸ್.ನಾಗರಾಜ್ ಮಾತನಾಡಿ, ಶಿಡ್ಲಘಟ್ಟದಲ್ಲಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಶಿವಕುಮಾರ ಸ್ವಾಮೀಜಿಗಳು ನಗರೇಶ್ವರ ದೇವಾಲಯಕ್ಕೆ ಸಂಬಂಧಿಸಿದ ನಗರೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿದ್ದು ಸ್ಥಳೀಯರ ನೆನಪಿ ನಲ್ಲಿ ಇಂದಿಗೂ ವಿಶೇಷ ಸ್ಥಾನ ಪಡೆದಿದೆ ಎಂದರು. ಆ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಸಿ.ಸುರೇಶ್ ಬಾಬು, ಕೆ.ಎಂ.ವಿನಾಯಕ, ಆರ್.ಮಲ್ಲಿಕಾರ್ಜುನ್, ಯುವಕ ಮಂಡಳಿ ಅಧ್ಯಕ್ಷ ಎಸ್.ಮಂಜುನಾಥ್, ಮುರಳಿ, ರೋಹಿತ್, ಸ್ಟುಡಿಯೋ ಎಸ್. ಮಂಜುನಾಥ್, ಮುಖೇಶ್, ಭರತ್, ರಕ್ಷಿತ್, ಪತ್ರಕರ್ತ ಎಸ್.ಮಾನಸ್, ಚೇತನ ಉಷಾ, ಮಧುರ,ದಿವ್ಯ, ಸೇರದಂತೆ ನಗರ್ತ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ ಪದಾಧಿ ಕಾರಿಗಳು ಉಪಸ್ಥಿತರಿದ್ದರು.