ಚಿಕ್ಕಬಳ್ಳಾಪುರ: ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ಕಾರ್ಮಿಕರಾಗಿರುವ ಹಿನ್ನೆಲೆ ಯಲ್ಲಿ ಪೂರ್ಣ ಪ್ರಮಾಣದಲ್ಲಿ ಸೌಲತ್ತುಗಳಿಂದ ವಂಚನೆಗೆ ಒಳಗಾಗುವಂತಾಗಿದೆ. ಸಂಘದ ಅಡಿಯಲ್ಲಿ ಸಂಘಟಿತರಾದರೆ ಸರ್ಕಾರದ ವಿವಿಧ ಸೌಲಭ್ಯಗಳು ಮತ್ತು ಹಕ್ಕುಗಳನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ(Guarantee Scheme Implementation Committee) ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್ ಕರೆ ನೀಡಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜೈ ಭಾರತ್ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ವತಿಯಿಂದ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಅಸಂಘಟಿತ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ಅನೇಕ ಕಲ್ಯಾಣಕಾರಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅವುಗಳ ಸದುಪಯೋಗ ಪಡೆಯಲು ವ್ಯಾಪಾರಿಗಳು ಮೊದಲು ಸಂಘಟಿತರಾಗಬೇಕು. ಸುಭದ್ರ ಸಂಘಟನೆ ಇದ್ದಾಗ ಮಾತ್ರ ಸರ್ಕಾರದ ಗಮನ ಸೆಳೆಯಲು ಹಾಗೂ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಸುಲಭವಾಗುತ್ತದೆ,” ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಸಮಗ್ರ ಪಟ್ಟಿಯನ್ನು ಜೈ ಭಾರತ್ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ವತಿಯಿಂದ ಸಲ್ಲಿಸಿದರೆ, ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಉತ್ತಮ ದರ್ಜೆಯ ಛತ್ರಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದ ಅವರು “ವ್ಯಾಪಾರಿಗಳ ಆರೋಗ್ಯ ಮತ್ತು ಜೀವನೋಪಾಯ ಎರಡನ್ನೂ ಕಾಪಾಡುವ ಉದ್ದೇಶದಿಂದ ಈ ನೆರವು ನೀಡಲಾಗುವುದು,” ಎಂದರು.
ಬೀದಿ ಬದಿ ವ್ಯಾಪಾರಿಗಳ ಬದುಕು ಸುಧಾರಣೆಗಾಗಿ ಸ್ಥಳೀಯ ಆಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ಅಗತ್ಯವಿದೆ. ಸಂಘಟಿತ ಶಕ್ತಿ ಮೂಲಕ ತಮ್ಮ ಸಮಸ್ಯೆ ಗಳನ್ನು ಪ್ರಸ್ತಾಪಿಸಿ, ಹಕ್ಕುಗಳನ್ನು ಪಡೆಯುವ ದಿಶೆಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳನ್ನು ಸಂರಕ್ಷಿಸುವ 2014ರ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ತಕ್ಷಣವೇ ವೆಂಡಿAಗ್ ಜೋನ್ಗಳನ್ನು ನಿರ್ಮಿಸಬೇಕು ಎಂದು ಜೈ ಭುವನೇಶ್ವರಿ ಬೀದಿ ಬದಿ ವ್ಯಾಪಾರಿ ಸಂಘದ ರಾಜ್ಯಾಧ್ಯಕ್ಷ ಸುರೇಶ್ ಆಗ್ರಹಿಸಿದರು.
2014ರ ಕಾಯ್ದೆಯ ಪ್ರಕಾರ, ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ವೆಂಡಿಂಗ್ ಜೋನ್ಗಳಲ್ಲಿ ಬೀದಿ ದೀಪ, ಗೋಡೆ ನಿರ್ಮಾಣ, ಪುರುಷ ಹಾಗೂ ಮಹಿಳೆಯ ರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಗಳನ್ನು ಕಲ್ಪಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಸರ್ಕಾರ ಕೂಡಲೇ ಈ ವ್ಯವಸ್ಥೆಗಳನ್ನು ಮಾಡಿಕೊಡಬೇಕು,” ಎಂದು ಒತ್ತಾಯಿಸಿದರು.
ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಅಂಗಡಿಗಳ ಎತ್ತಂಗಡಿ ಕಾರ್ಯಾಚರಣೆ ನಡೆಯುತ್ತಿದೆ. ಇದೇ ರೀತಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿಯೂ ಪಾದಚಾರಿ ಮಾರ್ಗ ನಿರ್ಮಾಣದ ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಕ್ರಮ ತಕ್ಷಣ ನಿಲ್ಲಬೇಕು,” ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳು ಎಲ್ಲರೂ ಒಂದೇ ಸಮುದಾಯದವರು. ಭಾಷೆ, ಬಣ್ಣ, ಧರ್ಮದ ಆಧಾರದಲ್ಲಿ ಭೇದಭಾವ ಮಾಡುವುದು ತಪ್ಪು ಎಂದು ಹೇಳಿದ ಅವರು, “ಅವತ್ತಿನ ಕೂಲಿ ಗಾಗಿ ದುಡಿಯುವ ವ್ಯಾಪಾರಿಗಳಿಂದ ಪೊಲೀಸರು, ಅಂಗಡಿ ಮಾಲೀಕರು, ರೌಡಿಗಳು ಮತ್ತು ಇತರರು ಹಣ ವಸೂಲಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದು, ಅವರ ಪರವಾಗಿ ಸರ್ಕಾರ ಸ್ಪಷ್ಟವಾದ ನೀತಿ ಹಾಗೂ ಕಾಯ್ದೆ ಜಾರಿಗೆ ತರದಿದ್ದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೈ ಭಾರತ್ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಅಸ್ಲಂ ಪಾಷ ಮಾತನಾಡಿ, “ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ನಮ್ಮ ಸಂಘಟನೆ ಯ ಪ್ರತಿನಿಧಿಗಳಿಗೆ ಸಹಕಾರ ನೀಡಬೇಕು. ಖಾಸಗಿ ಬಸ್ ನಿಲ್ದಾಣದ ಬಳಿ ತಕ್ಷಣವೇ ವೆಂಡಿಂಗ್ ಜೋನ್ ನಿರ್ಮಿಸಿ ವ್ಯಾಪಾರಿಗಳಿಗೆ ಶಾಶ್ವತ ಅವಕಾಶ ಕಲ್ಪಿಸಬೇಕು,” ಎಂದು ಮನವಿ ಮಾಡಿದರು.
ನಗರಸಭೆ ವತಿಯಿಂದ ನಿತ್ಯವೂ ವಸೂಲಿ ಮಾಡುತ್ತಿರುವ ಸುಂಕದಿಂದ ಬೀದಿ ಬದಿ ವ್ಯಾಪಾರಿಗಳಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದ ಅವರು ಸಂಘಟಿತ ಶಕ್ತಿಯಿಂದ ಹಕ್ಕುಗಳನ್ನು ಪಡೆದುಕೊಳ್ಳುವ ದಿಸೆಯಲ್ಲಿ ಎಲ್ಲರೂ ಒಂದಾಗಿ ಹೋರಾಟ ನಡೆಸ ಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸುರೇಶ್, ಕೃಷ್ಣ, ಅಸ್ಲಂಪಾಷಾ, ನಾಗ, ನರಸಿಂಹಮೂರ್ತಿ, ವೆಂಕಟೇಶ್, ಗೋವಿಂದರಾಜು ಸೇರಿ ಸಂಘಟನೆಯ ಪದಾಧಿಕಾರಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.