ಗೌರಿಬಿದನೂರು: ಕಳೆದ ವರ್ಷ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇನ್ನಿತರೆ ಕೃಷಿ ಸಲಕರಣೆಗಳ ವಿತರಣೆಯಲ್ಲಿನ ಲೋಪದೋಷಗಳ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿದ್ದವು,ಈ ಬಾರಿ ಆ ರೀತಿಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA K.H. Puttaswamy Gowda)ರು ಸಹಾಯಕ ಕೃಷಿ ನಿರ್ದೇಶಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದೊಂದೇ ಇಲಾಖೆಯ ಪ್ರಗತಿಪರಿಶೀಲನೆ ನಡೆಸಿ, ಲೋಪದೋಷಗಳನ್ನು ಪತ್ತೆ ಹಚ್ಚಿ ಅಂತಹ ಅಧಿಕಾರಿಗಳ ಮೈಚಳಿ ಬಿಡಿಸಿದರು.
ಶುದ್ಧನೀರು ಘಟಕ ಸುಸ್ಥಿತಿಯಲ್ಲಿಡಿ?
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಬೇಸಿಗೆಯ ಧಗೆ ವಿಪರೀತವಿದ್ದು, ಗ್ರಾಮೀಣ ಭಾಗದಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳು ಪದೇ ಪದೇ ದುರಸ್ತಿಯಾಗುತ್ತಿವೆ.ಹೀಗಾದಲ್ಲಿ ಜನತೆಗೆ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲವೆ? ಸ್ಥಳೀಯ ಗ್ರಾ.ಪಂ ಅಥವಾ ಗುತ್ತಿಗೆದಾರರ ವಿರುದ್ದ ಕ್ರಮ ವಹಿಸಿ ಘಟಕಗಳ ರಿಪೇರಿಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಕೆಎಚ್ಪಿ ಪೌಂಡೇಷನ್ ವತಿಯಿಂದ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಯಾವುದೇ ಸಮಸ್ಯೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ಘಟಕಗಳು ಹೀಗಾಗಲು ಕಾರಣವೇನು ಎಂದು ಪ್ರಶ್ನಿಸಿದರು.
ರೈತರಿಂದ ಹಣ ಪಡೆಯಬಾರದು!!!
ಬೆಸ್ಕಾಂ ಅಧಿಕಾರಿಗಳು ಬೇಸಿಗೆಯಲ್ಲಿ ರೈತರಿಗೆ ಲೋಡ್ ಶೆಡ್ಡಿಂಗ್ ಆಗದಂತೆ ಸೂಕ್ತ ಕ್ರಮ ವಹಿಸಿ, ಈಗಾಗಲೇ ಪ್ರತ್ಯೇಕ ಟಿಸಿ ಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಆಧ್ಯತೆಯ ಮೇರೆಗೆ ನೀಡಬೇಕಾಗಿದೆ. ಟಿಸಿ ಅಳವಡಿಸುವ ಗುತ್ತಿಗೆದಾರರು ರೈತರಿಂದ ಯಾವುದೇ ಹಣ ಪಡೆಯದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.
ಚುರುಕಾಗಿ ಕೆಲಸ ಮಾಡಿ?
ನಿರ್ಮಿತಿ ಕೇಂದ್ರದಿಂದ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ನಾಗರೀಕ ಬಳಕೆಗೆ ಮುಕ್ತವಾಗಿಡಬೇಕಿದೆ.ಕಾಮಗಾರಿಯ ಆರಂಭದಲ್ಲಿ ಅದಕ್ಕೆ ಅಗತ್ಯವಿರುವ ಅನುದಾನಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಿ ಅನುದಾನ ಪಡೆಯಬೇಕಾಗಿದೆ. ಶೀಘ್ರದಲ್ಲೇ ತಾ.ಪಂ ವಾಣಿಜ್ಯ ಮಳಿಗೆ ಮತ್ತು ಪತ್ರಕರ್ತರ ಭವನವನ್ನು ಪೂರ್ಣಗೊಳಿಸಬೇಕಾಗಿದೆ ಎಂದರು.
ರೋಗಿಗಳಿಂದ ಹಣ?
ನಂತರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮಿಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಆಸ್ಪತ್ರೆಗೆ ಬರುವ ರೋಗಿಗಳ ಹತ್ತಿರ ಹಣವನ್ನು ಸುಲಿಗೆ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ,ನೀವುಗಳು ಸುಧಾರಿಸಿಕೊಳ್ಳದಿದ್ದರೆ ನಿಮ್ಮ ವಿರುದ್ದ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಾಗೃತೆ ವಹಿಸಿ, ಪ್ರತೀ ವಾರ್ಡ್ಗೆ ಅಗತ್ಯಕ್ಕನುಸಾರವಾಗಿ ನೀರಿನ ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇ ರೀತಿ ದುರಸ್ತಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ ತಿಳಿಸಿದರು.
ಮದ್ಯದ ಅಂಗಡಿ ಹೆಚ್ಚಬಾರದು!!
ಅಬಕಾರಿ ಇಲಾಖೆಯ ಇಸ್ಪೆಕ್ಟರ್ ಮಂಜುನಾಥ್ರ ಮಾಹಿತಿಯಂತೆ ಕಳೆದ ವರ್ಷ ಕ್ಷೇತ್ರದಲ್ಲಿ ಎರಡು ಹೊಸ ಮದ್ಯದ ಅಂಗಡಿಗಳು ಆರಂಭವಾಗಿದ್ದು, ಮತ್ತೆರಡು ಅಂಗಡಿಗಳ ಕಟ್ಟಡ ಕಾಮಗಾರಿ ನಡೆಯುತ್ತಿವೆ ಎಂದು ಮಾಹಿತಿ ನೀಡುತ್ತಿದ್ದಂತೆ ಗರಂ ಆದ ಶಾಸಕರು ಕ್ಷೇತ್ರದಲ್ಲಿ ಈಗಾಗಲೇ ಮದ್ಯದ ಅಂಗಡಿಗಳು ಮಿತಿ ಮೀರಿ ನಡೆಯುತ್ತಿವೆ, ಪ್ರತೀ ವರ್ಷ ಇವುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದರೆ ಜನರನ್ನು ನಿಯಂತ್ರಣ ಮಾಡುವುದು ಹೇಗೆ? ಮುಂದೆ ನನ್ನ ಗಮನಕ್ಕೆ ಬಾರದಂತೆ ಯಾವುದೇ ಮದ್ಯದ ಅಂಗಡಿಗಳು ತೆರೆಯಬಾರದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾ.ಪಂ ಇಒ ಜಿ.ಕೆ.ಹೊನ್ನಯ್ಯ, ತಹಸೀಲ್ದಾರ್ ಕೆ.ಎಂ.ಅರವಿಂದ, ನಗರಸಭೆ ಆಯುಕ್ತ ರಾದ ಕೆ.ಜಿ.ರಮೇಶ್, ಸಿಪಿಐ ಅಂಜನ್ ಕುಮಾರ್, ತಾ.ಪಂ ವ್ಯವಸ್ಥಾಪಕರಾದ ಆರ್. ಎನ್.ಬಾಲ ಕೃಷ್ಣ ಸೇರಿದಂತೆ ತಾಲ್ಲೂಕು ಮಟ್ಟದ ಬಹುತೇಕ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.