ಗೌರಿಬಿದನೂರು: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಭಕ್ತಿ ಪೂರ್ವಕವಾಗಿ ಕೈವಾರ ತಾತಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಜಯಂತಿ ಅಂಗವಾಗಿ ಸದ್ಗುರು ತಾತಯ್ಯನವರ ಭಾವಚಿತ್ರಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಕೆ.ಎಂ.ಅರವಿಂದ ಅವರು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಕೈವಾರ ತಾತಯ್ಯನವರು ಜಾತಿ, ಕುಲ,ಮತ, ಭೇದ ಭಾವವಿಲ್ಲದೆ ಸಮಾಜದಲ್ಲಿ ಸಮಾನತೆಯನ್ನು ತರಬೇಕೆಂದು ಶ್ರಮಿಸಿದವರು.
ಯತೀಂದ್ರರ ತತ್ವ ಸಿದ್ಧಾಂತವನ್ನು ಕೇವಲ ಜಯಂತಿಗೆ ಸೀಮಿತವಾಗದೆ , ನಾವುಗಳು ಪ್ರತಿ ದಿನ ಅವರ ಆಧ್ಯಾತ್ಮಿಕ ಜೀವನದ ಆದರ್ಶಗಳನ್ನು ಪಾಲಿಸಬೇಕು. ಅದೇ ರೀತಿಯಾಗಿ ಮಾ.14ರಂದು ಕೈವಾರ ತಾತಯ್ಯನವರ 300ನೇ ಜಯಂತೋತ್ಸವವನ್ನು ಸಮಾಜದ ಎಲ್ಲಾ ಸಮುದಾಯದವರು ಒಗ್ಗೂಡಿ ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಕರೆ ನೀಡಿದರು.
ಇದನ್ನೂ ಓದಿ: Gauribidanur News: ಚನ್ನಕೇಶವ ದೇವಾಲಯದಲ್ಲಿ ಪ್ರತಿಷ್ಟಾಪನೆಗೊಳ್ಳುವ ನಂದಿ ವಿಗ್ರಹಕ್ಕೆ ಪೂಜೆ
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ತೀರ್ಥ ಶಾಲೆಯ ಅಧ್ಯಕ್ಷ ಪ್ರೊ.ಕೆ. ವಿ. ಪ್ರಕಾಶ್ ಮಾತನಾಡಿ, ಕೈವಾರ ತಾತಯ್ಯ ಅವರು ಶ್ರೇಷ್ಠ ಸಂತರಾಗಿ, ಸಮಾಜ ಸುಧಾರಕರಾಗಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದರೊಂದಿಗೆ ಸಮಾಜ ಪರಿವರ್ತನೆ ಮಾಡಲು ಪರಿಶ್ರಮ ಪಟ್ಟ ತ್ರಿಕಾಲ ಬ್ರಹ್ಮಜ್ಞಾನಿ.
ಕೈವಾರ ತಾತಯ್ಯನವರು ದ್ವಿಭಾಷಾ ಕವಿಯಾಗಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸುಮಾರು 167 ಕೀರ್ತನೆಗಳನ್ನು ಮತ್ತು ಇತರೆ ಕೃತಿ ರತ್ನಗಳನ್ನು ಸಂರಚನೆ ಮಾಡಿ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿರುತ್ತಾರೆ. ವಿಗ್ರಹಾರಾಧನೆಯನ್ನು ಖಂಡಿಸಿ, ಮೌಡ್ಯದ ಆಚರಣೆಗಳನ್ನು ತೊಲಗಿಸಬೇಕೆಂದು ಪ್ರಯತ್ನಪಟ್ಟ ಶ್ರೇಷ್ಠ ಸಾಧಕ ಯೋಗಿ ಯಷ್ಟೇ ಅಲ್ಲದೆ ತಾತಯ್ಯನವರು ಸಮಸ್ತ ಸಮುದಾಯಗಳ ಜೀವ ಪರ ಕಾಳಜಿಯ ಸಂತ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯರಾದ ವಿ. ರಮೇಶ್,ಮಾರ್ಕೆಟ್ ಮೋಹನ್, ಕೆ.ಎಸ್. ಅನಂತರಾಜು, ಸಮುದಾಯದ ಮುಖಂಡರಾದ ಜಿ.ಎಲ್. ಅಶ್ವತ್ಥ ನಾರಾಯಣ, ವಿ. ರವೀಂದ್ರನಾಥ್, ಎಚ್.ವಿ. ವೆಂಕಟೇಶ್, ಜಿ.ಎ.ಪ್ರದೀಪ್, ವೆಂಕಟಾದ್ರಿ,ಗೌರಿ ಕಾಫಿ ರಮೇಶ್, ರಂಗನಾಥ್ ಮತ್ತು ಇಲಾಖಾ ಅಧಿಕಾರಿಗಳು ಹಾಗೂ ತಾತಯ್ಯನವರ ಭಕ್ತ ವೃಂದದವರು ಉಪಸ್ಥಿತರಿದ್ದರು.